ಹಾಸನ: ಅಳಿವಿನಂಚಿನಲ್ಲಿದ್ದ ವಿರೂಪಾಕ್ಷೇಶ್ವರ ದೇವಾಲಯವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಭಿವೃದ್ಧಿ ಪಡಿಸಿದ್ರು. ಈ ಕಾರಣಕ್ಕೆ ದೇವಾಲಯದಲ್ಲಿ ಪತ್ರಿ ಸೋಮವಾರ ಅವರ ಹೆಸರಿನಲ್ಲಿ ಕೃತಜ್ಞತಾಪೂರ್ವಕ ಅಭಿಷೇಕ ನಡೆಸಲಾಗುತ್ತಿದೆ. ಅಲ್ಲದೇ ಶಿವಲಿಂಗದ ಹಿಂಭಾಗದಲ್ಲಿ ಅವರ ಜ್ಞಾಪಕಾರ್ಥ ಸಸಿ ನೆಟ್ಟು ಪೋಷಿಸಲಾಗುತ್ತದೆ.
ನಗರದ ಹೃದಯ ಭಾಗದ ದೊಡ್ಡಬಸದಿ ರಸ್ತೆಯಲ್ಲಿನ ವಿರೂಪಾಕ್ಷೇಶ್ವರ ದೇವಾಲಯ ಕ್ರಿ.ಶ. 913ರಲ್ಲಿ ನಿರ್ಮಾಣಗೊಂಡಿದೆ. ಆದರೆ, ದೇಗುಲ ಅಭಿವೃದ್ಧಿ ಕಾಣದೆ ಅಳಿವಿನಂಚಿಗೆ ಸಾಗಿತ್ತು. ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಅಭಿವೃದ್ಧಿ ಬಗ್ಗೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ತಲೆ ಕೆಡಿಸಿಕೊಂಡಿರಲಿಲ್ಲ. ದೇಗುಲದ ಪ್ರಧಾನ ಅರ್ಚಕರ ಮನವಿಗೆ ಸ್ಪಂದಿಸಿದ ಸಿಂಧೂರಿ, 30 ಲಕ್ಷ ರೂ. ಅನುದಾನ ನೀಡಿ, ದೇಗುಲಕ್ಕೆ ಶೆಡ್, ವಿದ್ಯುತ್ ವ್ಯವಸ್ಥೆ ಜೊತೆಗೆ ಇತರ ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದ್ದರು.
ಅಳಿವಿನಂಚಿನಲ್ಲಿದೆ ದೇಗುಲಕ್ಕೆ ಹೊಸ ರೂಪ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಬಹಳ ಹಿಂದೆ ಭಕ್ತರು, ಪೂರ್ವ ಭಾಗದಲ್ಲಿ ಪ್ರವೇಶಿಸಿ ದಕ್ಷಿಣ ಭಾಗದಲ್ಲಿ ಹೊರ ಬರುತ್ತಿದ್ದರು. ಪ್ರತಿ ವರ್ಷ ಶಿವರಾತ್ರಿ ಮಾರನೇ ದಿನ ಸೂರ್ಯನ ಕಿರಣ ನೇರವಾಗಿ ಶಿವಲಿಂಗ ಸ್ಪರ್ಶಿಸುತ್ತಿದ್ದವು. ಆದರೆ, ಕೆಲವರು ದೇಗುಲದ ಪೂರ್ವಭಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳದಂತೆ ಮಾಡಿದ್ದಾರೆ. ಇದನ್ನು ತೆರವು ಮಾಡಲು ರೋಹಿಣಿ ಶ್ರಮವಹಿಸಿದ್ದರು. ಅಷ್ಟರೊಳಗೆ ಅವರು ಜಿಲ್ಲೆಯಿಂದ ವರ್ಗವಾದರು.
ರೋಹಿಣಿ ಅವರು ದೇಗುಲದ ಅಭಿವೃದ್ಧಿಗೆ ಮಾಡಿದ ಉಪಕಾರ ಮರೆಯುವುದಿಲ್ಲ. ಅದಕ್ಕಾಗಿ ಪ್ರತಿ ಸೋಮವಾರ ಅವರು ಹಾಗೂ ಕುಟುಂಬದ ಹೆಸರಿನಲ್ಲಿ ಅರ್ಚನೆ ಮತ್ತು ರುದ್ರಾಭಿಷೇಕ ಮಾಡಲಾಗುತ್ತದೆ. ದೇಗುಲದ ಆಸ್ತಿ ಒತ್ತುವರಿಯಾಗಿದ್ದನ್ನು ರೋಹಿಣಿ ಸಿಂಧೂರಿ ತೆರವು ಮಾಡಿಸಲು ಪ್ರಯತ್ನಿಸಿದ್ದರು. ಅವರ ವರ್ಗಾವಣೆ ನಂತರ ಒತ್ತುವರಿ ತೆರವಿಗೆ ಯಾರೊಬ್ಬರೂ ಮುತುವರ್ಜಿ ವಹಿಸಿಲ್ಲ.