ಹಾಸನ: ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆ ಕಾರ್ಯ ಎಂಟು ತಾಲೂಕುಗಳಲ್ಲೂ ಶಾಂತಿಯುತವಾಗಿ ಬುಧವಾರ ರಾತ್ರಿ ಮುಕ್ತಾಯಗೊಂಡಿದೆ. ಜಿಲ್ಲೆಯ 245 ಗ್ರಾಮ ಪಂಚಾಯಿತಿಗಳ 3,351 ಕ್ಷೇತ್ರಗಳಿಗೆ ಸದಸ್ಯರನ್ನು ಮತದಾರರು ಆಯ್ಕೆ ಮಾಡಿದ್ದಾರೆ.
ಆಯಾ ತಾಲೂಕಿನ ಎಣಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಂಡು, ರಾತ್ರಿ ಮುಕ್ತಾಯಗೊಂಡಿತು. ಅವಿರೋಧವಾಗಿ ಆಯ್ಕೆಯಾದ 376 ಸ್ಥಾನಗಳನ್ನು ಹೊರತುಪಡಿಸಿ, ಒಟ್ಟು 3,351 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನವಾಗಿತ್ತು. 7,908 ಅಭ್ಯರ್ಥಿಗಳು ಕಣದಲ್ಲಿದ್ದರು.
ಹಲವು ಪಂಚಾಯತಿಗಳಲ್ಲಿ ಹೊಸಬರು ಆಯ್ಕೆಯಾದರೆ, ಕೆಲವು ಕಡೆ ಹಳಬರಿಗೆ ಮತದಾರರು ಮನ್ನಣೆ ನೀಡಿದ್ದಾರೆ. ಕೆಲವರದ್ದು ನಿರೀಕ್ಷಿತ ಗೆಲುವಾದರೆ ಮತ್ತೆ ಕೆಲವು ಕಡೆ ಅಚ್ಚರಿಯ ಫಲಿತಾಂಶ ಹೊರ ಹೊಮ್ಮಿತು. ಮೊದಲ ಬಾರಿಗೆ ಸ್ಪರ್ಧಿಸಿದ್ದ ಡಿವೈಎಫ್ಐ ಜಿಲ್ಲಾಧ್ಯಕ್ಷ ವಾಸುದೇವ್ ಅವರು ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಗ್ರಾಮ ಪಂಚಾಯತಿಯಿಂದ, ಸಕಲೇಶಪುರದ ಆಕ್ಸ್ ಫರ್ಡ್ ಶಾಲೆಯ ದೈಹಿಕ ಶಿಕ್ಷಕ ಹೆಚ್.ಆರ್. ಸುದರ್ಶನ್ ಅವರು ವಳಲಹಳ್ಳಿ ಗ್ರಾಮ ಪಂಚಾಯತಿಯಿಂದ ಹಾಗೂ ಎಂಬಿಎ ಪದವೀಧರ ಮದನ್ ಅವರು ಮಳಲಿ ಗ್ರಾಮ ಪಂಚಾಯತಿಯ ಚೊಚ್ಚಲ ಗೆಲುವು ದಾಖಲಿಸಿದ್ದಾರೆ.
ಹಾಸನ ತಾಲೂಕಿನ ಹನ್ನೊಂದು ಗ್ರಾಮ ಪಂಚಾಯತಿಗಳ ಮತ ಎಣಿಕೆ ಸರ್ಕಾರಿ ಕಾಲೇಜಿನಲ್ಲಿ ನಡೆಯಿತು. ಕಾಲೇಜು ಮುಂಭಾಗ ಹಾಗೂ ಸುತ್ತಮುತ್ತ ಅಭ್ಯರ್ಥಿಗಳ ಬೆಂಬಲಿಗರು ಜಮಾಯಿಸಿದ್ದರು. ಆರ್.ಸಿ ರಸ್ತೆ, ಸಾಲಗಾಮೆ ರಸ್ತೆ, ಎಂ.ಜಿ ರಸ್ತೆ ಹಾಗೂ ಕಲಾ ಕಾಲೇಜು ಪ್ರವೇಶ ದ್ವಾರದಲ್ಲಿ ಹೂವಿನ ಹಾರ ಹಿಡಿದು ತಮ್ಮ ಬೆಂಬಲಿತ ಅಭ್ಯರ್ಥಿಯ ಫಲಿತಾಂಶಕ್ಕಾಗಿ ಕಾದು ನಿಂತಿದ್ದರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಜೊತೆಗೆ ಸಿಡಿಸಲು ತಂದಿದ್ದ ಪಟಾಕಿಯನ್ನು ಪೊಲೀಸರು ವಶಕ್ಕೆ ಪಡೆದರು.
