ಅರಸೀಕೆರೆ:ಕೊರೊನಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಗರದಲ್ಲಿ ನಡೆಯಿತು.
ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ಜುಲೈ 1 ರಿಂದ ಜಾರಿಗೊಳಿಸಲಾಗಿದ್ದ ಮಧ್ಯಾಹ್ನದ 2 ಗಂಟೆಯ ನಂತರದ ಲಾಕ್ ಡೌನ್ ಅನ್ನು ಸಂಪೂರ್ಣ ಸಡಿಲಿಕೆ ಮಾಡಲಾಗಿತ್ತು. ಇಂದು ತಾಲೂಕು ಕಚೇರಿ ಆವರಣದಲ್ಲಿ ನಡೆದ ಶಾಸಕರ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ನಂತರ, ರಾಜ್ಯ ಸರ್ಕಾರದ ಆದೇಶದಂತೆ ಅರಸೀಕೆರೆಯಲ್ಲೂ ಸಂಪೂರ್ಣ ಲಾಕ್ ಡೌನ್ ತೆಗೆದಿದ್ದು, ಇಂದಿನಿಂದ ವ್ಯಾಪಾರ ವಹಿವಾಟಿನಗೆ ಯಾವುದೇ ನಿರ್ಬಂಧ ಇಲ್ಲ ಎಂದು ಶಾಸಕರು ತಿಳಿಸಿದರು.
ಟಾಸ್ಕ್ ಫೋರ್ಸ್ ಸಭೆಯಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿಕ ಚಕಮಕಿ ಈ ಮಧ್ಯೆ ಲಾಕ್ ಡೌನ್ ಮುಂದುವರೆಸಬೇಕೆ ಬೇಡವೇ ಎಂಬ ಚರ್ಚೆ ನಡೆಸುವಾಗ, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಈ ನಡುವೆ ಶಾಸಕರು ನನ್ನ ಮೇಲೆ ಅವಾಚ್ಯ ಶಬ್ದ ಬಳಕೆ ಮಾಡಿದರು ಎಂದು ಬಿಜೆಪಿ ಕಾರ್ಯಕರ್ತ ಧ್ವನಿ ಏರಿಸಿದಾಗ ಎರಡೂ ಪಕ್ಷದವರ ನಡುವಿನ ಮಾತಿನ ಜಟಾಪಟಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪೊಲೀಸರು ಪ್ರವೇಶ ಮಾಡಿ ವಾತಾವರಣ ತಿಳಿಗೊಳಿಸಿದರು.
ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ, ತಹಶೀಲ್ದಾರ್ ಸಂತೋಷ್ ಕುಮಾರ್, ಗ್ರಾಮಾಂತರ ಪೊಲೀಸ್ ನಿರೀಕ್ಷಕ ವಸಂತ್ ಕುಮಾರ್, ನಗರ ಪೊಲೀಸ್ ನಿರೀಕ್ಷಕ ಚಂದ್ರಶೇಖರಯ್ಯ, ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳು, ಬಿಜೆಪಿ ವಕ್ತಾರ ಎನ್.ಡಿ ಪ್ರಸಾದ್, ನಗರಸಭೆ ಸದಸ್ಯರು, ವರ್ತಕರು ಮತ್ತಿತರರು ಉಪಸ್ಥಿತರಿದ್ದರು.