ಕರ್ನಾಟಕ

karnataka

By

Published : Sep 3, 2019, 11:14 AM IST

ETV Bharat / state

ಮಾಡಾಳು ಗೌರಮ್ಮನ ವಿಜೃಂಭಣೆಯ ಜಾತ್ರಾ ಮಹೋತ್ಸವ

ರಾಜ್ಯದೆಲ್ಲೆಡೆ ಗಣೇಶೋತ್ಸವಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದರೆ, ಹೊಯ್ಸಳರ ನಾಡು, ಶಿಲ್ಪಕಲೆಗಳ ಬೀಡು ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ವಿಘ್ನೇಶ್ವರನ ತಾಯಿ ಗೌರಿ ದೇವಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರ ಮೂಲಕ ಪ್ರತಿ ವರ್ಷದ ಭಾದ್ರಪದ ಮಾಸದ ತದಿಗೆ ದಿನದಂದು ಗ್ರಾಮದ ಹೃದಯ ಭಾಗದಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಹಾರನಹಳ್ಳಿ ಕೋಡಿಮಠ ಸ್ವಾಮೀಜಿ ಅವರಿಂದ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಮಾಡಾಳು ಗೌರಮ್ಮ

ಹಾಸನ: ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶಕ್ತಿ ದೇವತೆ ಶ್ರೀ ಸ್ವರ್ಣಗೌರಿ ದೇವಿ ಜಾತ್ರಾ ಮಹೋತ್ಸವ ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಉತ್ಸವ ಆರಂಭವಾಗಿವೆ.

ಮಾಡಾಳು ಗೌರಮ್ಮನ ವಿಜೃಂಭಣೆಯ ಜಾತ್ರಾ ಮಹೋತ್ಸವ

ರಾಜ್ಯದೆಲ್ಲೆಡೆ ಗಣೇಶೋತ್ಸವಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದರೆ ಹೊಯ್ಸಳರ ನಾಡು, ಶಿಲ್ಪಕಲೆಗಳ ಬೀಡು, ಕಲ್ಪವೃಕ್ಷಗಳ ತವರೂರು ಎನಿಸಿದ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ವಿಘ್ನೇಶ್ವರನ ತಾಯಿ ಗೌರಿದೇವಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರ ಮೂಲಕ ಪ್ರತಿ ವರ್ಷದ ಭಾದ್ರಪದ ಮಾಸದ ತದಿಗೆ ದಿನದಂದು ಗ್ರಾಮದ ಹೃದಯ ಭಾಗದಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಹಾರನಹಳ್ಳಿ ಕೋಡಿಮಠ ಸ್ವಾಮೀಜಿ ಅವರಿಂದ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಕ್ಷೇತ್ರದ ಧಾರ್ಮಿಕ ಹಿನ್ನೆಲೆ : ಕಳೆದ 145 ವರ್ಷಗಳ ಹಿಂದೆ ಹಾರನಹಳ್ಳಿ ಕೋಡಿಮಠದ ಪರಮ ತಪಸ್ವಿ ಹಾಗೂ ಮಹಾಸ್ವಾಮೀಜಿಗಳಾದ ಶಿವಲಿಂಗ ಸ್ವಾಮೀಜಿ ಅವರು ವಜ್ರದ ಮೂಗುತಿಯನ್ನು ಆಶೀರ್ವದಿಸಿ ಸ್ವರ್ಣಗೌರಿ ದೇವಿ ಮೂರ್ತಿಗೆ ಆಭರಣ ಸಿಂಗರಿಸಿದ್ದರು. ನಂತರ ಧಾರ್ಮಿಕ ವಿಧಿ ವಿಧಾನಗಳಂತೆ ಗೌರಿ ದೇವಿಯನ್ನು ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ತಮ್ಮ ಪರಮಭಕ್ತರಾದ ಮಾದೇಗೌಡರಿಗೆ ಬರಮಾಡಿಕೊಂಡು ದೇವಿಯ ಚರಿತ್ರೆ ಬಗ್ಗೆ ವಿವರಣೆ ನೀಡುತ್ತಾ ಈ ದೇವಿಯ ಮೂರ್ತಿಯು ಸಾಧಾರಣ ಮೂರ್ತಿ ಆಗಿರದೆ ಸಾಕ್ಷಾತ್ ಪಾರ್ವತಿ ದೇವಿ ಎಂದು ಅದರ ಮಹಿಮೆಯನ್ನು ತಿಳಿಸಿದರು.

