ಕರ್ನಾಟಕ

karnataka

ETV Bharat / state

ಬಯಲಾಯ್ತು ಬೇಬಿ ಟ್ಯಾಂಕರ್ ಬ್ರಹ್ಮಾಂಡ: ಆಯಿಲ್ ಮಾಫಿಯಾಗೆ ಪೊಲೀಸಪ್ಪನೇ ಕಿಂಗ್​ಪಿನ್! - Head Constable Bhaskar

ತೈಲ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಇಲ್ಲೊಬ್ಬ ಪೊಲೀಸ್ ಅಧಿಕಾರಿ, ಪೆಟ್ರೋಲ್ ಮಾಫಿಯಾ ನಡೆಸಿ ದುಡ್ಡು ಮಾಡಲು ಹೋಗಿದ್ದಾನೆ. ಈ ಸಂಬಂಧ ಮಾಹಿತಿ ಕಲೆ ಹಾಕಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಆಯಿಲ್ ಮಾಫಿಯಾ
ಆಯಿಲ್ ಮಾಫಿಯಾ

By

Published : Jul 18, 2021, 8:55 AM IST

ಹಾಸನ/ತುಮಕೂರು:ಹಾಸನದಲ್ಲಿ ಪೆಟ್ರೋಲ್ ದಂಧೆ ಇಂದು ನಿನ್ನೆಯದಲ್ಲ, ಇದು ದಶಕಗಳಿಂದ ನಡೆಯುತ್ತಿದೆ ಎಂಬ ಆರೋಪಗಳಿವೆ. ಆದ್ರೆ, ಮಾಫಿಯಾ ಹೇಗೆ ನಡೆಯುತ್ತೆ ಅನ್ನೋದು ಮಾತ್ರ ಯಾರಿಗೂ ಗೊತ್ತಾಗಲ್ಲ. ಕಂಪನಿಯ ಕಣ್ಣಿಗೆ ಮಣ್ಣೆರೆಚಿ ಮಾಡ್ತಿದ್ದ ದಂಧೆ ಈಗ ಬಯಲಾಗಿದೆ. ಬೇಬಿ ಟ್ಯಾಂಕರ್​ ದಂಧೆ ಬಯಲಾಗುತ್ತಿದ್ದಂತೆ ಪೆಟ್ರೋಲ್ ಬಂಕ್ ಮಾಲೀಕರು ಬೆಚ್ಚಿಬಿದ್ದಿದ್ದಾರೆ.

ಬೇಬಿ ಟ್ಯಾಂಕರ್​ ಅಳವಡಿಸಿ ಮಾಫಿಯಾ..
ಹಾಸನದ ಹೆಚ್​​ಪಿಸಿಎಲ್​ನಲ್ಲಿರುವ ಘಟಕಕ್ಕೆ ಮಂಗಳೂರಿನ ಪೆಟ್ರೋಲ್​ ಪೈಪ್​ಗಳ ಮೂಲಕ ತೈಲ ಆಮದಾಗುತ್ತದೆ. ಬಳಿಕ ಅಲ್ಲಿಂದ ರಾಜ್ಯದ ನಾನಾ ಭಾಗಗಳ ಪೆಟ್ರೋಲ್ ಬಂಕ್​​ಗಳಿಗೆ ಟ್ಯಾಂಕರ್ ಮೂಲಕ ಪೆಟ್ರೋಲ್ ಸರಬರಾಜು ಆಗುತ್ತೆ. ಇಲ್ಲಿ ಪೆಟ್ರೋಲ್ ಟ್ಯಾಂಕರ್​​ಗಳಿಗೆ ನಿಗದಿತ ಪ್ರಮಾಣದಲ್ಲಿ ಪೆಟ್ರೋಲ್ ತುಂಬಿಸಿ ನಂತರ ಸೆನ್ಸಾರ್ ಲಾಕ್ ಕೂಡ ಅಳವಡಿಸಲಾಗುತ್ತೆ. ಬಂಕ್​​ಗಳಿಗೆ ತೆರಳಿದ ಮೇಲೆ ಅಲ್ಲಿ ಅಧಿಕೃತ ವ್ಯಕ್ತಿಗೆ ನೀಡಲಾಗಿರುವ ಡಿಜಿಟಲ್ ಪಾಸ್ವರ್ಡ್ ಬಳಸಿ ಲಾಕ್ ತೆರೆದು ಅಲ್ಲಿಂದ ಟ್ಯಾಂಕ್​​ಗೆ ಅನ್ ಲೋಡ್ ಮಾಡಲಾಗುತ್ತದೆ. ಇಷ್ಟೆಲ್ಲಾ ನೀತಿ, ನಿಯಮಗಳಿದ್ರೂ, ಮಾರ್ಗಮಧ್ಯದಲ್ಲೇ ಪೆಟ್ರೋಲ್ ಕಳವಾಗುತ್ತಿತ್ತು. ಟ್ಯಾಂಕರ್​ನ ಒಳಭಾಗದಲ್ಲಿ ಗೌಪ್ಯವಾಗಿ 150 ಲೀಟರ್​ ಸಾಮರ್ಥ್ಯವುಳ್ಳ ಬೇಬಿ ಟ್ಯಾಂಕರ್ ಅಳವಡಿಸಿ ಮಾಫಿಯಾ ಮಾಡ್ತಿದ್ರು.

