ಹಾವೇರಿ : ಸಾಮಾನ್ಯವಾಗಿ ರೈತರು ಎತ್ತುಗಳನ್ನು ಬಳಸಿಕೊಂಡು ಭೂಮಿಯನ್ನು ಉಳುಮೆ ಮಾಡಿ ಬೇಸಾಯ ಮಾಡುವುದನ್ನು ನೋಡಿರುತ್ತೇವೆ. ಇನ್ನೂ ಕೆಲವು ರೈತರು ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣಗಳನ್ನು ಬಳಸಿ ಉಳುಮೆ ಮಾಡುತ್ತಾರೆ. ಆದರೆ ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದ ರೈತರೋರ್ವರು ಕೃಷಿ ಕಾರ್ಯಕ್ಕೆ ಟಗರುಗಳನ್ನು ಬಳಸುತ್ತಿದ್ದಾರೆ. ಜಲ್ಲಾಪುರದ ಶೇಖಪ್ಪ ಕುರುಬರ ಎಂಬ ರೈತ ತಮ್ಮ ಒಂದೂವರೆ ಎಕರೆ ಜಮೀನಿನ ಉಳುಮೆಗೆ ಕನಕ ಮತ್ತು ರಾಯಣ್ಣ ಹೆಸರಿನ ಟಗರುಗಳನ್ನು ಬಳಕೆ ಮಾಡುತ್ತಿದ್ದಾರೆ.
ತನ್ನ ಒಂದೂವರೆ ಎಕರೆಯಲ್ಲಿ ಸೋಯಾಬಿನ್ ಬೆಳೆ ಹಾಕಿರುವ ರೈತ ಜಮೀನಿನಲ್ಲಿ ಕಳೆ ಇಲ್ಲದಂತೆ ಎಡೆಕುಂಟಿ ಹೊಡೆಯಲು ಟಗರುಗಳನ್ನು ಬಳಕೆ ಮಾಡುತ್ತಿದ್ದಾರೆ. ಕಳೆದ 9 ತಿಂಗಳ ಹಿಂದೆ ಕುರುಬರ ದೊಡ್ಡಿಯಲ್ಲಿ ಈ ಟಗರುಗಳನ್ನು ಖರೀದಿಸಿರುವ ಶೇಖಪ್ಪ, ತಲಾ 6500 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಈ ಟಗರುಗಳನ್ನು ಶೇಖಪ್ಪ ಅವರು ತಮ್ಮ ಮಕ್ಕಳಂತೆ ಸಾಕಿದ್ದು, ಅವುಗಳಿಗೆ ಬೇಕಾದ ಹಿಂಡಿ, ಬೂಸಾ ಸೇರಿದಂತೆ ಮೊದಲಾದ ಪೌಷ್ಟಿಕ ಆಹಾರಗಳನ್ನು ನೀಡುತ್ತಾರೆ. ಆರಂಭದಲ್ಲಿ ಚಿಕ್ಕ ಬಂಡಿಗೆ ಟಗರುಗಳನ್ನು ಕಟ್ಟಿ ಅಭ್ಯಾಸ ಮಾಡಿಸಿದ್ದಾರೆ. ಆಮೇಲೆ ನೀರು ತರುವ ಬಂಡಿಯನ್ನು ಕುರಿಗಳಿಗೆ ಕಟ್ಟಿ ಅಭ್ಯಾಸ ಮಾಡಿಸಿದ್ದಾರೆ.