ಕರ್ನಾಟಕ

karnataka

By

Published : Mar 17, 2023, 8:46 PM IST

ETV Bharat / state

ಆರ್ ಶಂಕರ್ ಮನೆ ಮೇಲಿನ ವಾಣಿಜ್ಯ ತೆರಿಗೆ ದಾಳಿ ಸಂಬಂಧ ಪ್ರಕರಣ ದಾಖಲು

ಪರಿಷತ್​ ಸದಸ್ಯ ಆರ್. ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ಕುರಿತಂತೆ ರಾಣೆಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

case-filed-on-commercial-tax-department-raid-on-r-shankar-home
ಆರ್ ಶಂಕರ್ ಮನೆ ಮೇಲಿನ ವಾಣಿಜ್ಯ ತೆರಿಗೆ ದಾಳಿ ಸಂಬಂಧ ಪ್ರಕರಣ ದಾಖಲು

ಹಾವೇರಿ :ವಿಧಾನ ಪರಿಷತ್​ ಸದಸ್ಯ ಆರ್ ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ್ದ ದಾಳಿ ಸಂಬಂಧ ರಾಣೆಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಣೆಬೆನ್ನೂರು ತಹಸೀಲ್ದಾರ್ ಗುರುಬಸವರಾಜ ಅವರು ನೀಡಿದ್ದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಧಾನ ಪರಿಷತ್​ ಸದಸ್ಯ ಆರ್. ಶಂಕರ್ ಅವರು ಚುನಾವಣೆ ಸಮೀಪ ಇರುವ ದಿನಗಳಲ್ಲಿ ಜನರಿಗೆ ನೀಡಲು ಸೀರೆ, ಬ್ಯಾಗ್, ತಟ್ಟೆ, ಲೋಟಗಳನ್ನು​ ಸಂಗ್ರಹಿಸಿಟ್ಟಿರುವುದು ಅಧಿಕಾರಿಗಳ ದಾಳಿ ವೇಳೆ ಕಂಡುಬಂದಿದೆ. ಹೀಗಾಗಿ ಶಂಕರ್​​ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಕಲಂ 171ಇ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಾರ್ಚ್ 14ರ ರಾತ್ರಿ ಆರ್. ಶಂಕರ್​​ ನಿವಾಸದ ಮೇಲೆ ಉಪ ವಿಭಾಗಾಧಿಕಾರಿ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅಧಿಕಾರಿಗಳ ದಾಳಿ ಬೆನ್ನಲ್ಲೇ ಶಂಕರ್‌ ಮನೆ ಬಳಿ ಕೆಲ ಅಭಿಮಾನಿಗಳು, ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಚುನಾವಣೆಯಲ್ಲಿ ಶಂಕರ್​​ ಗೆಲುವಿನಿಂದ ಭಯಗೊಂಡ ಕೆಲವರು ದಾಳಿ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದ ಆರ್​. ಶಂಕರ್​, ನಾನು ಬಡ ಜನರ ಪರವಾಗಿ ಕೆಲಸ ಮಾಡಬಾರದು ಎಂಬ ದುರುದ್ದೇಶದಿಂದ ಹೀಗೆಲ್ಲ ಮಾಡಿಸಲಾಗುತ್ತಿದೆ. ಕೋವಿಡ್​​ ಕಾಲದಲ್ಲಿ ಶಾಲಾ ಮಕ್ಕಳಿಗೆ ಸಹಾಯ ಮಾಡಲಾಗಲಿಲ್ಲ. ಹೀಗಾಗಿ ಈಗ ಆರ್. ಶಂಕರ್ ಟ್ರಸ್ಟ್ ವತಿಯಿಂದ ದಾನ, ಧರ್ಮ ಮಾಡುತ್ತ ಬಂದಿದ್ದೇನೆ. ವಿದ್ಯಾರ್ಥಿಗಳಿಗೆ ಬ್ಯಾಗ್​​ ಹಾಗೂ ಮಹಿಳೆಯರಿಗೆ ಸೀರೆ ನೀಡಿದ್ದೇನೆ ಎಂದು ಹೇಳಿದ್ದರು.

ಅಲ್ಲದೆ, ಯಾವುದೇ ಕಪ್ಪು ಹಣ ಬಳಸಿ ಈ ಕಾರ್ಯ ಮಾಡುತ್ತಿಲ್ಲ. ನನ್ನ ಬಳಿ ಎಲ್ಲದಕ್ಕೂ ದಾಖಲೆಗಳಿವೆ, ಜಿಎಸ್​​ಟಿ ಪಾವತಿ ಮಾಡಿಯೇ ಎಲ್ಲ ವಸ್ತುಗಳನ್ನೂ ಖರೀದಿಸಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಗೆ ದಾಖಲೆ ನೀಡುತ್ತೇನೆ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ. ವಸ್ತುಗಳ ಖರೀದಿ ಮಾಡಿರುವ ಕುರಿತಂತೆ ಎಲ್ಲ ದಾಖಲೆ ಸಲ್ಲಿಕೆ ಮಾಡುತ್ತೇನೆ ಎಂದಿದ್ದರು.

ಇದನ್ನೂ ಓದಿ:ಪರಿಷತ್‌ ಸದಸ್ಯ ಆರ್​ ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಆಯುಕ್ತರ ದಾಳಿ

ABOUT THE AUTHOR

...view details