ಟ್ಯಾಂಕರ್ ಚಾಲಕ ವಶಕ್ಕೆ..

ನಿತ್ಯ 4 ಸಾವಿರಕ್ಕೂ ಹೆಚ್ಚು ಟ್ಯಾಂಕರ್​ಗಳು ಹೆಚ್​ಪಿಸಿಎಲ್​ಗೆ ಬಂದು ಹೋಗುತ್ತವೆ. ಜೂನ್​ 28 ರಂದು ಹಾಸನದಿಂದ ಬಂದ ಟ್ಯಾಂಕರ್​ವೊಂದು ತುಮಕೂರು ಜಿಲ್ಲೆಯ ತಿಪಟೂರಿನ ಬಂಕ್​ನಲ್ಲಿ ಅನ್​ಲೋಡ್ ಮಾಡಿದೆ. ನಿಗದಿತ ಪ್ರಮಾಣಕ್ಕಿಂತ ಇಂಧನ ಕಡಿಮೆ ಬಂದ ಹಿನ್ನೆಲೆ, ಬಂಕ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾನೆ. ಬಳಿಕ ಎಸ್​ಪಿ ರಾಹುಲ್ ಕುಮಾರ್​ ಶಹಪುರವಾಡ್ ಸ್ಥಳಕ್ಕೆ ಭೇಟಿ ಕೊಟ್ಟು, ಟ್ಯಾಂಕರ್ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

ಪೊಲೀಸಪ್ಪನೇ ಕಿಂಗ್​ಪಿನ್​..

ತುಮಕೂರು ಪೊಲೀಸರಿಂದ ಮಾಹಿತಿ ಬಂದ ಕೂಡಲೇ ಎಚ್ಚೆತ್ತುಕೊಂಡ ಹಾಸನ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದಾಗ ಈ ಬೇಬಿ ಟ್ಯಾಂಕರ್ ದಂಧೆಯ ಕಿಂಗ್ ಪಿನ್ ಆಲೂರು ಪೊಲೀಸ್ ಠಾಣೆಯ ಮುಖ್ಯಪೇದೆ ಭಾಸ್ಕರ್ ಎಂಬುದು ಗೊತ್ತಾಗುತ್ತೆ. ಬಳಿಕ ಆರೋಪಿ ಊರಿಂದಲೇ ಎಸ್ಕೇಪ್ ಆಗಿದ್ದಾನೆ.

ಏಳು ಟ್ಯಾಂಕರ್​ಗಳಿಗೆ ಬೇಬಿ ಟ್ಯಾಂಕರ್ ಅಳವಡಿಕೆ..

ಆತನಿಗೆ ಸೇರಿವೆ ಎನ್ನಲಾದ ಸುಮಾರು 7 ಟ್ಯಾಂಕರ್​​ಗಳನ್ನ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಎಲ್ಲಾ ಟ್ಯಾಂಕರ್​​ಗಳಲ್ಲಿ ಬೇಬಿ ಟ್ಯಾಂಕರ್ ಅಳವಡಿಸಿರೋದು ಗೊತ್ತಾಗಿದೆ. ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ವರ್ಕ್ ಶಾಪ್ ಗಳಲ್ಲಿಯೇ ಭಾಸ್ಕರ್ ತನ್ನ ಟ್ಯಾಂಕರ್ ಗಳಿಗೆ ಬೇಬಿ ಟ್ಯಾಂಕ್ ನಿರ್ಮಾಣ ಮಾಡಿಸಿದ್ದ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ಪ್ರತಿದಿನ ಬಂಕ್ ಮಾಲೀಕರಿಗೆ ವಂಚಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದ ಪೆಟ್ರೋಲ್ ಕಳ್ಳತನ ಮಾಫಿಯಾ ತನಿಖೆ ಚುರುಕುಗೊಂಡಿದೆ. ಆದಷ್ಟು ಬೇಗ ಪೊಲೀಸರು ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿಸುವ ಮೂಲಕ ಪೆಟ್ರೋಲ್ ಕಳ್ಳತನ ಮಾಫಿಯ ಮಟ್ಟ ಹಾಕಬೇಕಾಗಿದೆ.

ABOUT THE AUTHOR

...view details