ಕರ್ನಾಟಕ

karnataka

ETV Bharat / state

ಹಾವೇರಿಯಲ್ಲೊಬ್ಬ ಪಕ್ಷಿ ಪ್ರೇಮಿ.. 14 ವರ್ಷಗಳಿಂದ ಪಕ್ಷಿಗಳಿಗೆ ನಿತ್ಯ ಆಹಾರ ನೀರು ಒದಗಿಸುವ ದಾನಿ..

ಅರಿಸಿ ಬರುವ ಸಾವಿರಾರೂ ಪಕ್ಷಿಗಳಿಗೆ ದಿನ ನಿತ್ಯ ಹಾವೇರಿ ನಗರದ ಬೇಕರಿ ಉದ್ಯಮಿ ತಿಕ್ಮಾರಾಮ ಚೌಧರಿ ಅವರು ಐದರಿಂದ ಏಳು ಕೆ ಜಿ ಆಹಾರ, ನೀರು ಒದಗಿಸುತ್ತಿದ್ದಾರೆ. ಈ ಕುರಿತು ವರದಿ ಇಲ್ಲಿದೆ.

By ETV Bharat Karnataka Team

Published : Nov 17, 2023, 5:09 PM IST

Updated : Nov 17, 2023, 5:45 PM IST

bird lover in haveri
ಹಾವೇರಿಯಲ್ಲೊಬ್ಬರು ಪಕ್ಷಿಪ್ರೇಮಿ

ಹಾವೇರಿಯಲ್ಲೊಬ್ಬ ಪಕ್ಷಿ ಪ್ರೇಮಿ

ಹಾವೇರಿ: ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಮುಂದುವರಿದಂತೆ ಪಕ್ಷಿಗಳ ಸಂಕುಲ ಅಳಿವಿನಂಚಿನಲ್ಲಿದೆ. ಪಕ್ಷಿಗಳಿಲ್ಲದ ಪ್ರಪಂಚವನ್ನು ಉಹಿಸಿಕೊಳ್ಳುವುದು ಅಸಾಧ್ಯ. ಪರಾಗಸ್ಪರ್ಶ, ಬೀಜಪ್ರಸರಣ, ಪೀಡೆಕೀಟ ನಿಯಂತ್ರಣದಂತಹ ಹತ್ತಾರು ಬಗೆಯ ನೈಸರ್ಗಿಕ ಸೇವೆ ಒದಗಿಸುವ ಪಕ್ಷಿಗಳು ಪರೋಪಕಾರಿ ಜೀವಿಗಳು. ಇಂತಹ ಪಕ್ಷಿ ಸಂಕುಲ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವೂ ಹೌದು.

ಆದರೆ, ಇಲ್ಲೊಬ್ಬರು ಪಕ್ಷಿಪ್ರೇಮಿ ಕಳೆದ 14 ವರ್ಷಗಳಿಂದ ಪಕ್ಷಿಗಳಿಗೆ ಆಹಾರ ನೀಡುತ್ತ ಅವುಗಳ ಸಂರಕ್ಷಣೆಗೆ ನಿಂತು ಮಾದರಿಯಾಗಿದ್ದಾರೆ. ಏಲಕ್ಕಿ ನಗರಿ ಖ್ಯಾತಿಯ ಹಾವೇರಿ ನಗರದ ನಿವಾಸಿ ತಿಕ್ಮಾರಾಮ ಚೌಧರಿ ಸಾವಿರಾರೂ ಪಕ್ಷಿಗಳಿಗೆ ನಿತ್ಯ ಆಹಾರ ನೀರು ಒದಗಿಸುತ್ತಿರುವರಾಗಿದ್ದಾರೆ. ರಾಜಸ್ಥಾನದಿಂದ ಆಗಮಿಸಿ ಹಾವೇರಿ ನಗರದಲ್ಲಿ ಬೇಕರಿ ಉದ್ದಿಮೆ ನಡೆಸುತ್ತಿರುವ ತಿಕ್ಮಾರಾಮ ಚೌಧರಿ ಅವರು ದಿನನಿತ್ಯ ಪಕ್ಷಿಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಆರಂಭದಲ್ಲಿ ಬೊಗಸೆಯಲ್ಲಿ ಆಹಾರ ಹಾಕುತ್ತಿದ್ದ ತಿಕ್ಮಾರಾಮ, ಈಗ ದಿನಕ್ಕೆ ಐದರಿಂದ ಏಳು ಕೆ ಜಿ ಆಹಾರ ಪಕ್ಷಿಗಳಿಗೆ ಮೀಸಲಿಟ್ಟಿದ್ದಾರೆ.

