ಕರ್ನಾಟಕ

karnataka

ಹಾವೇರಿ ನಗರಸಭೆಯಿಂದ ಸ್ವಚ್ಛತಾ ಕಾರ್ಯಕ್ರಮ; ಖಾಲಿ ಬಿದ್ದ ಸ್ಥಳದ ಮಾಲೀಕರಿಂದ ಹಣ ವಸೂಲಿ

By ETV Bharat Karnataka Team

Published : Jan 4, 2024, 3:46 PM IST

ಹಾವೇರಿ ಜಿಲ್ಲೆಯಲ್ಲಿ ಬೇಕಾಬಿಟ್ಟಿಯಾಗಿ ಬಿಟ್ಟಿರುವ ಸೈಟ್‌ಗಳ ಸ್ವಚ್ಛತೆಗೆ ಮುಂದಾಗಿದೆ ನಗರಸಭೆ ಮುಂದಾಗಿದೆ.

ಹಾವೇರಿ
ಸ್ವಚ್ಛತಾ ಕಾರ್ಯಕ್ರಮ

ನಗರದಲ್ಲಿ ಆಡಳಿತದಿಂದ ಸ್ವಚ್ಛತಾ ಕಾರ್ಯಕ್ರಮ; ಖಾಲಿ ಬಿದ್ದ ಸ್ಥಳದ ಮಾಲೀಕರಿಂದ ಬಳಿಕ ಹಣ ವಸೂಲಿ

ಹಾವೇರಿ:ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಒಂದು ಕಾಲದಲ್ಲಿ ಏಲಕ್ಕಿ ಕಂಪು ಸೂಸುತ್ತಿತ್ತು. ಹೀಗಾಗಿಯೇ ಹಾವೇರಿ ನಗರಕ್ಕೆ ಏಲಕ್ಕಿ ಕಂಪಿನ ನಗರಿ ಎಂದು ಕರೆಯಲಾಗುತ್ತಿದೆ. ಜಿಲ್ಲಾ ಕೇಂದ್ರವಾದ ಮೇಲೆ ನಗರ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಬೇಕಾದ ಅಗತ್ಯ ಕಟ್ಟಡಗಳು, ಕಚೇರಿಗಳು ಹಾವೇರಿಯ ಸುತ್ತಮುತ್ತ ತಲೆ ಎತ್ತಿವೆ. ಇನ್ನು ಹಾವೇರಿಗೆ ಆಗಮಿಸುವ ಅಧಿಕಾರಿಗಳಿಗೆ ವಸತಿ ಸಂಕೀರ್ಣಗಳು ಸೇರಿದಂತೆ ಹಲವು ಅಗತ್ಯ ಕಟ್ಟಡಗಳ ನಿರ್ಮಾಣ ಸಹ ನಡೆದಿದೆ. ಈ ಮಧ್ಯೆ ಜಿಲ್ಲಾಕೇಂದ್ರ ಹಾವೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಬಂಗಾರದ ಬೆಲೆ ಬಂದಿದೆ.

ಎರಡು ದಶಕಗಳ ಹಿಂದೆ ಲಕ್ಷ ರೂಪಾಯಿಯಲ್ಲಿ ಮಾರಾಟವಾಗುತ್ತಿದ್ದ ಸೈಟ್‌ಗಳು ಇದೀಗ ಅದರ ಹತ್ತು, ಇಪ್ಪತ್ತು ಪಟ್ಟು ಹೆಚ್ಚಿಗೆ ಬೆಲೆಗೆ ಬಿಕರಿ ಆಗುತ್ತಿವೆ. ಹಾವೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿನ ಖಾಲಿ ಜಾಗಗಳನ್ನು ಖರೀದಿ ಮಾಡಲು ಜನ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ. ಕೆಲವರು ಸೈಟ್ ಖರೀದಿಸಿ ಮನೆ ಕಟ್ಟುತ್ತಿದ್ದರೆ, ಇನ್ನೂ ಕೆಲವು ಸೈಟ್​ಗಳು ಖಾಲಿ ಖಾಲಿ ಇವೆ. ಇಂತಹ ಖಾಲಿ ಸೈಟ್‌ಗಳಲ್ಲಿ ಮುಳ್ಳುಪೊದೆಗಳು ಬೆಳೆದಿವೆ. ಕಸದರಾಶಿ ಸೇರಿದಂತೆ ಅಸ್ವಚ್ಛತೆ ಇಲ್ಲಿ ರಾರಾಜಿಸುತ್ತಿದೆ. ಜೊತೆಗೆ ಈ ಜಾಗಗಳು ಬಿಡಾಡಿ ದನ ಹಂದಿಗಳ ಅವಾಸ ಸ್ಥಾನಗಳಾಗಿವೆ.

