ಕರ್ನಾಟಕ

karnataka

ಹಾಸನ ಇತಿಹಾಸದಲ್ಲಿ ಅತಿಭ್ರಷ್ಟ ಶಾಸಕ ಪ್ರೀತಂ ಗೌಡ.. ಕೈ ಮುಖಂಡ ಹೆಚ್​ಕೆ ಮಹೇಶ್ ಆರೋಪ

By

Published : Feb 3, 2021, 9:29 PM IST

Updated : Feb 3, 2021, 11:43 PM IST

ಹಿಂದೆ ಕೂಡ ಜ್ವಾಲಾನಯ್ಯ, ಹನುಮೇಗೌಡರು, ಹೆಚ್ ಎಸ್ ಪ್ರಕಾಶ್ ಕೂಡ ನಾಲ್ಕು ಬಾರಿ ಶಾಸಕರಾಗಿದ್ದರು. ಆದರೆ, ಅವರು ಕೇವಲ ₹75 ಲಕ್ಷವನ್ನು ಮುಂದಿನ ಚುನಾವಣೆಗೆ ಸಂಗ್ರಹಿಸಲು ಬಹಳ ಕಷ್ಟಪಡುತ್ತಿದ್ದರು. ಅಂತಹ ಉತ್ತಮ ಶಾಸಕರುಗಳ ನಡುವೆ ಯುವ ಶಾಸಕ ಹಾಸನದ ಇತಿಹಾಸದಲ್ಲೇ ಭ್ರಷ್ಟ ಶಾಸಕರಾಗಿರುವುದು ನಾವು ಎಂದೂ ಕಂಡಿಲ್ಲ..

Hassan
ಪ್ರೀತಂಗೌಡ-ಹೆಚ್.ಕೆ.ಮಹೇಶ್

ಹಾಸನ :ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಹಾಸನದ ಶಾಸಕ ಪ್ರೀತಂಗೌಡ ನೂರಾರು ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಈ ಹಣ ಎಲ್ಲಿಂದ ಬಂತು ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಕಾಂಗ್ರೆಸ್ ಮುಖಂಡ ಹೆಚ್ ಕೆ ಮಹೇಶ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೂರಾರು ಕೋಟಿ ಆಸ್ತಿ ಖರೀದಿಗೆ ಶಾಸಕ ಪ್ರೀತಂ ಜೆ ಗೌಡಗೆ ಹಣ ಎಲ್ಲಿಂದ ಬಂತು? ಇದು ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆಯ ಹಣವೋ? ಅಥವಾ ಟ್ರಾಫಿಕ್ ಪೊಲೀಸ್​ರಿಂದ ಕಲೆಕ್ಷನ್ ಮಾಡಿಸುವ ಹಣವೋ? ಕರ್ನಾಟಕ ಕೈಗಾರಿಕಾ ಪ್ರದೇಶದ ಉದ್ಯಮಗಳಲ್ಲಿ ವಸೂಲಿ ಮಾಡಿದ ಹಣವೋ?, ಆರ್​ಟಿಒ ಕಚೇರಿಯಿಂದ ಹೆದರಿಸಿ ವಸೂಲಿ ಮಾಡಿದ ಹಣವೋ? ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಿಂದ ವಸೂಲಿ ಮಾಡಿದ ಹಣವೋ? ಅಭಿವೃದ್ಧಿಗಾಗಿ ತಂದಿದ್ದು ಎಂದು ಗುತ್ತಿಗೆದಾರರಿಂದ 15% ವಸೂಲಿ ಮಾಡಿದ ಹಣವೋ? ಎಂದು ಸಾರ್ವಜನಿಕರಿಗೆ ತಿಳಿಸಬೇಕು. ಇಲ್ಲ ಮುಂದಿನ ದಿನದಲ್ಲಿ ತನಿಖೆ ಮಾಡಿಸುವ ಹಂತಕ್ಕೆ ಹೋಗಬೇಕಾಗುತ್ತದೆ ಎಂದು ಗುಡುಗಿದರು.

ಕೈ ಮುಖಂಡ ಹೆಚ್ ಕೆ ಮಹೇಶ್ ಆರೋಪ

ಶಾಸಕ ಪ್ರೀತಂ ಗೌಡ ತಮ್ಮ ಅಧಿಕಾರವನ್ನು ಉಪಯೋಗಿಸಿಕೊಂಡು ರಾಜರತ್ನಂ ಮಾಚ್ ಇಂಡಸ್ಟ್ರೀಸ್‌ನ ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 15.5 ಕೋಟಿ ಇದೆ. ಆದರೆ, ಶಾಸಕರು ಅಧಿಕಾರಿಗಳಿಗೆ ಒತ್ತಡ ತಂದು ಹೆದರಿಸಿ ಬೆದರಿಸಿ ಸರ್ಕಾರ ನಿಗದಿ ಮಾಡಿದ ಬೆಲೆಗಿಂತ ಕಮ್ಮಿ ಬೆಲೆಗೆ ಅಂದರೆ ₹7.5 ಕೋಟಿಗೆ ನೋಂದಾಯಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.

ನೀವೇ ನೋಂದಾಯಿಸಿಕೊಂಡಿರುವ ಆಸ್ತಿ ₹30 ಕೋಟಿ ಬೆಲೆ ಬಾಳುತ್ತಿದೆ. ನಿಮಗೆ ಕಿಂಚಿತ್ತಾದ್ರೂ ಮಾನ-ಮರ್ಯಾದೆ ಇದ್ರೆ, ನಿಮಗೆ ಎಲ್ಲಿಂದ ಹಣ ಬಂತು ಎಂದು ಸಾರ್ವಜನಿಕರಿಗೆ ತಿಳಿಸಬೇಕು. ನಾನು ಸಾಕಷ್ಟು ಜನರನ್ನು ನೋಡಿದ್ದೇನೆ. ಈ ಮಟ್ಟಕ್ಕೆ ಆಸ್ತಿ ಖರೀದಿ ಮಾಡಿದ್ದನ್ನು ನೋಡಿಲ್ಲ. ಹಾಸನದಲ್ಲೇ ಇಷ್ಟು ಆಸ್ತಿ ಮಾಡಿರುವವರು ಹೊರಗೆ ಇನ್ನೆಷ್ಟು ಆಸ್ತಿ ಗಳಿಸಿರಬಹುದು ಎಂದು ಪ್ರಶ್ನಿಸಿ ಆಸ್ತಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಅತಿ ಚಿಕ್ಕ ವಯಸ್ಸಿನ ಕಡು ಭ್ರಷ್ಟ ಶಾಸಕ ಅಂದರೆ ಅದು ಪ್ರೀತಂ ಗೌಡ. ನೀವು ಯಾವುದೇ ಕಚೇರಿಗೆ ಹೋದರೂ ಅಲ್ಲಿ 50ರಿಂದ 100 ರೂಪಾಯಿಗಳಿಗೆ ಆಗುತ್ತಿದ್ದ ಕೆಲಸ ಈಗ ₹500 ರಿಂದ ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಇದೆಲ್ಲ ಇಂದಿನ ಶಾಸಕನ ಭ್ರಷ್ಟತೆ ಎತ್ತಿ ತೋರಿಸುತ್ತದೆ ಎಂದು ಬಿ ಕೆ ರಂಗಸ್ವಾಮಿ ಕೂಡ ಶಾಸಕರ ವಿರುದ್ಧ ಹರಿಹಾಯ್ದರು.

ಹಿಂದೆ ಕೂಡ ಜ್ವಾಲಾನಯ್ಯ, ಹನುಮೇಗೌಡರು, ಹೆಚ್ ಎಸ್ ಪ್ರಕಾಶ್ ಕೂಡ ನಾಲ್ಕು ಬಾರಿ ಶಾಸಕರಾಗಿದ್ದರು. ಆದರೆ, ಅವರು ಕೇವಲ ₹75 ಲಕ್ಷವನ್ನು ಮುಂದಿನ ಚುನಾವಣೆಗೆ ಸಂಗ್ರಹಿಸಲು ಬಹಳ ಕಷ್ಟಪಡುತ್ತಿದ್ದರು. ಅಂತಹ ಉತ್ತಮ ಶಾಸಕರುಗಳ ನಡುವೆ ಯುವ ಶಾಸಕ ಹಾಸನದ ಇತಿಹಾಸದಲ್ಲೇ ಭ್ರಷ್ಟ ಶಾಸಕರಾಗಿರುವುದು ನಾವು ಎಂದೂ ಕಂಡಿಲ್ಲ ಎಂದು ಆತನ ವಿರುದ್ಧ ಕಿಡಿಕಾರಿದರು.

ಮೇಲಿನ ಆರೋಪ ಹೊತ್ತಿರುವ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ, ಕೇವಲ ಒಂದು ವರ್ಷದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಖರೀದಿ ಮಾಡುತ್ತಿರುವುದು ಈಗ ಪ್ರತಿಪಕ್ಷಗಳಿಗೆ ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಪ್ರತಿಪಕ್ಷ ನಾಯಕರು ಹೇಳುವ ಪ್ರಕಾರ ಇದೊಂದೇ ಆಸ್ತಿಯಲ್ಲ ಹಾಸನ ಹೃದಯಭಾಗದಲ್ಲಿ ಕೂಡ 3-4 ಖಾಲಿ ನಿವೇಶನಗಳನ್ನು ಮತ್ತು ಇತರೆ ಆಸ್ತಿಗಳನ್ನು ಸುಮಾರು 20ರಿಂದ 30 ವರ್ಷಗಳಿಗೆ ಭೋಗ್ಯಕ್ಕೆ ಪಡೆದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.

ಮುಂದಿನ ದಿನಗಳಲ್ಲಿ ಅವುಗಳನ್ನು ಒಂದೊಂದಾಗಿ ಸಾಕ್ಷಿ ಸಮೇತ ಮಾಧ್ಯಮದ ಮುಂದಿಡುವ ಮೂಲಕ ಆತನ ಭ್ರಷ್ಟತೆಯನ್ನು ಬಿಚ್ಚಿಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತೇವೆ ಎಂದು ಹೆಚ್‌ ಕೆ ಮಹೇಶ್‌ ಗುಡುಗಿದ್ದಾರೆ.

Last Updated : Feb 3, 2021, 11:43 PM IST

ABOUT THE AUTHOR

...view details