ಕರ್ನಾಟಕ

karnataka

By

Published : Nov 18, 2020, 7:42 PM IST

ETV Bharat / state

ಪ್ರಮುಖ ಹೋರಾಟಗಳಲ್ಲಿ ಜೈಲು ಸೇರಿದ್ದ ಕೊಟ್ಟೂರು ಶ್ರೀನಿವಾಸ್

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹೋರಾಟಗಾರ ಕೊಟ್ಟೂರು ಶ್ರೀನಿವಾಸ್​ ಅವರು ಮಂಗಳೂರಿನ ಫಾದರ್ ಮುಲ್ಲರ್ ‌‌ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ..

kottur-srinivas-passes-away
ಕೊಟ್ಟೂರು ಶ್ರೀನಿವಾಸ್

ಹಾಸನ: ಹೋರಾಟಗಾರ, ರೈತ ಸಂಘಟನೆ, ಸಾಕ್ಷರತಾ ಆಂದೋಲನ ಮತ್ತು ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡ ಕೊಟ್ಟೂರು ಶ್ರೀನಿವಾಸ್ (62) ಇನ್ನೂ ನೆನಪು ಮಾತ್ರ. ಅವರು ನಿಧನರಾದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ವಿವಿಧ ಸಂಘಟನೆಯ ಮುಖಂಡರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು.

ಕರ್ನಾಟಕ ರಾಜ್ಯ ರೈತ ಸಂಘಟನೆಯ ಹಾಸನ ಜಿಲ್ಲಾ ಅಧ್ಯಕ್ಷರಾಗಿದ್ದರು. ಕಿಡ್ನಿ ವೈಫಲ್ಯದ ಕಾರಣ ತೀವ್ರ ಅನಾರೋಗ್ಯದಿಂದಾಗಿ ಬಳಲುತ್ತಿದ್ದು, ಮಂಗಳೂರಿನ ಫಾದರ್ ಮುಲ್ಲರ್ ‌‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ಅಂತಿಮ ದರ್ಶನ ಪಡೆದ ಜನತೆ

ಕೊಟ್ಟೂರು ಶ್ರೀನಿವಾಸ್ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾಗಿದ್ದು, ಹಾಸನದಲ್ಲಿ ಬಂದು ನೆಲೆಸಿದ್ದರು. ರೈತ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರಿಂದ ಸ್ಪೂರ್ತಿ ಪಡೆದು ರೈತ ಚಳವಳಿಗೆ ಧುಮುಕಿ ಹಲವು ಹೋರಾಟಗಳಿಗೆ ನಾಯಕತ್ವ ನೀಡಿದ್ದರು.

ಜಿಲ್ಲೆಯಲ್ಲಿ ನಡೆದ ನೀರಾ ಚಳವಳಿ, ಆನ್​​ಲೈನ್ ಲಾಟರಿ ವಿರುದ್ಧದ ಹೋರಾಟ, ಪಂಪ್​​ಸೆಟ್ ಮೀಟರ್ ಅಳವಡಿಕೆ ವಿರುದ್ಧದ ಹೋರಾಟಗಳಲ್ಲಿ ಸಕ್ರಿಯಯರಾಗಿ ಜೈಲುವಾಸ ಅನುಭವಿಸಿದ್ದರು. ಅವರು ಸಾಕ್ಷರತಾ ಆಂದೋಲನ, ರಂಗಭೂಮಿ, ವಿಜ್ಞಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ರೈತ ಸಂಘಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಟ್ಟೂರು ಶ್ರೀನಿವಾಸ್

ಹಾಸನ ಜಿಲ್ಲೆಯಲ್ಲಿ ಗೆಳೆಯರಾದ​ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಬೆನ್ನೆಲುಬಾಗಿ ನಿಂತು, ವಿದ್ಯುತ್ ಮೀಟರ್ ವಾಪಸಾತಿ ಚಳವಳಿಯಲ್ಲಿ ಬೆಂಗಳೂರಿನ ವಿದ್ಯುತ್ ಕಚೇರಿ ಮುಂದೆ​ ರಸ್ತೆಯಲ್ಲಿ ಹಗಲು-ರಾತ್ರಿ ಸಾವಿರಾರು ರೈತರಿಗೆ ಅಡಿಗೆ ಮಾಡಿ ಉಣ ಬಡಿಸಿದ್ದ ಕ್ಷಣಗಳು ಇನ್ನೂ ಹಸಿರಾಗೀಯೇ ಇದೆ.

ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಮಾರಾಟ, ರಂಗಭೂಮಿ, ಪತ್ರಿಕಾ ಕ್ಷೇತ್ರ ಹೀಗೆ ಎಲ್ಲವನ್ನೂ ಎಡತಾಕೀ ಕೊನೆಗೆ ನೆಲೆಯಾಗಿ ನಿಂತಿದ್ದು ರೈತ ಚಳವಳಿಯಲ್ಲಿ. ಹಾಸನದ ರಂಗಸಿರಿ ರಂಗತಂಡದಲ್ಲಿ ಗುರುತಿಸಿಕೊಂಡು ಬಳಿಕ ಸೂತ್ರಧಾರ ಎಂಬ ರಂಗತಂಡವನ್ನು ಕಟ್ಟಿ ಮಕ್ಕಳ ನಾಟಕ ಶಿಬಿರ, ಬೇಸಿಗೆ ಶಿಬಿರಗಳನ್ನು, ರಂಗನಿರ್ದೇಶಕರಾದ ಮುನಿಚೌಡಪ್ಪ, ಪಿಚ್ಚಳ್ಳಿ ಶ್ರೀನಿವಾಸ ಅವರನ್ನು ಕರೆಸಿ ರಂಗಸೇವೆ ಮಾಡಿದ್ದು, ಅಕ್ಷರ ಆಂದೋಲನದ ಸಕ್ರಿಯವಾಗಿ ಕೆಲಸ ಮಾಡಿದ್ದನ್ನು ಹಾಸನ ಜಿಲ್ಲೆ ಮರೆಯುವಂತಿಲ್ಲ.

ABOUT THE AUTHOR

...view details