ಕರ್ನಾಟಕ

karnataka

By

Published : Aug 22, 2020, 12:17 AM IST

ETV Bharat / state

ದಲಿತರ ಮೇಲಿನ ದೌರ್ಜನ್ಯ ತಡೆಯುವಂತೆ ಸಕಲೇಶಪುರ ದಲಿತ ಮುಖಂಡರ ಮನವಿ

ಆಲೂರು-ಸಕಲೇಶಪುರ ಕ್ಷೇತ್ರವು ದಲಿತ ಮೀಸಲು ಕ್ಷೇತ್ರವಾಗಿದ್ದರೂ ದೌರ್ಜನ್ಯ ದಬ್ಬಾಳಿಕೆಗಳಿಂದ ಮುಕ್ತಿ ಕಾಣದಿರುವುದು ದೊಡ್ಡ ದುರಂತ ಎಂದು ಸಕಲೇಶಪುರ ದಲಿತ ಮುಖಂಡ ಮಾಸುವಳ್ಳಿ ಚಂದ್ರು ತಿಳಿಸಿದರು.

Sakleshpur Dalit leaders
ದಲಿತರ ಮೇಲಿನ ದೌರ್ಜನ್ಯ ತಡೆಯುವಂತೆ ಸಕಲೇಶಪುರ ದಲಿತ ಮುಖಂಡರ ಮನವಿ

ಹಾಸನ:ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕಾಗಿ ಪರಿಶಿಷ್ಟ ಜಾತಿ ಜನಾಂಗದ ಜನರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದು, ಕ್ರಿಮಿನಲ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದರೂ ಈವರೆಗೆ ಅವರನ್ನು ಬಂಧಿಸಿಲ್ಲ ಎಂದು ಸಕಲೇಶಪುರ ದಲಿತ ಮುಖಂಡ ಮಾಸುವಳ್ಳಿ ಚಂದ್ರು ಆರೋಪಿಸಿದ್ದು, ಕೂಡಲೇ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.

ದಲಿತರ ಮೇಲಿನ ದೌರ್ಜನ್ಯ ತಡೆಯುವಂತೆ ಸಕಲೇಶಪುರ ದಲಿತ ಮುಖಂಡರ ಮನವಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಲೇಶಪುರ ತಾಲೂಕಿನಲ್ಲಿ ದಲಿತರು ಇತರೆ ಎಲ್ಲ ವರ್ಗದ ಜನರೊಂದಿಗೆ ಅನ್ಯೋನ್ಯವಾಗಿದ್ದು, ಎಲ್ಲರೂ ಪರಸ್ಪರ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ ಸಕಲೇಶಪುರ ಹೌಸಿಂಗ್ ಬೋರ್ಡ್ ನಿವಾಸಕ್ಕೆ ಮಾಜಿ ಸೈನಿಕ ಧರ್ಮಪ್ಪ ಅವರು ಹೋಗುವಾಗ ಅದೇ ವಾರ್ಡಿನ ನಿವಾಸಿ, ಕ್ರಿಮಿನಲ್ ಹಿನ್ನೆಲೆಯುಳ್ಳ ರೌಡಿಶೀಟರ್ ಸೈಯದ್ ಮುಫೀಸ್ ಎಂಬ ವ್ಯಕ್ತಿ ಕೊಲೆ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದು, ನಂತರ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ಸೂಕ್ತ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.

ಅಲ್ಲದೆ ಇತ್ತೀಚೆಗೆ ಚಿಕ್ಕನಾಯಕನಹಳ್ಳಿ ಗ್ರಾಮದ ಜಯರಾಜ್ ಎಂಬ ದಲಿತ ಯುವಕನ ಮೇಲೆ ಸಕಲೇಶಪುರ ಕಾರ್ಯನಿರ್ವಹಣಾ ಅಧಿಕಾರಿ ಹರೀಶ್ ಅವರು ವಿನಾಕಾರಣ ಹಲ್ಲೆ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು, ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ಷೇಪಿಸಿ, ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಆಲೂರು-ಸಕಲೇಶಪುರ ಕ್ಷೇತ್ರವು ದಲಿತ ಮೀಸಲು ಕ್ಷೇತ್ರವಾಗಿದ್ದರೂ ದೌರ್ಜನ್ಯ ದಬ್ಬಾಳಿಕೆಗಳಿಂದ ಮುಕ್ತಿ ಕಾಣದಿರುವುದು ದೊಡ್ಡ ದುರಂತ. ಕೂಡಲೇ ಜಿಲ್ಲಾ ಮತ್ತು ತಾಲೂಕು ಆಡಳಿತ ಕ್ರಮವಹಿಸಬೇಕೆಂದು ಮನವಿ ಮಾಡಿದರು.

ABOUT THE AUTHOR

...view details