ಕರ್ನಾಟಕ

karnataka

ETV Bharat / state

ಆರೋಗ್ಯ, ವೈದ್ಯಕೀಯ, ಶಿಕ್ಷಣ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ನೌಕರರ ಪ್ರತಿಭಟನೆ 5ನೇ ದಿನಕ್ಕೆ

2005ರ ಆರಂಭದಿಂದಲೂ ಜಿಲ್ಲೆಯಲ್ಲಿ 1,500 ಜನ ₹10,500 ಸಾವಿರ ಸಂಬಳ ಪಡೆಯುತ್ತಿದ್ದೇವೆ. ನಮಗೆ ಯಾವುದೇ ಭದ್ರತೆ ಇಲ್ಲ, ಭೋನಸ್ ಇಲ್ಲ, ಕಾನೂನು ಪ್ರಕಾರ ಸಮಾನ ಕೂಲಿಗೆ ಸಮಾನ ವೇತನ ಇಲ್ಲ. ನಾಲ್ಕೈದು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಅನೇಕ ಬಾರಿ ಒತ್ತಡ ತರಲಾಗಿದೆ..

By

Published : Sep 29, 2020, 5:20 PM IST

Hassan Medical Education Department Employees Strike
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಸನ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಪ್ರತಿಭನೆ

ಹಾಸನ: ಆರೋಗ್ಯ, ವೈದ್ಯಕೀಯ ಮತ್ತುಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಜತೆಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರ 14 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಐದು ದಿನಗಳಿಂದ ಮುಷ್ಕರ ನಡೆಸಲಾಗುತ್ತಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಹಾಗೂ ಶಿಕ್ಷಣ ಇಲಾಖೆಯಲ್ಲಿರೋ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್‌ ರಾಥೋಡ್‌ ಎಚ್ಚರಿಸಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಸನ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಪ್ರತಿಭಟನೆ

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಇತರೆ ಮ್ಯಾನೇಜ್ಮೆಂಟ್ ಹಾಗೂ ಕಚೇರಿ ಸಿಬ್ಬಂದಿ ಹಲವು ವರ್ಷಗಳಿಂದ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಶಾಂತಿಯುತ ಮುಷ್ಕರ ನಡೆಸಲಾಗುತ್ತಿದೆ. ಆದರೆ, ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಸುಮಾರು 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮ್ಮನ್ನು ಕೆಲಸದಿಂದ ತೆಗೆಸುವಂತೆ ಅಧಿಕಾರಿಗಳಿಂದ ನೋಟಿಸ್‌ ಜಾರಿ ಮಾಡಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

2005ರ ಆರಂಭದಿಂದಲೂ ಜಿಲ್ಲೆಯಲ್ಲಿ 1,500 ಜನ ₹10,500 ಸಾವಿರ ಸಂಬಳ ಪಡೆಯುತ್ತಿದ್ದೇವೆ. ನಮಗೆ ಯಾವುದೇ ಭದ್ರತೆ ಇಲ್ಲ, ಭೋನಸ್ ಇಲ್ಲ, ಕಾನೂನು ಪ್ರಕಾರ ಸಮಾನ ಕೂಲಿಗೆ ಸಮಾನ ವೇತನ ಇಲ್ಲ. ನಾಲ್ಕೈದು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಅನೇಕ ಬಾರಿ ಒತ್ತಡ ತರಲಾಗಿದೆ. ಬಾಂಡ್ ಬರೆದುಕೊಟ್ಟು ಜೀತದಾಳುಗಳ ರೀತಿ ನಾವು ಕೆಲಸ ಮಾಡುತ್ತಿದ್ದೇವೆ. ಬೇಡಿಕೆ ಈಡೇರಿಕೆಗೆ ಸರ್ಕಾರ ನೀಡಿದ್ದ ಮೂರು ತಿಂಗಳ ಗಡುವು ಮುಗಿದಿದೆ ಎಂದರು.

ಐದು ದಿನಗಳಿಂದ ಕೆಲಸಕ್ಕೆ ಹಾಜರಾಗದೆ ಮುಷ್ಕರ ನಡೆಸುತ್ತಿರುವ ಎಲ್ಲಾ ನೌಕರರಿಗೂ ನಿಮ್ಮ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ನೋಟಿಸ್‌ ತಲುಪಿದ 24 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗದಿದ್ದರೆ ವಜಾಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಸುಮಾರು 10 ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡಿರುವ ಅನೇಕರಿಗೆ 40 ವರ್ಷ ದಾಟಿದೆ. ಏಕಾಏಕಿ ಕೆಲಸದಿಂದ ತೆಗೆದ್ರೆ ಪರಿಸ್ಥಿತಿ ಗಂಭೀರವಾಗಲಿದೆ. ಅನೇಕರ ಬದುಕು ಬೀದಿಗೆ ಬರಲಿದೆ ಎಂದು ಅಳಲು ತೋಡಿಕೊಂಡರು.

ರಾಜ್ಯದಲ್ಲಿ 30 ಸಾವಿರ ನೌಕರರಿದ್ದಾರೆ. ಕೋವಿಡ್‌ ಕೆಲಸದಲ್ಲಿ ಇದ್ದರೂ ನಮ್ಗೆ ಯಾವುದೇ ವಿಮಾ ಭದ್ರತೆ ಇಲ್ಲ. ಹೊಸದಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾದವರಿಗೆ ₹25 ಸಾವಿರ ಸಂಬಳ ನೀಡಲಾಗುತ್ತಿದೆ. 56 ಜನರನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗಿದೆ. ನಾವು ಮುಷ್ಕರ ಮಾಡುತ್ತಿರುವುದರಿಂದ ಜನರಿಗೆ ತೊಂದರೆ ಆಗಿದೆ ಎಂದರು.

ಬೇಡಿಕೆ ಈಡೇರಿಸದಿದ್ದರೆ ರಾಜ್ಯ ಸಂಘಟನೆಯ ನಿರ್ದೇಶನದಂತೆ ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರಿಸಲಾಗುವುದು. ರಾಜ್ಯವ್ಯಾಪಿ ರಸ್ತೆಗಿಳಿದು ಹೋರಾಟ ಮಾಡಲಾಗುವುದು. ರಾಜ್ಯಮಟ್ಟದಲ್ಲಿ ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ತಂದಿದ್ದು, ನಮ್ಮ ಬೇಡಿಕೆ ಸ್ಪಂದಿಸುವ ವಿಶ್ವಾಸ‌ ಇದೆ ಎಂದರು.

ABOUT THE AUTHOR

...view details