ಹಾಸನ: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಒಟ್ಟಾರೆ 6,75,512 ಮತ ಪಡೆಯುವ ಮೂಲಕ1,42,123 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಬಿಜೆಪಿಯ ಎ.ಮಂಜು 5,33,389 ಮತ ಪಡೆದು ಸೋಲನುಭವಿಸಿದ್ದಾರೆ.
ಕುತೂಹಲದ ಕಣವಾಗಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ದಳಪತಿಗಳು ಪಾರಮ್ಯ ಸಾಧಿಸಿದ್ದಾರೆ. ನಿರೀಕ್ಷೆಯಂತೆಯೇ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ.
ಗೆದ್ದ ಬಳಿಕ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಮಾತನಾಡಿದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಗೆಲುವನ್ನು ಮೈತ್ರಿ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಅರ್ಪಿಸಿದ್ರು. ಈ ಗೆಲುವಿನಿಂದ ಸಂತಸವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಶಕ್ತಿ ಕೊಟ್ಟಿರುವ ಜನರಿಗಾಗಿ ದುಡಿಯುವೆ. ಅಭಿವೃದ್ಧಿಗೆ ಜನರು ನನ್ನನ್ನು ಬೆಂಬಲಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುತ್ತಿರುವ ಸಮಸ್ಯೆ ಹಾಗೂ ನಿರುದ್ಯೋಗಕ್ಕೆ ಪರಿಹಾರ ಕಂಡು ಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದಿದ್ದಾರೆ.
ಒಟ್ಟಾರೆ 16ಕ್ಕೂ ಹೆಚ್ಚು ಸುತ್ತಿನ ಮತ ಎಣಿಕೆಯಲ್ಲಿ ಒಮ್ಮೆಯೂ ಮುನ್ನಡೆ ಕಾಣದ ಬಿಜೆಪಿಯ ಎ.ಮಂಜು, 5,33,389 ಮತ ಪಡೆಯಲಷ್ಟೇ ಶಕ್ತರಾದರು. ಆದರೆ ದೇವೇಗೌಡರ ಕುಟುಂಬದ ಎರಡು ಕಡೆಯ ಸೋಲು ದೊಡ್ಡಗೌಡರ ತವರಿನ ಒಂದು ಗೆಲುವಿನ ಸಂಭ್ರಮವನ್ನು ಮರೆಮಾಚಿದೆ. ನಿಖಲ್ ಕುಮಾರಸ್ವಾಮಿ, ಹಾಗೂ ಹೆಚ್ ಡಿ ದೇವೇಗೌಡರ ಸೋಲಿನಿಂದಾಗಿ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆದ್ದರೂ ವಿಜಯೋತ್ಸವದ ಉತ್ಸಾಹ ಕಂಡುಬರಲಿಲ್ಲ.