ಹಾಸನ: ಜಿಲ್ಲೆಯಲ್ಲಿ ಪ್ರತಿನಿತ್ಯ 10ಕ್ಕೂ ಹೆಚ್ಚು ಮಂದಿ ಆಮ್ಲಜನಕ ಕೊರತೆಯಿಂದ ಸಾಯುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಮುಖ್ಯಮಂತ್ರಿಗಳು ಒಂದಿಷ್ಟೂ ಗಮನಹರಿಸುತ್ತಿಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ.
ಹಾಸನದ ಹೊಯ್ಸಳ ಸಭಾಂಗಣದಲ್ಲಿ ಕೋವಿಡ್-19 ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯನ್ನು ರಾಜ್ಯ ಸರ್ಕಾರ ಕಡೆಗಣಿಸಿದ್ದು, ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೀಗೆ ಸರ್ಕಾರ ದ್ವೇಷದ ರಾಜಕಾರಣ ಮಾಡದೆ ಜಿಲ್ಲೆಗೂ ಉತ್ತಮ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ಹಣ ಕಟ್ಟಲು ಸಾಧ್ಯವಾಗದ ಮಹಿಳೆಯರು ತಮ್ಮ ಮಾಂಗಲ್ಯ ಮಾರಿ ಕುಟುಂಬದ ಸದಸ್ಯರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಖಾಸಗಿ ಆಸ್ಪತ್ರೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಜಿಲ್ಲೆಯ ಬಡವರಿಗೆ ಉಚಿತ ಚಿಕಿತ್ಸೆಯ ಸೌಲಭ್ಯ ಒದಗಿಸಬೇಕು. ಈ ಸಂದರ್ಭದಲ್ಲಿ ರಾಜಕೀಯ ಬೇಡ. ಬಡವರ ಪ್ರಾಣ ಉಳಿಸಬೇಕಾಗಿದೆ. ಈ ಕೆಲಸವನ್ನು ತಾವು ಮತ್ತು ಮುಖ್ಯಮಂತ್ರಿಗಳು ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಎರಡು ಸಾವಿರದಷ್ಟು ವೈದ್ಯರ ಕೊರತೆಯಿದ್ದು, ಅದನ್ನು ದಯಮಾಡಿ ಭರ್ತಿ ಮಾಡಬೇಕು. ಮೊನ್ನೆ ಬಂದ ಆರೋಗ್ಯ ಸಚಿವರು ಜಿಲ್ಲೆಗೆ ಸಿಲಿಂಡರ್ ಕೊಡುತ್ತೇನೆ ಎಂದರು. ಹಾಸನದಿಂದ ಮೂರ್ನಾಲ್ಕು ಬಾರಿ ವಾಹನ ಬೆಂಗಳೂರಿಗೆ ಹೋಗಿ ವಾಪಸ್ ಬಂದಿದೆ. ಹೀಗಾದರೆ ಹೇಗೆ ಎಂದು ಆರೋಗ್ಯ ಸಚಿವರಿಗೆ ಇದೇ ಸಂದರ್ಭದಲ್ಲಿ ತಮ್ಮ ಮಾತಿನ ಮೂಲಕ ಕುಟುಕಿದರು.