ಹಾಸನ: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಸನ ಕ್ಷೇತ್ರದ ಶಾಸಕ ಹಾಗೂ ವರ್ತಕರ ಸಂಘ ಮಂಗಳವಾರದಿಂದ ಅರ್ಧ ದಿನ ಲಾಕ್ಡೌನ್ ಮಾಡುವ ಮೂಲಕ ಹೊಸ ಮುನ್ನುಡಿ ಬರೆದಿದೆ.
ಹಾಸನದಲ್ಲಿ ಮಂಗಳವಾರದಿಂದ ಅರ್ಧದಿನ ಲಾಕ್ಡೌನ್: ವರ್ತಕರು, ವ್ಯಾಪಾರಸ್ಥರ ಸಾಥ್!
ಹಾಸನದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಸನ ಕ್ಷೇತ್ರದ ಶಾಸಕ ಹಾಗೂ ವರ್ತಕರ ಸಂಘ ಮಂಗಳವಾರದಿಂದ ಅರ್ಧ ದಿನ ಲಾಕ್ಡೌನ್ ಘೋಷಣೆ ಮಾಡಿದ್ದಾರೆ.
ಈ ಡೆಡ್ಲಿ ವೈರಸ್ ಸಮುದಾಯದತ್ತ ಸಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಮತ್ತು ವರ್ತಕರ ಸಂಘ ಸಭೆ ಸೇರಿ ಇಂದಿನಿಂದ ಜುಲೈ. 31ರ ತನಕ ಸ್ವಯಂ ಪ್ರೇರಿತ ಲಾಕ್ಡೌನ್ಗೆ ಕರೆ ಕೊಟ್ಟಿದ್ದಾರೆ. ವರ್ತಕರು ಹಾಗೂ ಹಾಸನದ ವ್ಯಾಪಾರಸ್ಥರು ಇದಕ್ಕೆ ಕೈಜೋಡಿಸಿದ್ದು, ಹಾಸನ ನಗರದಲ್ಲಿ ಇವತ್ತು ಮಧ್ಯಾಹ್ನದಿಂದ ಎಲ್ಲಾ ವಾಣಿಜ್ಯ ಮಳಿಗೆಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿದರು.
ವಾಣಿಜ್ಯ ಮಳಿಗೆಗಳು ಹೊರತುಪಡಿಸಿ ಉಳಿದಂತೆ ವಾಹನ ಸಂಚಾರಗಳು ಎಂದಿನಂತೆ ಇತ್ತು. ಆದರೆ ಅವರು ಮಾತ್ರ ಇದಕ್ಕೆ ಕೈ ಜೋಡಿಸಿದ್ದರಿಂದ ಮಧ್ಯಮ ವರ್ಗದ ಕುಟುಂಬದವರಿಗೆ ಮತ್ತು ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಕೊರೊನಾ ಹೆಮ್ಮಾರಿಯನ್ನು ತಡೆಗಟ್ಟಲು ಇದಕ್ಕಿಂತ ಬೇರೆ ದಾರಿ ಇಲ್ಲ ಎಂಬುದು ಹಾಸನ ಶಾಸಕ ಮತ್ತು ವರ್ತಕರ ಮಾತು. ಇವತ್ತು ಹಾಸನದಲ್ಲಿ ಕರೆಕೊಟ್ಟಿರುವ ಆಫ್ ಡೇ ಲಾಕ್ಡೌನ್ ಹೇಗಿತ್ತು ಎಂಬುದನ್ನು ನಮ್ಮ ಹಾಸನದ ಪ್ರತಿನಿಧಿ ಸುನಿಲ್ ಕುಂಬೆನಹಳ್ಳಿ walk-through ಮೂಲಕ ಪ್ರತ್ಯಕ್ಷ ವರದಿ ನೀಡಿದ್ದಾರೆ.