ಹಾಸನ:ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಯೋಜನೆಗಳಿಗೆ ಸಮರ್ಪಕವಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸಚಿವಾಲಯವನ್ನು ರಚಿಸಲಾಗಿದೆ ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಅನುದಾನದ ಸಮರ್ಪಕ ಬಳಕೆಗೆ ರೈತಸಂಘದಿಂದ ಸಚಿವಾಲಯ ರಚನೆ: ಕೋಡಿಹಳ್ಳಿ ಚಂದ್ರಶೇಖರ್ - ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನ
ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಯೋಜನೆಗಳಿಗೆ ಸಮರ್ಪಕವಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸಚಿವಾಲಯ ರಚಿಸಲಾಗಿದೆ ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದ್ದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದಿಂದ ವಿವಿಧ ಯೋಜನೆಗೆ ಬಿಡುಗಡೆಯಾಗುವ ಹಣವು ದೆಹಲಿಯಿಂದ ಬೆಂಗಳೂರು ಹಾಗೂ ಅಲ್ಲಿಂದ ಗ್ರಾಮದವರೆಗೂ ಸಮರ್ಪಕವಾಗಿ ವಿತರಣೆಯಾಗಬೇಕು. ಯಾವುದೇ ಕಾಮಗಾರಿಯು ಪೂರ್ಣ ಪ್ರಮಾಣದಲ್ಲಿ ನಡೆದು ಬಿಡುಗಡೆಯಾದ ಹಣ ಬಳಕೆಯಾಗಿದೆಯಾ? ಎಷ್ಟು ಬಿಡುಗಡೆಯಾಗಿದೆ? ಹಣ ಎಷ್ಟು ಉಳಿದಿದೆ. ಸರಿಯಾಗಿ ಬಳಕೆ ಮಾಡಲಾಗಿದೆಯಾ, ಇಲ್ಲವೇ ಕಳಪೆ ಕಾಮಗಾರಿ ಮಾಡಲಾಗಿದೆಯೇ ಎಂಬುದರ ಬಗ್ಗೆ ಎಲ್ಲಾ ಹಳ್ಳಿಗಳಲ್ಲಿ ರೈತರು ಗಮನ ಕೊಡಬೇಕು. ಈ ನಿಟ್ಟಿನಲ್ಲಿ ರೈತ ಸಂಘ ಕಾರ್ಯಪ್ರವೃತ್ತರಾಗಿ ಪ್ರತಿ ಪೈಸೆಯನ್ನು ಲೆಕ್ಕ ಹಾಕಬೇಕು. ಆಗ ಮಾತ್ರ ಸಚಿವಾಲಯದಿಂದ ನಡೆಯುವ ಭ್ರಷ್ಟಾಚಾರವನ್ನು ತಪ್ಪಿಸಬಹುದು ಎಂದು ಕಿವಿಮಾತು ಹೇಳಿದರು.
ಹಾಸನ ಜಿಲ್ಲೆಯ ಪ್ರತಿ ತಾಲೂಕು, ಗ್ರಾಮ ಮಟ್ಟದಲ್ಲಿ ರಾಜ್ಯ ರೈತ ಸಂಘದಿಂದ ಪ್ರಾಮಾಣಿಕ ತಂಡವನ್ನು ಕಟ್ಟಲಾಗುವುದು. ಇದರಲ್ಲಿ ಸಂಘದ ಸದಸ್ಯರು ಪಾಲ್ಗೊಂಡು ಮುಂದೆ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡಲಿದ್ದಾರೆ ಎಂದರು.