ಕರ್ನಾಟಕ

karnataka

ಸಾರಿಗೆ ನೌಕರರ 4 ದಿನಗಳ ಮುಷ್ಕರ ಅಂತ್ಯ; ಹಾಸನದಿಂದ ಬಸ್‌ ಸಂಚಾರ ಆರಂಭ

By

Published : Dec 15, 2020, 3:56 AM IST

Updated : Dec 15, 2020, 9:46 AM IST

ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಕೆಎಸ್ಆರ್ಟಿಸಿ ಮುಷ್ಕರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಹಾಸನದಿಂದ ಎಂದಿನಂತೆ ಬಸ್ಸುಗಳು ರಸ್ತೆಗಿಳಿದು ಸಂಚಾರ ಆರಂಭಿಸಿವೆ. ಇದಕ್ಕೆ ಪ್ರಯಾಣಿಕರು ಫುಲ್‌ ಖುಷ್‌ ಆಗಿದ್ದು, ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವಕ್ಕೆ ತೆರಳಲು ಬಸ್‌ ನಿಲ್ದಾಣಕ್ಕೆ ಧಾವಿಸಿ ಬಂದರು.

Karnataka Owned Transport Corporation employees strike called off; bus service started
ಸಾರಿಗೆ ನೌಕರರ 4 ದಿನಗಳ ಮುಷ್ಕರ ಅಂತ್ಯ; ಹಾಸನದಿಂದ ಬಸ್‌ ಸಂಚಾರ ಆರಂಭ

ಹಾಸನ: ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಹಗ್ಗಜಗ್ಗಾಟ ಕೊನೆಗೂ ಅಂತ್ಯಗೊಂಡಿದೆ. ಹಾಸನದಿಂದ ಎಂದಿನಂತೆ ಬಸ್ಸುಗಳು ರಸ್ತೆಗಳಿದು ಸಂಚಾರ ಆರಂಭಿಸಿವೆ. ನಾಲ್ಕು ದಿನಗಳಿಂದ ಪರದಾಡಿದ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

ಬೇರೆ ಬೇರೆ ಜಿಲ್ಲೆ ಮತ್ತು ಊರುಗಳಿಂದ ಬಂದಿದ್ದ ಪ್ರವಾಸಿಗರು ಮತ್ತು ಪ್ರಯಾಣಿಕರು ವಾಪಸ್ ತಮ್ಮ ಸ್ಥಳಗಳಿಗೆ ಹೋಗಲಾಗದೆ ಪರದಾಡಿದ್ದರು. ಇದರ ಜೊತೆಗೆ ಸಾಮಾನ್ಯ ಜನರು ಖಾಸಗಿ ವಾಹನಗಳಿಗೆ ದುಬಾರಿ ಹಣ ಪಾವತಿಸಲಾಗದೆ ತಮ್ಮ ಹಲವು ಕೆಲಸ ಕಾರ್ಯಗಳನ್ನು ಮೊಟಕುಗೊಳಿಸಿದ್ದರು. ಇವೆಲ್ಲದರ ನಡುವೆ ಸಾರಿಗೆ ಸಂಸ್ಥೆಯ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಭರವಸೆಯನ್ನು ನೀಡಿದ ಬಳಿಕ ಕೊನೆಗೂ ಪ್ರತಿಭಟನೆಯ ಅಂತ್ಯವಾಗಿರುವುದು ಪ್ರಯಾಣಿಕರಿಗೆ ಖುಷಿ ತಂದಿದೆ.

250ಕ್ಕೂ ಅಧಿಕ ಬಸ್ಸುಗಳ ಸಂಚಾರ ಆರಂಭ

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಮುಷ್ಕರ ಅಂತ್ಯ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಬಸ್ ನಿಲ್ದಾಣಕ್ಕೆ ಮುಗಿಬಿದ್ದಿದ್ದರು. ಲಕ್ಷದೀಪೋತ್ಸವದ ವಿಶೇಷ ಅಂಗವಾಗಿ ಹಾಸನದಿಂದ ಹತ್ತಕ್ಕೂ ಅಧಿಕ ಬಸ್ಸುಗಳ ಸಂಚಾರ ಆರಂಭವಾಗಿದ್ದು, ಬೆಂಗಳೂರು-ಮೈಸೂರು, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಮಡಿಕೇರಿ, ಚಿಕ್ಕಮಗಳೂರು, ಸೇರಿದಂತೆ ನಾನಾ ಭಾಗಗಳಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ನೂರಕ್ಕೂ ಅಧಿಕ ಬಸ್ಸುಗಳ ಸಂಚಾರ ಆರಂಭಿಸಿವೆ. ನಗರ ಸಾರಿಗೆ ಮತ್ತು ಗ್ರಾಮೀಣ ಸಾರಿಗೆ ಸೇರಿದಂತೆ 150 ಬಸ್ಸುಗಳನ್ನು ಹಾಸನದ ಚನ್ನರಾಯಪಟ್ಟಣ ಅರಕಲಗೂಡು, ರಾಮನಾಥಪುರ, ಹೊಳೆನರಸೀಪುರ ಘಟಕಗಳಿಂದ ಬಸ್ ಗಳನ್ನು ರಸ್ತೆಗಿಳಿಸಲಾಗಿದೆ ಎಂದು ನಿಲ್ದಾಣ ಅಧಿಕಾರಿ ಮಂಜುನಾಥ್‌ ಮಾಹಿತಿ ನೀಡಿದರು.

