ಹಾಸನ: ಜೆಡಿಎಸ್ ತೊರೆದು ಬಿಜೆಪಿ ಸೇರುವಂತೆ ಕೆಲವರು ಒತ್ತಡ ಹಾಕ್ತಿದ್ದಾರೆ. ಇದೇ ರೀತಿ ಕಿರುಕುಳ ನೀಡಿದರೆ, ನಾವು ಡೆತ್ನೋಟ್ ಬರೆದಿಟ್ಟು ಸಾಯುತ್ತೇವೆ ಎಂದು ಅರಸೀಕೆರೆ ನಗರಸಭೆ ಸದಸ್ಯೆ ಕಲೈ ಅರಸಿ ತಮಿಳುನಾಡಿನಿಂದ ವಿಡಿಯೋ ಹರಿಬಿಟ್ಟಿದ್ದಾರೆ.
ಹೀಗೆ ಕಿರುಕುಳ ನೀಡಿದ್ರೆ, ನಾವು ಡೆತ್ನೋಟ್ ಬರೆದಿಟ್ಟು ಸಾಯುತ್ತೇವೆ: ಅರಸೀಕೆರೆ ನಗರಸಭೆ ಸದಸ್ಯೆ ಈ ಹಿಂದೆ ಜಿಲ್ಲೆಯ ಅರಸೀಕೆರೆ ನಗರಸಭೆಯ 7 ಮಂದಿ ಸದಸ್ಯರುಗಳು ಜೆಡಿಎಸ್ ವಿರುದ್ಧ ಬಂಡಾಯ ಎದ್ದು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಆದರೆ, ಆ 7 ಮಂದಿಯಲ್ಲಿ ಸದಸ್ಯೆ ಕಲೈ ಅರಸಿ ಬಿಜೆಪಿಗೆ ಬೆಂಬಲ ನೀಡಿದ ಕೇವಲ 1 ಗಂಟೆಯಲ್ಲೇ ಉಲ್ಟಾ ಹೊಡೆದಿದ್ದರು. ಜೊತೆಗೆ ಜೆಡಿಎಸ್ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರಿದರೆ 25 ಲಕ್ಷ ಕೊಡುತ್ತೇವೆಂದು ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ದೂರವಾಣಿ ಕರೆಯ ಮೂಲಕ ನನಗೆ ಆಮಿಷವೊಡ್ಡಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ ಅಂತಾ ಹೇಳಿದ್ದಾರೆ.
ಇದನ್ನೂ ಓದಿ:25 ಲಕ್ಷ ಕೊಡ್ತೀವಿ, ಪಕ್ಷಕ್ಕೆ ಬನ್ನಿ ಅಂದ್ರು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್; ಕಲೈ ಅರಸಿ
ಪ್ರಕರಣ ಹಿನ್ನೆಲೆಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲರಾಗಿದ್ರು. ಬಳಿಕ ಕಲೈ ಅರಸಿ ತನಗೆ ಆಮಿಷವೊಡ್ಡಿದ್ದ 1ನೇ ವಾರ್ಡ್ ಬಂಡಾಯ ಸದಸ್ಯ ಹರ್ಷವರ್ಧನ್ ಹಾಗೂ ಸದಸ್ಯೆ ಆಯಿಷಾ ಪತಿ ಸಿಖಂದರ್ ವಿರುದ್ಧ ಅರಸೀಕೆರೆಯಲ್ಲಿ ದೂರು ದಾಖಲಿಸಿದ್ರು. ಈ ಎಲ್ಲಾ ಬೆಳವಣಿಗೆ ನಡುವೆ ಮೂರು ದಿನಗಳ ಹಿಂದೆ ತಮಿಳುನಾಡಿಗೆ ಹೋಗಿರುವ 2ನೇ ವಾರ್ಡ್ ಸದಸ್ಯೆ ಕಲೈ ಅರಸಿ, ನಾವು ಅರಸೀಕೆರೆಯಲ್ಲಿದ್ದಾಗಲೂ ತುಂಬಾ ಟಾರ್ಚರ್ ಕೊಟ್ಟಿದ್ದಾರೆ. ಇದೀಗ ಹೊಸೂರಿನಲ್ಲಿರುವ ತಂಗಿ ಮನೆಗೆ ಬಂದಿದ್ದೇವೆ. ಇಲ್ಲಿಗೂ ಬಂದು ಹರ್ಷವರ್ಧನ್, ಸಿಖಂದರ್, ಗಿರೀಶ್ ಅವರು ಹಿಂಸೆ ನೀಡುತ್ತಿದ್ದಾರೆ. ನಮಗೆ ಹಿಂಸೆ ನೀಡಬೇಡಿ. ನಾವು ಜೆಡಿಎಸ್ ಬಿಟ್ಟು ಬರುವುದಿಲ್ಲ. ನಮಗೆ ದುಡ್ಡು ಬೇಡ. ಈ ರೀತಿ ಕಿರುಕುಳ ನೀಡಿದರೆ ನಾವು ನಿಮ್ಮ ಹೆಸರು ಬರೆದಿಟ್ಟು ಸಾಯುತ್ತೇವೆ ಅಂತ ವಿಡಿಯೋ ಹರಿಬಿಟ್ಟಿದ್ದಾರೆ.
ಹರ್ಷ ಸೇರಿದಂತೆ ಉಳಿದ ಬಂಡಾಯ ಸದಸ್ಯರು ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಾವು ಅರಸೀಕರೆ ಬಿಟ್ಟು ತಮಿಳುನಾಡಿನ ಹೊಸೂರಿಗೆ ಹೋದ್ರು ಬಿಡುತ್ತಿಲ್ಲ. ಹಣದ ವಿಚಾರವಾಗಿ ಒತ್ತಾಯ ಮಾಡುತ್ತಿದ್ದಾರೆ. ನಮಗೆ ಹಿಂಸೆ ನೀಡಿದ್ರೆ ಸುಮ್ಮನಿರೊಲ್ಲ ಅಂತಾ ಕಲೈ ಅರಸಿ ಪತಿ ಸುಧಾಕರ್ ಕೂಡಾ ಧಮ್ಕಿ ಹಾಕಿದ್ದಾರೆ.
ಇದನ್ನೂ ಓದಿ:ವಿಡಿಯೋ ಮೂಲಕ ಅರಸೀಕೆರೆ ಶಾಸಕರ ವಿರುದ್ಧ ನಗರಸಭೆ ಸದಸ್ಯರ ಅಸಮಾಧಾನ