ಹಾಸನ: ನಗರದ ಹೊರ ವಲಯದ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 254, ಹಳೇ ಸರ್ವೆ ನಂಬರ್ 244ರಲ್ಲಿ ಮಿಲಿಟರಿ, ವಿಧವೆಯರಿಗೆ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟರುವ ಜಾಗದಲ್ಲಿ ಸತ್ಯಮಂಗಲದ ಅರ್ಹ ನಿವೇಶನ ರಹಿತ ಗ್ರಾಮಸ್ಥರಿಗೆ ನಿವೇಶನ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೇಶನ ರಹಿತರಿಗೆ ಸುಮಾರು 4.20 ಗುಂಟೆ ಜಾಗವನ್ನು ಮೀಸಲಿಟ್ಟು ಹಲವು ವರ್ಷಗಳೇ ಕಳೆದರೂ, ಜಿಲ್ಲಾಡಳಿತ ನಿವೇಶನ ವಿತರಣೆ ಮಾಡದ ಹಿನ್ನಲೆಯಲ್ಲಿ ನಿವಾಸಿಗಳೂ ಸೇರಿದಂತೆ ಸುತ್ತಮುತ್ತಲ ನಿರ್ಗತಿಕರು ನೂರಾರು ಸಂಖ್ಯೆಯಲ್ಲಿ ರಾತ್ರೋರಾತ್ರಿ ಗುಡಿಸಲು ಹಾಕಿಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಹಾಗೂ ತಹಶೀಲ್ದಾರ್ ಶಿವಶಂಕರಪ್ಪ ನೇತೃತ್ವದಲ್ಲಿ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಗುಡಿಸಲು ಹಾಕಿಕೊಂಡವರನ್ನು ಮನವೊಲಿಸಿದ್ದಾರೆ. ಗುಡಿಸಲು ಹಾಕಿಕೊಂಡಿರುವುದು ಕಾನೂನು ಬಾಹಿರವಾಗಿದ್ದು, ಇವುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚಿಸಿದರು.