ಗದಗ: ಪಟ್ಟಣದ ಪುರಾತನ ಕೆರೆ ಹೂಳು ತುಂಬಿಕೊಂಡು ಅಂತರ್ಜಲ ಬತ್ತಿಹೋಗುತ್ತಿತ್ತು. ಇದನ್ನು ಮನಗಂಡ ಸ್ಥಳೀಯರು ತಮ್ಮ ಸ್ವಂತ ಹಣದಲ್ಲೇ ಕೆರೆಯ ಹೂಳೆತ್ತುವ ಕೆಲಸ ಕೈಗೊಂಡಿದ್ದಾರೆ. ಕೆರೆಯನ್ನು ಸರ್ವೇ ಮಾಡಿ ಹದ್ದನ್ನು ಗುರುತಿಸಿ ಕೊಡಿ ಅಂತಾ ಸ್ಥಳೀಯರು ಮನವಿ ಮಾಡಿದ್ರೂ ಜಿಲ್ಲಾಡಳಿತ ಮಾತ್ರ ಸ್ಪಂದಿಸದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ 87 ಎಕರೆ ವಿಸ್ತಾರವಾದ ಹಿರೇಕೆರೆ ಸೇರಿ 3ಕೆರೆಗಳಿವೆ. ಒಂದು ಕಾಲಕ್ಕೆ ಈ ಕೆರೆಗಳು ಇಡೀ ನರೇಗಲ್ ಪಟ್ಟಣದ ನೀರಿನ ಮೂಲವಾಗಿದ್ದವು. ಆದರೆ, ಕಾಲಕ್ರಮೇಣ ಈ ಕೆರೆಗಳು ಬತ್ತಿಹೋಗಿ, ಹೂಳು ತುಂಬಿವೆ. ಗ್ರಾಮದ ನೆಲ-ಜಲ ಸಂರಕ್ಷಣಾ ಸಮಿತಿ ಸದಸ್ಯರು ತಮ್ಮ ಸ್ವಂತ ಹಣದಲ್ಲಿ ಹೂಳೆತ್ತುವ ಕಾರ್ಯ ಮಾಡಿದ್ದಾರೆ. ಈವರೆಗೂ ಸುಮಾರು 29 ಎಕರೆಯಷ್ಟು ಕೆರೆ ಪ್ರದೇಶದಲ್ಲಿ ಹೂಳನ್ನು ತೆಗೆಯಲಾಗಿದೆ. ಆದರೆ, ಇದರ ಜೊತೆಗಿರುವ ಇನ್ನೆರಡು ಕೆರೆಗಳ ಹೂಳೆತ್ತೋಕೆ ಅವುಗಳ ಪ್ರದೇಶ ಎಲ್ಲಿಂದ ಎಲ್ಲಿಯವರೆಗಿದೆ ಅನ್ನೋ ಸಮಸ್ಯೆ ಎದುರಾಗಿದೆ. ಹೀಗಾಗಿ ಸಮಿತಿಯ ಸದಸ್ಯರು ಗದಗ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರನ್ನು ಭೇಟಿ ಮಾಡಿ ಸರ್ವೇ ಕಾರ್ಯ ಮಾಡಿಸುವಂತೆ ಕಳೆದ 3 ತಿಂಗಳ ಹಿಂದೆಯೇ ಮನವಿ ಮಾಡಿದ್ದಾರೆ. ಆದರೆ, ಅಂದಿನಿಂದ ಈವರೆಗೂ ಜಿಲ್ಲಾ ಭೂಮಾಪನ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ.