ಕರ್ನಾಟಕ

karnataka

ETV Bharat / state

ಪೊಲೀಸ್ ಬಲೆಗೆ ಮನೆಗಳ್ಳರು... 33 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ - ಮನೆಗಳ್ಳತನ ಮಾಡುತ್ತಿದ್ದ ಮೂವರ ಬಂಧನ

ಹಾಸನ ಜಿಲ್ಲೆಯ ಹಲವು ಕಡೆ ಮನೆಗಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಪೊಲೀಸರು ಬಂಧಿಸಿ, 32,97,000 ರೂ. ಮೌಲ್ಯದ ಮಾಲು ವಶಕ್ಕೆ ಪಡೆದಿದ್ದಾರೆ.

Arrest of three notorious thieves
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಸುದ್ದಿಗೋಷ್ಠಿ

By

Published : Mar 6, 2020, 3:31 AM IST

ಹಾಸನ: ಜಿಲ್ಲೆಯ ಹಲವು ಕಡೆ ಮನೆಗಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಸುದ್ದಿಗೋಷ್ಠಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಸರಗೂರು ಗ್ರಾಮದ ಫಯಾಜ್ ಅಹಮದ್ (58), ಮೈಸೂರಿನ ರಾಜೇಂದ್ರ ಸಾಗರ ನಿವಾಸಿ ಸೈಯದ್ ನಾಸೀರ್ (52) ಹಾಗೂ ಮೈಸೂರಿನ ಅಶೋಕ್ ರಸ್ತೆ ಕುಂಬಾರಗೆರೆ ನಿವಾಸಿ ಕೇಶವ ಬಾಪುಗಾಯಕ್ವಾಡ್ (46) ಬಂಧಿತ ಆರೋಪಿಗಳು.

ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ಪ್ರಕರಣಗಳ ವಿವರ ಬಿಚ್ಚಿಟ್ಟರು. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ 9, ಸಕಲೇಶಪುರ ಗ್ರಾಮಾಂತರ-2, ಯಸಳೂರು 1, ಆಲೂರು 1, ಬಡಾವಣೆ-3 ಮತ್ತು ಬೇಲೂರಿನಲ್ಲಿ 1 ಸೇರಿ ಒಟ್ಟು 13 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಮಂಡ್ಯ ನಗರದಲ್ಲಿ 3, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ 3 ಮತ್ತು ಕೊಡಗು ಜಿಲ್ಲೆಯ ಶನಿವಾರಸಂತೆಯ ಪೊಲೀಸ್ ಠಾಣೆಯ ವ್ಯಾಪ್ತಿಯ 1 ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಒಟ್ಟು 20 ಪ್ರಕರಣ ಭೇದಿಸುವಲ್ಲಿ ಸಕಲೇಶಪುರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪ್ರಕರಣದ ವಿವರ ನೀಡಿದರು.

ಆರೋಪಿಗಳಿಂದ ಸುಮಾರು 24,75,000 ರೂ. ಬೆಲೆಯ 825 ಗ್ರಾಂ. ಚಿನ್ನಾಭರಣಗಳು ಹಾಗೂ 7,80,000 ರೂ. ಮೌಲ್ಯದ 17 ಕೆ.ಜಿ ಬೆಳ್ಳಿ ವಸ್ತುಗಳು, 30,000 ರೂ. ಬೆಲೆಯ ಲ್ಯಾಪ್ ಟಾಪ್ ಮತ್ತು 12,000 ರೂ. ಬೆಲೆಯ ಗಡಿಯಾರ ಸೇರಿದಂತೆ ಒಟ್ಟು 32,97,000 ರೂ. ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ. ಕಳ್ಳತನ ಮಾಡಲು ಬಳಸುತ್ತಿದ್ದ ಒಂದು ಮಾರುತಿ 800 ಕಾರು, ಕಬ್ಬಿಣದ ರಾಡುಗಳು, ಆಕ್ಸಲ್ ಬ್ಲೇಡ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಹ್ಯಾಂಡ್ ಗ್ಲೌಸ್‍ಗಳನ್ನೂ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು 2019 ಡಿಸೆಂಬರ್ 1 ರಂದು ಸಕಲೇಶಪುರ ತಾಲೂಕು ಹಾನಬಾಳು ಗ್ರಾಮದ ಹರಿಪ್ರಸಾದ್ ಎಂಬುವರ ಮನೆಯ ಹಂಚುಗಳನ್ನು ತೆಗೆದು ಒಳನುಗ್ಗಿ ಸುಮಾರು 35 ಸಾವಿರ ರೂ. ನಗದು ಹಾಗೂ 40 ಗ್ರಾಂ. ತೂಕದ ಚಿನ್ನದ ಅಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಆರೋಪಿ ಫಯಾಜ್ ಅಹಮದ್ ಈ ಹಿಂದೆ ಬೆಂಗಳೂರು ನಗರ ಸೇರಿದಂತೆ ಶಿವಮೊಗ್ಗ, ಉಡುಪಿ, ಮೈಸೂರು, ಹಾಸನ ಜಿಲ್ಲೆಗಳ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ವೇಳೆ ಪ್ರಕರಣವನ್ನು ಭೇದಿಸಿದ ವಿಶೇಷ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಬಿ.ಆರ್. ಗೋಪಿ, ಸಕಲೇಶಪುರ ಪೊಲೀಸ್ ಉಪಾಧೀಕ್ಷಕರು, ಸಕಲೇಶಪುರ ಪೊಲೀಸ್ ವೃತ್ತ ನಿರೀಕ್ಷಕ ಬಿ.ಪಿ. ಗಿರೀಶ್, ಎಸ್.ಐಗಳಾದ ರಾಘವೇಂದ್ರ, ಬಿ.ಎನ್. ಚಂದ್ರಶೇಖರ್ ಹಾಗೂ ಸಿಬ್ಬಂದಿ ಸತೀಶ್, ನಾಗರಾಜು, ಶಿವಪ್ರಕಾಶ, ದಿನೇಶ, ಲೋಕೇಶ, ಪೃಥ್ವಿ, ಸುನಿಲ್, ಅಶೋಕ, ಪುನೀತ್, ಪೀರ್ ಖಾನ್ ಹಾಗೂ ಜೀಪಿನ ಚಾಲಕ ಶಬ್ದುಲ್ ರೆಹಮಾನ್‍ರ ಕಾರ್ಯಾಚರಣೆ ಮೆಚ್ಚಿ ಪ್ರಶಂಸೆ ಪತ್ರ ನೀಡಿ ಅಭಿನಂದಿಸಲಾಯಿತು.

ABOUT THE AUTHOR

...view details