ಬೆಳಗಿನಿಂದ ಸಂಜೆಯವರೆಗೆ ಪಕ್ಷಿಗಳಿಗೆ ಆಹಾರ ನೀರು : ಬೇಕರಿ ಮುಂದೆ ಇರುವ ಮನೆಯ ಚಿಕ್ಕ ಕೊಠಡಿ ಮೇಲಿನ ಹಂಚಿನ ಮೇಲೆ ಆಹಾರ ಹಾಕುವರು. ಆಹಾರ ಹಾಕುತ್ತಿದ್ದಂತೆ ಆಕಾಶದಲ್ಲಿ ಹಾರುವ ಹಕ್ಕಿಗಳು ಹಿಂಡು ಹಿಂಡಾಗಿ ಸುತ್ತಮುತ್ತ ಒಂದು ಸುತ್ತು ಗಿರಕಿಹೊಡೆದು ಆಹಾರ ತಿನ್ನಲು ಹಂಚಿನ ಮನೆ ಮೇಲೆ ಬರುತ್ತವೆ. ಅಲ್ಲಿನ ಸಮೀಪದ ಮರಗಳ ಟೊಂಗೆಗಳ ಮೇಲೆ ಮನೆಗಳ ಮಾಳಿಗೆಗಳ ಮೇಲೆ ಬೇಕರಿ ಮುಂದಿರುವ ವಿದ್ಯುತ್ ತಂತಿಗಳ ಮೇಲೆ ಸಾಲು ಸಾಲಾಗಿ ಕುಳಿತುಕೊಳ್ಳುವ ಪಕ್ಷಿಗಳು ನಂತರ ಹಂಚಿನ ಮೇಲೆ ಹಾಕಿರುವ ಆಹಾರ ತಿನ್ನುತ್ತವೆ.

ಪಕ್ಷಿಗಳು

ಇದು ಮುಂಜಾನೆ 6 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಆಹಾರ ದಾಸೋಹ ಮುಂದುವರಿಯುತ್ತೆ. ಪಕ್ಷಿಗಳು ಆಹಾರ ಖಾಲಿ ಮಾಡಿದಂತೆ ತಿಕ್ಮಾರಾಮ್ ಆಹಾರ ಹಾಕುತ್ತಲೇ ಇರುತ್ತಾರೆ. ಅಲ್ಲದೇ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ನೀರಿನ ವ್ಯವಸ್ಥೆ ಸಹ ಹಂಚಿನ ಮೇಲೆ ವ್ಯವಸ್ಥೆ ಮಾಡಿದ್ದಾರೆ. ಮುಂಜಾನೆ ಹಕ್ಕಿಗಳ ಹಿಂಡುಗಳು ಆಗಮಿಸಿ ಆಹಾರ ತಿನ್ನುತ್ತವೆ. ಮೊದ ಮೊದಲು ಆಹಾರ ಇರುವ ಮನೆ ಸುತ್ತ ಸುತ್ತು ಹಾಕುವ ಪಕ್ಷಿಗಳು ಆಹಾರ ಇರುವುದು ಖಚಿತ ಆಗುತ್ತಿದ್ದಂತೆ ಹಂಚಿನ ಮೇಲೆ ಇಳಿದು ಆಹಾರ ತಿನ್ನುತ್ತವೆ.

ಆಹಾರ ಅರಸಿ ಬರುವ ವಿವಿಧ ಪಕ್ಷಿಗಳು: ಗುಬ್ಬಿ, ಪಾರಿವಾಳ, ಚಿಟಗುಪ್ಪಿ,ಕಾಗೆ, ಗೊರವಂಕ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಆಹಾರ ಅರಸಿ ಬರುತ್ತವೆ. ಗಂಟೆಗೊಮ್ಮೆ ಬೇಕರಿ ಮುಂದಿನ ಆವರಣಕ್ಕೆ ಬರುವ ತಿಕ್ಮಾರಾಮ್ ಅವರು ಪಕ್ಷಿಗಳ ಮುಂದೆ ಆಹಾರ ಇದೆಯೋ, ಇಲ್ಲವೋ ಖಚಿತಪಡಿಸಿಕೊಳ್ಳುತ್ತಾರೆ. ಖಾಲಿಯಾಗಿದ್ದರೆ ಮತ್ತೆ ಆಹಾರ ಹಾಕಿ ತಮ್ಮ ಕಾರ್ಯದಲ್ಲಿ ನಿರತರಾಗುತ್ತಾರೆ.

ಪಕ್ಷಿಗಳಿಗೆ ಆಹಾರ ವಿತರಣೆಯಲ್ಲಿ ಖುಷಿ ..ಕಳೆದ 14 ವರ್ಷಗಳಿಂದ ಈ ಕಾರ್ಯ ನಿತ್ಯ ನಡೆದು ಬಂದಿದೆ. ಇವರು ಈ ರೀತಿ ಪಕ್ಷಿಗಳಿಗೆ ಆಹಾರ ನೀಡುವುದು ತಮಗೆ ಖುಷಿ ಸಿಗುತ್ತೆ. ದುಡಿಮೆಯಲ್ಲಿ ಸ್ವಲ್ಪ ಆದರೂ ಪ್ರಾಣಿಪಕ್ಷಿಗಳಿಗೆ ನೀಡುತ್ತಿರುವುದು ನಮಗೆ ನೆಮ್ಮದಿ ತಂದಿದೆ. ನನ್ನ ಮಗ ಹರೀಶ್​ ಸಹ ನನ್ನೊಂದಿಗೆ ಪಕ್ಷಿಗಳಿಗೆ ಆಹಾರ ಒದಗಿಸುವರು ಎನ್ನುತ್ತಾರೆ ತಿಕ್ಮಾರಾಮ ಚೌಧರಿ.

