ಕರ್ನಾಟಕ

karnataka

By

Published : Feb 6, 2020, 7:34 PM IST

ETV Bharat / state

ತೆಲಂಗಾಣ ಮಾದರಿಯ ಮರಳು ನೀತಿ ಜಾರಿ: ಸಚಿವ ಸಿ.ಸಿ.ಪಾಟೀಲ್

ರಾಜ್ಯದಲ್ಲಿ ತೆಲಂಗಾಣ ಮಾದರಿಯ ಮರಳು ನೀತಿ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

minister c.c. patil statement in hassan
ಸಚಿವ ಸಿ.ಸಿ. ಪಾಟೀಲ್

ಹಾಸನ:ರಾಜ್ಯದಲ್ಲಿ ತೆಲಂಗಾಣ ಮಾದರಿಯ ಮರಳು ನೀತಿ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಹೇಳಿದರು.

ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದಾಗಿ ಸಾರ್ವಜನಿಕರಿಗೆ ಸರಿಯಾಗಿ ಮರಳು ಸಿಗುತ್ತಿರಲಿಲ್ಲ. ದುಪ್ಪಟ್ಟು ಹಣ ನೀಡಿ ಮರಳು ಖರೀದಿಸಬೇಕಾಗಿತ್ತು. ಹಾಗಾಗಿ ಸುಲಭವಾಗಿ ಮರಳು ಸಿಗುವಂತೆ ಮಾಡಲು ತೆಲಂಗಾಣ ಮಾದರಿ ನೀತಿ ಜಾರಿಗೆ ತರಲು ಅಧ್ಯಯನ ನಡೆಸಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಇಲಾಖೆಗೆ ಹೆಚ್ಚಿನ ಆದಾಯ ತರಲು ಹಾಗೂ ಅಕ್ರಮ ಗಣಿಗಾರಿಕೆ ತಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಮೊದಲು ಮತ್ತು ಎರಡು ಬಾರಿಗೆ ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿಗೆ ಪರವಾನಗಿ ರದ್ದು ಪಡಿಸಲಾಗುವುದು. ಇಲಾಖೆಗೆ ಹೊಸ ಆಯಾಮ ತರಲು ಪ್ರಯತ್ನಿಸಲಾಗುವುದು ಎಂದರು. ನೈಸರ್ಗಿಕ ಖನಿಜ ಸಂಪತ್ತು ಲೂಟಿಕೋರರ ವಶವಾಗಲು ಬಿಡುವುದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಬಂಡಿಪುರ ಅರಣ್ಯಕ್ಕೆ ಬೆಂಕಿ ಬೀಳದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಸಚಿವ ಸಿ.ಸಿ. ಪಾಟೀಲ್

ಕಾಡಾನೆಗಳ ಉಪಟಳ ಪ್ರದೇಶದಲ್ಲಿ ರೈಲ್ವೆ ಕಂಬಿ ತಡೆಗೋಡೆ ನಿರ್ಮಿಸಲು 400 ಕೋಟಿ ರೂ. ಯೋಜನೆ ರೂಪಿಸಲಾಗಿದ್ದು, 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮೂರು ವರ್ಷದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿ, ಬೆಳೆ ನಾಶವಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಹಾಗಾಗಿ ಬಜೆಟ್​​ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು. ಈ ಭಾಗದಲ್ಲಿ 18 ಕಿ.ಮೀ. ರೈಲ್ವೆ ಕಂಬಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ನಾಲ್ಕು ಕಿ.ಮೀ. ಕಂಬಿ ಅಳವಡಿಸಲಾಗಿದೆ ಎಂದರು. ಮಲೆನಾಡು ಭಾಗದಲ್ಲಿ ಆನೆ ಕಾರಿಡಾರ್‌ ನಿರ್ಮಾಣಕ್ಕೆ ಭೂಮಿ ಸಿಗುವುದು ಕಷ್ಟ. ಕಾಡಾನೆಗಳು ಬೇರೆ ಭಾಗದಿಂದ ಬಂದ ಆನೆಗಳನ್ನು ತಮ್ಮ ಕಾರಿಡಾರ್​​ಗೆ ಸೇರಿಸುವುದಿಲ್ಲ. ರೈತರ ಬೆಳೆ ರಕ್ಷಣೆಗೆ ರೈಲು ಕಂಬಿ ಅಳವಡಿಕೆ ಸಹಕಾರಿಯಾಗಲಿದೆ ಎಂದರು.

ಇನ್ನು ಹತ್ತು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೆಚ್. ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ‘ಸಂಪುಟ ವಿಸ್ತರಣೆ ದಿನವನ್ನು ಕರಾಳ ದಿನ’ ಎಂಬ ಉಗ್ರಪ್ಪ ಟೀಕೆಗೆ ಪ್ರತಿಕ್ರಿಯಿಸಿ, ‘ಉಗ್ರಪ್ಪ ಈವರೆಗೂ ಯಾರನ್ನು ಹೊಗಳಿದ್ದಾರ..? ಹಾಗಾದರೆ ಅವರು ಸಂಸದರಾಗಿದ್ದು ಸುದಿನವೇ..? ಚುನಾಯಿತ ಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸಿದಕ್ಕೆ ಶುಭ ಹಾರೈಸಬೇಕು’ ಎಂದು ತಿರುಗೇಟು ನೀಡಿದರು. ಯಾವುದೇ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಬಿಎಸ್​​ವೈ ಅವರಿಗೆ ಹೈಕಮಾಂಡ್‌ ಪರಮಾಧಿಕಾರ ನೀಡಿದೆ. ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಾಮಾನ್ಯ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು

ABOUT THE AUTHOR

...view details