ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಹಾಕಿರೋ ಸವಾಲು ಸ್ವೀಕಾರ ಮಾಡುತ್ತೇನೆ. ನಾನು ಮುಂದಿನ 2023ರ ಚುನಾವಣೆ ಗೆಲ್ಲುತ್ತೇನೆ ಎನ್ನುವ ಮೂಲಕ ಶಾಸಕ ಪ್ರೀತಂ ಜೆ. ಗೌಡ ಅವರು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣಗೆ ತಿರುಗೇಟು ನೀಡಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ನನಗಿಂತ ಚಿಕ್ಕವರು, ಏಕವಚನದಲ್ಲಿ ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಮನೆ ಮತ್ತು ರಾಜಕೀಯ ಪಕ್ಷ ನನಗೆ ಒಂದು ಸಂಸ್ಕಾರ ಬೆಳೆಸಿಕೊಟ್ಟಿದೆ. ನಾನು 10 ವರ್ಷದ ಬಾಲಕನಿಗೂ ಕೂಡ ಏಕವಚನದಲ್ಲಿ ಹೋಗು, ಬಾ ಎಂದು ಹೇಳುವುದಿಲ್ಲ. ಗೌರವ ಕೊಟ್ಟು, ಗೌರವ ತೆಗೆದುಕೊಳ್ಳುತ್ತೇವೆ. ಸಂಸದರು ಆ ರೀತಿ ಮಾತನಾಡಿದ್ದಾರೆ ಎಂದರೆ ಅವರ ಮನಸ್ಥಿತಿಯನ್ನು ಅದು ತೋರಿಸುತ್ತದೆ. ಹಾಗಾಗಿ, ನಾನು ಹೆಚ್ಚು ಮಾತನಾಡುವುದಿಲ್ಲ. ಮಾನ್ಯ ಸಂಸದರಿಗೆ ಸಾರ್ವಜನಿಕರೇ ಮುಂದಿನ ದಿನದಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸುತ್ತಾರೆ ಎಂದರು.
ಇದು ಸಂಸದರ ಹತಾಶೆಯ ಮನೋಭಾವನೆ ತೋರಿಸುತ್ತದೆ. ಸಾರ್ವಜನಿಕವಾಗಿ ಮತ್ತು ಅವರ ಕಾರ್ಯಕರ್ತರನ್ನು ಯಾವ ರೀತಿ ಮಾತನಾಡಿಸಬೇಕು ಎಂಬ ಬಗ್ಗೆ ಒಂದು ತರಬೇತಿ ತೆಗೆದುಕೊಂಡರೆ ಒಳ್ಳೆಯದು. ಅವರ ತಂದೆಯವರು ಕಾರ್ಯಕರ್ತರನ್ನು ಕುಡುಕರು, ರೌಡಿಶೀಟರ್ ಎನ್ನುತ್ತಾರೆ. ಅವರ ಮಗ ಅವರಿಗಿಂತ ಮುಂಚೆ ಚುನಾಯಿತರಾದ ಪ್ರತಿನಿಧಿಗೆ ಏಕವಚನದಲ್ಲಿ ಮಾತನಾಡುತ್ತಾರೆ. ನನಗಿಂತ ಆರೇಳು ವರ್ಷ ಚಿಕ್ಕವರಿದ್ದಾರೆ. ಇವೆಲ್ಲ ಅವರ ಸಂಸ್ಕಾರವನ್ನು ತೋರಿಸಿ ಕೊಡುತ್ತದೆ. ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕಾಗಿರುವುದು ಅವರ ವಯಕ್ತಿಕ ವಿಚಾರ ಆಗಿರುವುದರಿಂದ ನಾನು ಏಕೆ ಹೆಚ್ಚು ಗಮನ ಕೊಡಲಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:'ಯಾವನ್ರೀ ಅವನು?..': ಶಾಸಕ ಪ್ರೀತಂ ಗೌಡ ವಿರುದ್ಧ ಪ್ರಜ್ವಲ್ ರೇವಣ್ಣ ಗರಂ