ಗೆದ್ದವರನ್ನ ಹೊತ್ತು ಕುಣಿಸಿದ ಬೆಂಬಲಿಗರು:
ಕಾಲೇಜು ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧಿಸಲಾಗಿತ್ತು. ಅಭ್ಯರ್ಥಿ ಹಾಗೂ ಏಜೆಂಟ್ಗಳಿಗೆ ಕಾಲೇಜು ಮೈದಾನದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ವಿಜೇತ ಅಭ್ಯರ್ಥಿಗಳ ಹೆಸರು ಘೋಷಿಸುತ್ತಿದ್ದಂತೆ ಬೆಂಬಲಿಗರು ಶಿಳ್ಳೆ, ಜೈಕಾರ ಹಾಕಿ ಸಂಭ್ರಮಿಸಿದರು. ಹೂವಿನ ಹಾರ ಹಾಕಿ, ಹೆಗಲ ಮೇಲೆ ಹೊತ್ತು ಕುಣಿದಾಡಿದರು.
ಇನ್ನು ಹಾಸನ ತಾಲೂಕಿನಲ್ಲಿ ವಿಜೇತ ಅಭ್ಯರ್ಥಿಗಳ ವಿವರವನ್ನು ನೋಡುವುದಾದರೇ, ಜಾಗರವಳ್ಳಿ ಗ್ರಾಮ ಪಂಚಾಯತಿ ಮಲ್ಲೇನಹಳ್ಳಿ ಕ್ಷೇತ್ರದಿಂದ ಭಾರತಿ ಮತ್ತು ವೆಂಕಟೇಶ್, ಹೊಸೂರು ಕ್ಷೇತ್ರದಿಂದ ನಂಜೇಗೌಡ, ರಾಜಶೇಟ್ಟಿ (ಅವಿರೋಧ), ಜ್ಯೋತಿ, ಜಾಗರವಳ್ಳಿ ಕ್ಷೇತ್ರದಿಂದ ಪೂರ್ಣಿಮಾ (ಅವಿರೋಧ), ರಾಮಮ್ಮ, ಬಿ.ಜೆ.ಮಾರನಹಳ್ಳಿ ಕ್ಷೇತ್ರದಿಂದ ನವೀನ್ ಕುಮಾರ್, ಅಶೋಕ, ಮಲಗೋಡನಹಳ್ಳಿ ಕ್ಷೇತ್ರದಿಂದ ನಂಜಮ್ಮ, ಪಾರ್ವತಮ್ಮ ಆಯ್ಕೆಯಾದರು.
ಕಬ್ಬಳ್ಳಿ ಗ್ರಾಮ ಪಂಚಾಯತಿಯ ಕಬ್ಬಳ್ಳಿ ಕ್ಷೇತ್ರದಿಂದ ಯಶೋಧ, ಜಿ.ಎಸ್.ಉಮೇಶ್, ಮಹದೇವರಹಳ್ಳಿ ಕ್ಷೇತ್ರದಿಂದ ಹೊನ್ನೇಗೌಡ, ಮಂಜಯ್ಯ, ಮುದ್ಲಾಪುರ ಕ್ಷೇತ್ರದಿಂದ ಟಿ.ಸಿ. ರಂಜಿತ, ಮುದ್ಲಾಪುರ ಕ್ಷೇತ್ರದಿಂದ ಹೊನ್ನೇಗೌಡ, ಹಳೇಕೊಪ್ಪಲು ಕ್ಷೇತ್ರದಿಂದ ಎಸ್.ಎಲ್. ರಜನಿ, ಸೋಮನಹಳ್ಳಿ ಕ್ಷೇತ್ರದಿಂದ ಕಲಾ, ಎಸ್.ಎಸ್. ಪುಟ್ಟರಾಜು, ಜೆ. ಪೂಜಾ, ಸೋಮನಹಳ್ಳಿ ಕ್ಷೇತ್ರದಿಂದ ಸಿ.ಟಿ. ಮಂಜುಳ ಈ ನಾಲ್ಕು ಸ್ಥಾನಕ್ಕೂ ಅವಿರೋಧ ಆಯ್ಕೆಯಾಗಿದೆ.