ತಾವು ಬೇಕರಿ ಉದ್ದಿಮೆ ಆರಂಭಿಸಿದಾಗಿನಿಂದ ಈ ಕಾರ್ಯ ಮಾಡುತ್ತಿದ್ದೇವೆ. ಇದರಿಂದ ತಮಗೆ ಒಳ್ಳೆಯದಾಗಿದೆ . ನಮ್ಮ ದುಡಿಮೆಯಲ್ಲಿ ಪ್ರತಿಶತ 10 ರಷ್ಟು ಪಕ್ಷಿಗಳಿಗೆ ಖರ್ಚು ಮಾಡುತ್ತಿದ್ದೇವೆ. ಇದರಿಂದ ನಮ್ಮ ಬೇಕರಿ ವ್ಯಾಪಾರವೂ ಚೆನ್ನಾಗಿ ನಡೆಯುತ್ತಿದೆ ಎಂದು ಹರೀಶ್ ತಿಳಿಸಿದ್ದಾರೆ.

ತಂದೆ ಮಗನ ಪಕ್ಷಿ ಪ್ರೇಮಕ್ಕೆ ಮೆಚ್ಚುಗೆ: ಹಾವೇರಿಯಲ್ಲಿ ತಂದೆ ಮಗನ ಪಕ್ಷಿ ಪ್ರೇಮಕ್ಕೆ ಅಕ್ಕಪಕ್ಕದ ಜನರು ಸಹಕಾರ ನೀಡಿದ್ದಾರೆ. ಪಕ್ಷಿಗಳಿಗೆ ಯಾವುದೇ ಅನಾನುಕೂಲ ಆಗದಂತೆ ನೋಡಿಕೊಂಡಿದ್ದಾರೆ. ತಂದೆ ಮಗನ ಪಕ್ಷಿ ಪ್ರೇಮಕ್ಕೆ ಅಕ್ಕಪಕ್ಕದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಿಕ್ಮಾರಾಮ್ ಕೇವಲ ಪಕ್ಷಿಗಳಿಗೆ ಅಷ್ಟೇ ಅಲ್ಲ ಗೋವುಗಳಿಗೆ ಸಹ ಆಹಾರ ನೀಡುತ್ತಾರೆ. ಬೇಕರಿಯಲ್ಲಿ 10 ಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ.

ಭಾರತದಲ್ಲಿ ಪಕ್ಷಿ ಸಂಕುಲ ಕ್ಷೀಣ:ಭಾರತದ ಪಕ್ಷಿ ಸಂತತಿಯ ಸ್ಥಿತಿ-ಗತಿಗಳ ಅಧ್ಯಯನದ ವರದಿ ಇತ್ತೀಚೆಗೆ ಬಿಡುಗಡೆಯಾಗಿದೆ. 942 ಪಕ್ಷಿ ಪ್ರಭೇದಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದು, ಅದರಲ್ಲಿ 338 ಪಕ್ಷಿ ಪ್ರಭೇದಗಳ ಸಂಖ್ಯೆ ಶೇ.60 ರಷ್ಟು ಕಡಿಮೆಯಾಗಿದೆ ಎಂದು ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಭಾರತದಲ್ಲಿ ದಾಖಲಾಗಿರುವ 1350 ಪಕ್ಷಿಗಳಲ್ಲಿ ಬಹಳಷ್ಟು ಪ್ರಭೇದಗಳು ಹಾಗೂ ಅವುಗಳ ಸಂಖ್ಯೆಯಲ್ಲಿ ತೀವ್ರಗತಿಯಲ್ಲಿ ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ. ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತದೆ ಅಂದರೆ ಪರಿಸರದ ಅಸಮತೋಲನದ ಮುನ್ಸೂಚನೆ ಸಾಕ್ಷಿಯಾಗಿದೆ...

ಇದನ್ನೂಓದಿ:ಪಕ್ಷಿಗಳ ದಾಹ ತಣಿಸಲು ಮುಂದಾದ ವಿದ್ಯಾರ್ಥಿಗಳು.. ಹಳೆ ಹೆಲ್ಮೆಟ್ ಬಳಸಿ ವಿನೂತನ ಪ್ರಯತ್ನ

Last Updated : Nov 17, 2023, 5:45 PM IST

ABOUT THE AUTHOR

...view details