ಕರ್ನಾಟಕ

karnataka

ETV Bharat / state

ಕೋವಿಡ್​ನಿಂದ ಊರು ಸೇರಿದ್ರು ತಂದೆ-ಮಗ.. ಕೃಷಿಯೊಂದಿಗೆ ಕುಕ್ಕುಟೋದ್ಯಮ ಮಾಡಿ ಹೊಸ ಬದುಕು ಕಟ್ಟಿಕೊಂಡ್ರು.. - ಕೃಷಿಯೊಂದಿಗೆ ಕುಕ್ಕುಟ್ಟೋದ್ಯಮ

ಕೇವಲ ಎರಡು ಎಕರೆ ಪ್ರದೇಶದಲ್ಲಿ ಇವರು ಬಾಳೆ, ತೆಂಗು, ಹಲಸು, ಮಾವು, ಸಪೋಟ, ಸೀಬೆ ಸೇರಿದಂತೆ ಎಂಟಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ಬೆಳೆಯುವ ಜೊತೆಗೆ ಕೋಳಿಸಾಕಾಣಿಕೆ ಮಾಡುತ್ತಿದ್ದಾರೆ. ಒಂದುವರೆ ವರ್ಷಗಳಿಂದ ಶ್ರಮಪಟ್ಟು ಮಾಡಿದ ಕೆಲಸಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ಈಗಾಗಲೇ ಅರ್ಧದಷ್ಟು ಹಾಕಿದ ಬಂಡವಾಳ ವಾಪಸ್ ಬಂದಿದ್ದು, ಇನ್ನು ಎರಡು ವರ್ಷಗಳಲ್ಲಿ ಉಳಿದ ಆದಾಯವನ್ನು ಪಡೆಯುತ್ತೇವೆ..

Poultry farming with Agriculture
ಕೃಷಿಯೊಂದಿಗೆ ಕುಕ್ಕುಟ್ಟೋದ್ಯಮ

By

Published : Jul 9, 2021, 8:06 AM IST

Updated : Jul 10, 2021, 9:49 PM IST

ಹಾಸನ/ಚನ್ನರಾಯಪಟ್ಟಣ :ಜನರು ತಮ್ಮ ಜೀವನ ನಿರ್ವಹಣೆಗಾಗಿ ತಮ್ಮೂರು ಬಿಟ್ಟು ಸಿಟಿ ಸೇರೋದು ಸಹಜ. ಆದ್ರೆ, ಕೊರೊನಾ ಸೃಷ್ಟಿಸಿದ ಅವಾಂತರದಿಂದ ಒಂದಿಷ್ಟು ವಿಚಾರಗಳು ಬದಲಾಗಿಬಿಟ್ಟಿವೆ. ಇಲ್ಲೊಂದು ಕುಟುಂಬದ ಅಪ್ಪ-ಮಗ ಸಿಟಿಯಿಂದ ಊರಿಗೆ ಬಂದು ಕೃಷಿ ಮತ್ತು ಕುಕ್ಕುಟೋದ್ಯಮ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ತಂದೆ ಧನಂಜಯ್ ವೃತ್ತಿಯಲ್ಲಿ ಓಲಾ ಕ್ಯಾಬ್ ಚಾಲಕ. ಮಗ ವಿಜಯ್ ಕುಮಾರ್ ಕೂಡ ಹೈದರಾಬಾದ್​ನಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್​ ಹಿನ್ನೆಲೆ, ಮನೆಯಿಂದಲೇ ಕೆಲಸ ಮಾಡುವ ನಿಯಮವನ್ನು ಕಂಪನಿ ಮಾಡಿದ್ದರಿಂದ ತನ್ನ ಕೆಲಸದೊಟ್ಟಿಗೆ ತಂದೆಯೊಂದಿಗೆ ಕೈಜೋಡಿಸಿ ಸ್ವಗ್ರಾಮದಲ್ಲಿಯೇ ಕೆಲಸ ಮಾಡುತ್ತಿದ್ದಾರೆ.

ಧನಂಜಯ್ ಬೆಂಗಳೂರಿನಿಂದ ವಾಪಸ್ ಕಾರುಗಳನ್ನು ತೆಗೆದುಕೊಂಡು ಸ್ವಗ್ರಾಮ ಚನ್ನೇನಹಳ್ಳಿಗೆ ಬಂದು ಮನೆಯಲ್ಲಿ ಕುಳಿತಿದ್ದಾಗ ಯೋಚನೆಗೆ ಬಂದಿದ್ದು ಒಂದೇ, ಅದುವೇ ಕೃಷಿ ಮಾಡೋ ಮೂಲಕ ಏನಾದರೂ ಸಾಧಿಸೋಣ ಅಂತ. ಆದರೆ, ಚನ್ನರಾಯಪಟ್ಟಣ ತಾಲೂಕನ್ನು ಬರಪೀಡಿತ ಪ್ರದೇಶ ಎಂದೇ ಕರೆಯಲಾಗುತ್ತದೆ. ಇಲ್ಲಿ ನೀರಿಗೆ ಸಾಕಷ್ಟು ಸಮಸ್ಯೆ ಇದೆ. ಇದರ ಮಧ್ಯೆ ಬರಡಾಗಿದ್ದ ಎರಡು ಎಕರೆ ಪಿತ್ರಾರ್ಜಿತ ಜಮೀನಿನಲ್ಲಿ ಈಗ ಬಂಗಾರದ ಬೆಳೆ ಬೆಳೆದಿದ್ದಾರೆ. ಜೊತೆಗೆ ಕೋಳಿಗಳನ್ನು ಸಾಕುತ್ತಿದ್ದಾರೆ.

