ಹಾಸನ: ಅಂತು - ಇಂತು ಜೆಡಿಎಸ್ ಭದ್ರ ಕೋಟೆಯಲ್ಲಿ ಬಿಜೆಪಿ ಒಂದೊಂದೇ ಬಾಗಿಲು ಒಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿದೆ.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಿದೆ. ಇದರ ಜೊತೆಗೆ ಅರಸೀಕೆರೆಯ ನಗರಸಭೆ ಕೂಡ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಈಗ ಮೊದಲ ಬಾರಿಗೆ ಅರಸೀಕೆರೆಯಲ್ಲಿ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನವು ಕಮಲ ಪಾಳಯಕ್ಕೆ ಒಲಿದಿದೆ.
ಅರಸೀಕೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆದೇಶ ಹೊರಡಿಸಿರುವುದು ಹಿರಿಯ ಬಿಜೆಪಿ ಮುಖಂಡ ಎನ್. ಡಿ ಪ್ರಸಾದ್ ಮೊದಲ ಬಾರಿಗೆ ಅರಸೀಕೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಶಿವನ್, ರಂಗನಾಥ್ ಮತ್ತು ರವಿಕುಮಾರ್ ಸದಸ್ಯರಾಗಿ ಆಯ್ಕೆಯಾಗಿರುವುದು ಕೇಸರಿ ಪಾಳಯದಲ್ಲಿ ರಾಜಕೀಯ ಗರಿಗೆದರಿದೆ.
2004ರಲ್ಲಿ ಅರಸೀಕೆರೆ ಶಾಸಕರಾಗಿ ಬಿಜೆಪಿಯ ಎ.ಎಸ್ ಬಸವರಾಜು ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ವಹಿಸಿದ್ದು, ಬಿಟ್ಟರೆ ಯಾವ ಕ್ಷೇತ್ರದಲ್ಲೂ ಬಿಜೆಪಿ ಅಧಿಕಾರವನ್ನು ಹಿಡಿದಿರಲಿಲ್ಲ. ಆದರೆ, ಇತ್ತೀಚೆಗೆ ಅರಸೀಕೆರೆಗೆ ಬಂದ ಬಿಎಸ್ ಯಡಿಯೂರಪ್ಪ ರಾಜಕೀಯ ಆಪ್ತ ಕಾರ್ಯದರ್ಶಿ ಸಂತೋಷ್ ಹೊಸ ಕ್ರಾಂತಿಯನ್ನೇ ಆರಂಭಿಸಿದ್ದಾರೆ.
ಸಾಮಾಜಿಕ ಕಾರ್ಯಗಳೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿರುವ ಜೊತೆಜೊತೆಗೆ ರಾಜಕೀಯದಲ್ಲೂ ಕೂಡ ಹೊಸ ಬದಲಾವಣೆ ತರುತ್ತಿದ್ದಾರೆ. ಆದರೆ, ಸ್ವಪಕ್ಷೀಯರಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಅಭಿವೃದ್ಧಿ ಕಾರ್ಯವನ್ನು ಬೆಂಬಲಿಸದೇ ಸಂತೋಷ ವಿರುದ್ಧ ಧ್ವನಿ ಎತ್ತಿ ಕಮಲವನ್ನು ಇಬ್ಬಾಗ ಮಾಡಿ, ಆಂತರಿಕ ದೇವತೆ ಈಗ ರಾಜ್ಯ ನಾಯಕರ ಅಂಗಳದಲ್ಲಿದೆ.
ಇದರ ಜೊತೆಗೆ ಮೊದಲ ಬಾರಿಗೆ ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರದ ಚುಕ್ಕಾಣಿಯನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆದ ಹಿನ್ನೆಲೆ ಜೆಡಿಎಸ್ ಪಾಳಯದಲ್ಲಿ ನಡುಕ ಉಂಟಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ಮತ್ತು ಮುಂಬರುವ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಗಟ್ಟಿಯಾಗುವುದರಲ್ಲಿ ಅನುಮಾನವೇ ಇಲ್ಲ.