ಹಾಸನ: ಜನರಿಗೆ ರಕ್ಷಣೆ ನೀಡಬೇಕಾದ ಮಂತ್ರಿಗಳೇ ಕಾನೂನು ಮೊರೆ ಹೋದ್ರೆ, ಜನಸಾಮಾನ್ಯರ ಪಾಡೇನು.? ನಾನು ಹೇಳುತ್ತೇನೆ ಇಂದು ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನರು ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡುವ ವಿಶ್ವಾಸ ಇದೆ. ಉಪ ಚುನಾವಣೆಯಲ್ಲಿ ನಾಲ್ಕೂ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ರು.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹುಟ್ಟೂರು ಹರದನಹಳ್ಳಿಯ ಶಿವನ ದೇವಾಲಯಕ್ಕೆ ನಿನ್ನೆ ಸಂಜೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಿನ ಬೆಳವಣಿಗೆಯಿಂದ ಜನಪ್ರತಿನಿಧಿಗಳ ಮೇಲೆ ಜನರಿಗೆ ಅಸಹ್ಯ ಮೂಡುವಂತಿದೆ. ನಾಡಿಗೆ ಒಳಿತಾಗಲಿ ಎಂದು ಮನೆದೇವರಲ್ಲಿ ಪ್ರಾರ್ಥಿಸಿದ್ದೇನೆ. ಮೈತ್ರಿ ಸರ್ಕಾರ ಅಭಿವೃದ್ಧಿ ಮಾಡುತ್ತಿಲ್ಲ ಎಂದು ನಮ್ಮನ್ನು ತೆಗೆದು ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಬಜೆಟ್ ನಲ್ಲಿ ಯಾವುದೇ ಸ್ಪಷ್ಟತೆ ಕಾಣುತ್ತಿಲ್ಲ. ಬಜೆಟ್ ನ ಮೌಲ್ಯಗಳೇ ಕುಸಿಯುವಂತೆ ಮಾಡಿದ್ದಾರೆ. ಆಯವ್ಯವನ್ನು ಎಲ್ಲಿಯೂ ಸ್ಪಷ್ಟವಾಗಿ ತೋತಿಸಿಲ್ಲ. ಜನರು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಸಂದರ್ಭ ಬಂದಾಗ ಜನರೇ ಅವರಿಗೆ ಉತ್ತರ ನೀಡುತ್ತಾರೆ ಎಂದರು.