ಹಾಸನ:ಕೊರೊನಾದಿಂದ ಗುಣಮುಖಳಾಗಿ ಡಿಸ್ಚಾರ್ಜ್ ಆಗಿದ್ದ ಮಹಿಳೆಯ ಮೇಲೆ, ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೊಳೆನರಸೀಪುರ ಮೂಲದ ಸೋಂಕಿತ ಮಹಿಳೆ 14 ದಿನದ ಐಸೋಲೇಷನ್ ಚಿಕಿತ್ಸೆ ಮುಗಿಸಿ, ಶನಿವಾರ ಸಂಜೆ ಮನೆಗೆ ಹೋಗುವಾಗ ಸೆಕ್ಯುರಿಟಿ ಗಾರ್ಡ್ ರಘು ಎಂಬಾತ ಹಲ್ಲೆ ನಡೆಸಿದ್ದಾರೆ.
ತನ್ನದೇ ಊರಿನ ಐದು ವರ್ಷದ ಬಾಲಕಿ ಹಾಗೂ ಮತ್ತೊಬ್ಬ ಮಹಿಳೆಯರೊಟ್ಟಿಗೆ ಹೊರಡಲು, ಗೇಟ್ ಬಳಿ ನಿಂತಿದ್ದಾಗ ದಿಢೀರನೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದು, ಪರಿಣಾಮ ಮಹಿಳೆಯ ಬಲಗೈ ಹಾಗೂ ತಲೆಗೆ ತೀವ್ರ ಏಟು ಬಿದ್ದಿದೆ.
ಗಲಾಟೆ ಹೆಚ್ಚುತ್ತಿದ್ದಂತೆ ಸುತ್ತಲಿನ ಇಪ್ಪತ್ತರಿಂದ ಮೂವತ್ತು ಜನ ಸ್ಥಳಕ್ಕೆ ಜಮಾಯಿಸುತ್ತಿದ್ದಂತೆ ಮಹಿಳೆಗೆ ಹೊಡೆಯುವುದನ್ನು ನಿಲ್ಲಿಸಿ ದೊಣ್ಣೆ ಕೆಳಗೆ ಎಸೆದ ರಘು ಬಿದ್ದು ಒದ್ದಾಡಲು ಶುರು ಮಾಡಿದ್ದಾನೆ. ನಂತರ ವಿಚಿತ್ರವಾಗಿ ಏನೇನೋ ಮಾತನಾಡಿ ಮೈ ಮೇಲೆ ದೆವ್ವ ಬಂದಂತೆ ರಘು ಬಿದ್ದು ಹೊರಳಾಡಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲೂ ನನಗೆ ಆಗಾಗ ದೆವ್ವ ಬರುತ್ತೆ, ಬೇಕು ಅಂತ ಹೊಡೆದಿಲ್ಲ ಎಂದು ಹೇಳಿದ್ದಾನೆ.
ಹೀಗಾಗಿ ಕೊರೊನಾದಿಂದ ಗುಣಮುಖರಾಗಿ ಮನೆಗೆ ಹೋಗಬೇಕಿದ್ದ ಮಹಿಳೆ, ಮತ್ತೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಹಿಮ್ಸ್ ಅಧೀಕ್ಷಕ ಕೃಷ್ಣಮೂರ್ತಿ, ಮಹಿಳೆಗೆ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸಿಬ್ಬಂದಿಗೆ ರೋಗಿಗಳ ಜೊತೆ ಸೌಜನ್ಯದಿಂದ ವರ್ತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ವೇಳೆ ಹಲ್ಲೆ ಮಾಡಿಲ್ಲ ಎಂದು ಸಬೂಬು ಹೇಳಿದ ಸೆಕ್ಯೂರಿಟಿ ಗಾರ್ಡ್ ವಿರುದ್ಧ, ಆಕ್ರೋಶ ಹೊರಹಾಕಿದ ಅವರು ಆತನ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.