ಸಾರಿಗೆ ನೌಕರರ 4 ದಿನಗಳ ಮುಷ್ಕರ ಅಂತ್ಯ

ಹಾಸನಹಲವು ವರ್ಷಗಳಿಂದ ನಾವು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದು, ಮನವಿಗೆ ಸರ್ಕಾರ ಯಾವುದೇ ಸ್ಪಷ್ಟ ನಿಲುವನ್ನು ಪ್ರಕಟಿಸಿರಲಿಲ್ಲ. ಆದರೆ ಈಗ ಹತ್ತು ಬೇಡಿಕೆಗಳನ್ನು ಈಡೇರಿಸುವ ಮೂಲಕ ಮತ್ತು ಆರನೇ ವೇತನ ಆಯೋಗವನ್ನು 3 ತಿಂಗಳೊಳಗೆ ಪರಿಷ್ಕರಣೆ ಮಾಡುವ ಭರವಸೆಯನ್ನು ನೀಡಿರುವುದರಿಂದ ನಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ ಎನ್ನಬಹುದು. ನಮ್ಮ ಹೋರಾಟಕ್ಕೆ ಸಹಕರಿಸಿದ ಸಾರ್ವಜನಿಕರಿಗೆ ಹಾಗೂ ನಮ್ಮ ಬೆಂಬಲಕ್ಕೆ ನಿಂತ ಮಾಧ್ಯಮದವರಿಗೂ ನಾವು ಧನ್ಯವಾದವನ್ನು ಹೇಳುತ್ತೇವೆ ಎಂದು ಚಾಲಕ ಮತ್ತು ನಿರ್ವಾಹಕರು ಹೇಳಿದರು.

ಪ್ರತಿವರ್ಷ ನಾವು ಹಾಸನದಿಂದ ಲಕ್ಷದೀಪೋತ್ಸವಕ್ಕೆ ತಪ್ಪದೆ ಹೋಗುತ್ತಿದ್ದೆವು. ಆದರೆ 4 ದಿನಗಳಿಂದ ಸಾರಿಗೆ ಸಂಸ್ಥೆಯ ಮುಷ್ಕರದಿಂದ ಲಕ್ಷದೀಪೋತ್ಸವಕ್ಕೆ ಹೋಗುತ್ತೇವೋ ಇಲ್ಲವೋ ಎಂಬ ಆತಂಕ ಉಂಟು ಮಾಡಿತ್ತು. ಆದರೆ ಬಸ್ ಮುಷ್ಕರ ಅಂತ್ಯ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಲಕ್ಷದೀಪೋತ್ಸವಕ್ಕೆ ಹೋಗಲು ಬಹಳ ಉತ್ಸುಕರಾಗಿ ಬಂದಿದ್ದು, ಹಾಸನ ಬಸ್ ನಿಲ್ದಾಣದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿರುವುದಕ್ಕೆ ಸಾರಿಗೆ ಸಂಸ್ಥೆಗೆ ಧನ್ಯವಾದ ಹೇಳುತ್ತೇವೆ. ಜೊತೆಗೆ ಇಷ್ಟು ಬೇಗ ಮುಷ್ಕರ ಅಂತ್ಯಗೊಳ್ಳಲು ಮಾಧ್ಯಮದವರು ಕೂಡ ಕಾರಣರಾಗಿದ್ದೀರಿ ನಿಮಗೂ ನಾವು ಧನ್ಯವಾದಗಳನ್ನ ಹೇಳುತ್ತೇವೆ ಎನ್ನುತ್ತಾರೆ ಧಾರ್ಮಿಕ ಕ್ಷೇತ್ರಗಳಿಗೆ ಹೊರಟ ಪ್ರಯಾಣಿಕರು.

ಒಟ್ಟಾರೆ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸರ್ಕಾರ ಮತ್ತು ಸಾರಿಗೆ ಸಂಸ್ಥೆಯ ನಡುವಿನ ಹಗ್ಗಜಗ್ಗಾಟಕ್ಕೆ ಸರ್ಕಾರದ ಭರವಸೆಯ ಮೂಲಕ ತಾತ್ಕಾಲಿಕ ಅಂತ್ಯ ಕಂಡಿದೆ. ಮೂರು ತಿಂಗಳ ಒಳಗೆ ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ಕೂಡ ಸಾರಿಗೆ ನೌಕರರು ಕೊಟ್ಟಿದ್ದಾರೆ. ಮುಂದೆ ಏನಾಗುತ್ತೆ ಎಂಬುದನ್ನ ಕಾದುನೋಡಬೇಕಿದೆ.

Last Updated : Dec 15, 2020, 9:46 AM IST

ABOUT THE AUTHOR

...view details