ಗದಗ: ನಗರದ ನವೀಕೃತ ಬಸ್ ನಿಲ್ದಾಣ ಹಲವಾರು ಗೊಂದಲಗಳ ನಡುವೆ ಉದ್ಘಾಟನೆ ಗೊಂಡಿದೆ. ಬಸ್ ನಿಲ್ದಾಣಕ್ಕೆ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡಬೇಕು ಎಂದು ಸಾಕಷ್ಟು ಹೋರಾಟ ಮಾಡಲಾಗಿತ್ತು. ಕೊನೆಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡಿ ಉದ್ಘಾಟನೆ ಮಾಡಲಾಯಿತು.
ಹಲವು ಗೊಂದಲಗಳ ನಡುವೆ ಉದ್ಘಾಟನೆಯಾದ ನವೀಕೃತ ಬಸ್ ನಿಲ್ದಾಣ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಹಾಗೂ ಶಾಸಕ ಎಚ್ ಕೆ ಪಾಟೀಲ್ ಅವರ ಮುಸುಕಿನ ಗುದ್ದಾಟದಲ್ಲಿ ಉದ್ಘಾಟನೆ ವಿಳಂಬವಾಗಿತ್ತು. ಹಾಗಾಗಿ ಪ್ರಯಾಣಿಕರು ಹಾಗೂ ಆ ಭಾಗದ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಕೊನೆಗೂ ಬಸ್ ನಿಲ್ದಾಣ ನಿನ್ನೆ ಉದ್ಘಾಟನಾ ಭಾಗ್ಯ ಕಂಡಿತು. ಆದರೆ, ಬಸ್ ನಿಲ್ದಾಣ ಉದ್ಘಾಟನಾ ಆಮಂತ್ರಣ ಪತ್ರಿಕೆ ಯಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರಿಗೆ ಆಹ್ವಾನ ನೀಡಿರಲಿಲ್ಲಾ. ಹೀಗಾಗಿ ಶಾಸಕ ಹೆಚ್ ಕೆ ಪಾಟೀಲ್ ಶ್ರೀ ಮಠಕ್ಕೆ ತೆರಳಿ ಶ್ರೀ ಕಲ್ಲಯ್ಯಜ್ಜನವರ ಮನವೊಲಿಸಿ ಕಾರ್ಯಕ್ರಮಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಸಚಿವ ಲಕ್ಷ್ಮಣ ಸವದಿ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು.
ಓದಿ : ಗದಗ ಬಸ್ ನಿಲ್ದಾಣ ಉದ್ಘಾಟನೆಗೆ ಕಲ್ಲಯ್ಯಜ್ಜ, ತೋಂಟದ ಶ್ರೀಗಳಿಗಿಲ್ಲ ಆಹ್ವಾನ: ಭಕ್ತ ಸಮೂಹ ಬೇಸರ
ಈ ವೇಳೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ನಾಮಕರಣ ಮಾಡಿರುವ, ಈ ಬಸ್ ನಿಲ್ದಾಣ ಉದ್ಘಾಟನೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ, ಇದು ನನಗೆ ಒಲೆದು ಬಂದ ಭಾಗ್ಯ ಎಂದರು.