ಸೆಪ್ಟಂಬರ್ 10 ಅಥವಾ 13 ನಿಮಜ್ಜನ ಮಹೋತ್ಸವ:ಈ‌ ಬಾರಿಯ ಸ್ವರ್ಣ ಗೌರಿ ನಿಮಜ್ಜನ ಮಹೋತ್ಸವವು ಸೆಪ್ಟೆಂಬರ್ 10ರಂದು ಮಹಾಮಂಗಳಾರತಿಯೊಂದಿಗೆ ಪ್ರಾರಂಭವಾಗುತ್ತದೆ. ಮೂರನೇ ದಿನ ಹದಿಮೂರರ ಪ್ರಾತಃಕಾಲದಲ್ಲಿ ಚಂದ್ರ ಮಂಡಲ ಉತ್ಸವ ಹಾಗೂ ದುಗ್ಗಳೋತ್ಸವ ನಡೆಯುವ ಸಮಯದಲ್ಲಿ ಸಹಸ್ರ ಸಂಖ್ಯೆಯಲ್ಲಿ ಜಮಾಯಿಸುವ ಮಹಿಳೆಯರು, ತಲೆಯ ಮೇಲೆ ದುಗ್ಗಳದ ಬಟ್ಟಲನ್ನು, ಒಂದು ಬಟ್ಟಲಿನಲ್ಲಿ ಕರ್ಪೂರದಾರತಿ ಸೇವೆ ಮಾಡುವ ಅಪೂರ್ವ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ನಾಡಿನ ದೂರದ ಊರುಗಳಿಂದ ಸಾಗರೋಪಾದಿಯಲ್ಲಿ ಜನತೆ ಆಗಮಿಸುತ್ತಾರೆ.

ಈ ಎರಡು ದಿನಗಳಂದು ಸ್ವರ್ಣ ಗೌರಿ ದೇವಿಯನ್ನು ಪುಷ್ಪಾಲಂಕೃತವಾದ ಮಂಟಪದ ರಥದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರತಿ ಮನೆಯ ಬಾಗಿಲಿಗೆ ಉತ್ಸವದೊಡನೆ ತೆರಳಿದಾಗ ಮನೆಯ ಗೃಹಿಣಿಯರು ದೇವಿಗೆ ಪೂಜೆ ಸಲ್ಲಿಸಿ ತವರು ಮನೆಯ ಸಂಪ್ರದಾಯದಂತೆ ಮಡಲಕ್ಕಿ ಸಲ್ಲಿಸುತ್ತಾರೆ. ಸಂಜೆ ಐದು ಗಂಟೆಗೆ ಗ್ರಾಮದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಹಾರನಹಳ್ಳಿ ಕೋಡಿಮಠದ ಸ್ವಾಮೀಜಿ ಸಮ್ಮುಖದಲ್ಲಿ ಕರ್ಪೂರದಾರತಿ ಬೆಳಗಿ ನೀರಿನಲ್ಲಿ ನಿಮಜ್ಜನ ಮಾಡಲಾಗುತ್ತದೆ.

ದಿನನಿತ್ಯ ದಾಸೋಹ:ಗೌರಿದೇವಿ ಹಬ್ಬದಿಂದ ವನಿಮಜ್ಜನ ದಿನದ 10 ದಿನಗಳ ಕಾಲ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನ್ನದಾಸೋಹ ನಡೆಸಲಾಗುತ್ತದೆ. ಬರುವ ಭಕ್ತರ ಅನುಕೂಲಕ್ಕಾಗಿ ಆಧುನಿಕವಾಗಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ಖಾಸಗಿ ವಾಹನಗಳೂ ಲಭ್ಯವಿವೆ. ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ವ್ಯತ್ಯಯವಾಗದಂತೆ ಸಿದ್ಧತೆ ಭರದಿಂದ ಸಾಗಿದೆ.

ABOUT THE AUTHOR

...view details