ಕೋವಿಡ್​ನಿಂದ ಊರು ಸೇರಿದ್ರು ತಂದೆ-ಮಗ

ಕೇವಲ ಎರಡು ಎಕರೆ ಪ್ರದೇಶದಲ್ಲಿ ಇವರು ಬಾಳೆ, ತೆಂಗು, ಹಲಸು, ಮಾವು, ಸಪೋಟ, ಸೀಬೆ ಸೇರಿದಂತೆ ಎಂಟಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ಬೆಳೆಯುವ ಜೊತೆಗೆ ಕೋಳಿಸಾಕಾಣಿಕೆ ಮಾಡುತ್ತಿದ್ದಾರೆ. ಒಂದುವರೆ ವರ್ಷಗಳಿಂದ ಶ್ರಮಪಟ್ಟು ಮಾಡಿದ ಕೆಲಸಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ಈಗಾಗಲೇ ಅರ್ಧದಷ್ಟು ಹಾಕಿದ ಬಂಡವಾಳ ವಾಪಸ್ ಬಂದಿದ್ದು, ಇನ್ನು ಎರಡು ವರ್ಷಗಳಲ್ಲಿ ಉಳಿದ ಆದಾಯವನ್ನು ಪಡೆಯುತ್ತೇವೆ ಎನ್ನುತ್ತಾರೆ ಧನಂಜಯ್ ಮತ್ತು ಯುವ ಕೃಷಿಕ ವಿಜಯಕುಮಾರ್.

ಇನ್ನು, ಇಷ್ಟೆಲ್ಲ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಧನಂಜಯ್ ಪತ್ನಿ ರುಕ್ಮಿಣಿ. ಪ್ರತಿನಿತ್ಯ ಕೋಳಿಗಳ ಆರೈಕೆಯಿಂದ ಹಿಡಿದು ಜಮೀನಿನಲ್ಲಿ ಕೆಲಸ ಮಾಡುವವರಿಗೆ ಸಮಯಕ್ಕೆ ಸರಿಯಾಗಿ ಊಟ, ನೀರು ನೀಡುವ ಮೂಲಕ ತಾವು ಕೂಡ ಅವರೊಟ್ಟಿಗೆ ಕೆಲಸ ಮಾಡುವ ಮೂಲಕ ಸಹಕಾರಿಯಾಗಿದ್ದಾರೆ. ಬಾಳೆ ಗಿಡಗಳ ಮಧ್ಯೆ ಕುಕ್ಕುಟೋದ್ಯಮವನ್ನು ಪ್ರಾರಂಭಿಸಿ ಬಾಳೆ ಮತ್ತು ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ಕೋಳಿಗಳ ಗೊಬ್ಬರವನ್ನೇ ಹಾಕುತ್ತಿರುವುದರಿಂದ ಗೊಬ್ಬರದ ಖರ್ಚು ಉಳಿದು ಫಸಲು ಕೂಡ ಚೆನ್ನಾಗಿ ಬರುತ್ತಿದೆ.

ಬೆಳೆಗಳಿಗೆ ಹನಿ ನೀರಾವರಿಯ ಮುಖಾಂತರ ನೀರುಣಿಸುವ ಕಾರ್ಯವನ್ನು ಮಾಡಿರುವುದು ಬಹಳ ವಿಶೇಷ. ಕೋಳಿಗಳನ್ನು ಇತರೆ ಪ್ರಾಣಿಗಳಿಂದ ರಕ್ಷಣೆ ಮಾಡುವುದಕ್ಕೆ ಜಮೀನಿನ ಸುತ್ತಲೂ ತಂತಿಬೇಲಿಯನ್ನು ನಿರ್ಮಿಸಿ ಹಾವುಗಳು ಕೂಡ ಒಳ ಬರದಂತೆ ಮಾಡಿರುವುದು ಮತ್ತೊಂದು ವಿಶೇಷ.

ಇನ್ನು, ತಿಪಟೂರು ತಾಲೂಕಿನ ನೊಣವಿನಕೆರೆಯಿಂದ ಕೃಷ್ಣಕುಮಾರ್ ಎಂಬುವರ ಸಲಹೆ ಪಡೆದು ಕುಕ್ಕುಟೋದ್ಯಮ ಆರಂಭಿಸಿ ಈಗ ಹಾಸನ ಮಂಡ್ಯ ಚಿಕ್ಕಮಗಳೂರು ಮತ್ತು ತುಮಕೂರು ಹಾಗೂ ಬೆಂಗಳೂರು ಭಾಗಗಳಿಗೆ ಮೊಟ್ಟೆಗಳನ್ನು ಹಾಗೂ ಕೋಳಿಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಪಡೆಯುತ್ತಿದ್ದಾರೆ.

ಕೋಳಿಗಳಿಗೆ ಯಾವುದೇ ರೋಗರುಜಿನೆಗಳು ಬಾರದಂತೆ ಕೃಷ್ಣಕುಮಾರ್ ವಾರದಲ್ಲಿ ಅಥವಾ 15 ದಿನಕ್ಕೆ ಒಮ್ಮೆ ಬಂದು ಅವುಗಳನ್ನು ಆರೈಕೆ ಮಾಡಿ ಹೋಗುತ್ತಾರೆ. ಕೊರೊನಾ ಲಾಕ್​ಡೌನ್​​ನಿಂದ ಒಂದು ರೀತಿಯಲ್ಲಿ ನಮ್ಮ ಜೀವನಕ್ಕೆ ಹೊಸ ಹಾದಿಯನ್ನು ತೋರಿಸಿಕೊಟ್ಟು ಬದುಕನ್ನೇ ಬದಲಾಯಿಸಿತು ಎನ್ನುತ್ತಾರೆ ಈ ಕುಟುಂಬ.

Last Updated : Jul 10, 2021, 9:49 PM IST

ABOUT THE AUTHOR

...view details