ಇನ್ನು, ಕೆಲ ಸೈಟ್‌ಗಳು ಮಾಲೀಕರ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಪರಿಣಾಮ ಸುಂದರವಾಗಿ ಕಾಣಬೇಕಿದ್ದ ಹಾವೇರಿ ನಗರದ ಸೌಂದರ್ಯ ದಿನದಿಂದ ದಿನಕ್ಕೆ ಹಾಳಾಗಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಹಾವೇರಿ ನಗರಸಭೆ ಇದೀಗ ಬೇಕಾಬಿಟ್ಟಿಯಾಗಿ ಬಿಟ್ಟಿರುವ ಸೈಟ್‌ಗಳ ಸ್ವಚ್ಛತೆಗೆ ಮುಂದಾಗಿದೆ. ಸೈಟ್ ಸ್ವಚ್ಛಗೊಳಿಸುವ ಕುರಿತಂತೆ ಧ್ವನಿವರ್ಧಕಗಳಲ್ಲಿ ಅನೌನ್ಸ್​ ಮಾಡಲಾಗಿದೆ. ಈ ಕುರಿತಂತೆ ಸೈಟ್ ಮಾಲೀಕರಿಗೆ ನೋಟಿಸ್ ಸಹ ನೀಡಲಾಗಿದೆ. ನೋಟಿಸ್ ಪಡೆದ ಹಲವು ಮಾಲೀಕರು ತಮ್ಮ ತಮ್ಮ ಸೈಟ್ ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ ಸ್ವಚ್ಛಗೊಳಿಸದ ಮಾಲೀಕರ ಸೈಟ್‌ಗಳನ್ನು ನಗರಸಭೆಯೇ ಸ್ವಚ್ಛಗೊಳಿಸುತ್ತಿದೆ. ಈ ರೀತಿ ಸೈಟ್ ಸ್ವಚ್ಛಗೊಳಿಸಿದ ನಂತರ ಸೈಟ್‌ ಮಾಲೀಕರ ಹೆಸರಿನಲ್ಲಿ ಖರ್ಚು ಹೇರಲಾಗುತ್ತದೆ. ಸೈಟ್​ ಸ್ವಚ್ಛಗೊಳಿಸಲು ತಗುಲಿದ ವೆಚ್ಚವನ್ನು ಮಾಲೀಕರ ಖಾತೆಗೆ ಸೇರಿಸಲಾಗುತ್ತದೆ. ಈ ರೀತಿ ಸೈಟ್​ ಮೇಲೆ ಹಾಕುವ ಖರ್ಚಿನ ಹಣವನ್ನು ತೆರಿಗೆ ರೂಪದಲ್ಲಿ ಅಥವಾ ಜಾಗ ಮಾರುವಾಗ, ಮನೆ ಕಟ್ಟುವಾಗ ಸೇರಿದಂತೆ ವಿವಿಧ ಕಾರಣಗಳಿಗೆ ನಗರಸಭೆಗೆ ಆಗಮಿಸುವ ಸೈಟ್ ಮಾಲೀಕರಿಗೆ ತಿಳಿಸಲಾಗುತ್ತದೆ.

ನಗರಸಭೆ ಈ ರೀತಿ ಸ್ವಚ್ಛಗೊಳಿಸಿ ಖರ್ಚು ಖಾತೆಗೆ ಹಾಕುತ್ತದೆ ಎನ್ನುತ್ತಿದ್ದಂತೆ ಹಾವೇರಿ ಖಾಲಿ ಸೈಟ್ ಮಾಲೀಕರು ಇದೀಗ ತಮ್ಮ ಸೈಟ್ ಸ್ವಚ್ಛಗೊಳಿಸುತ್ತಿದ್ದಾರೆ. ಈ ರೀತಿ ಸೈಟ್ ಬೇಕಾಬಿಟ್ಟಿಯಾಗಿ ಬಿಟ್ಟಿರುವ ಮಾಲೀಕರು ತಮ್ಮ ತಮ್ಮ ಸೈಟ್ ಸ್ವಚ್ಛಗೊಳಿಸಿ ತಂತಿಬೇಲಿ ಹಾಕುತ್ತಿದ್ದಾರೆ. ನಗರಸಭೆಯ ಈ ಕಾರ್ಯಕ್ಕೆ ಹಾವೇರಿ ನಿವಾಸಿಗಳು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಂದು ಒಳ್ಳೆಯ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ನಾಗರೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕೂಲಿಗಾಗಿ ಕೇರಳಕ್ಕೆ ಗುಳೆ: ಶಾಲೆ ಬಿಟ್ಟು ಪಾಲಕರ ಜೊತೆ ಹೊರಟ ಮಕ್ಕಳು

ABOUT THE AUTHOR

...view details