ಕರ್ನಾಟಕ

karnataka

By

Published : Aug 9, 2022, 8:22 PM IST

ETV Bharat / state

ಗದಗ: ಬೆಳೆಹಾನಿ ಪರಿಶೀಲಿಸಿ ಪರಿಹಾರದ ಭರವಸೆ ನೀಡಿದ ಸಚಿವ ಬಿ.ಸಿ.ಪಾಟೀಲ್

ಗದಗ ಜಿಲ್ಲೆಯಲ್ಲಿ ಒಟ್ಟು 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಬೆಳೆಹಾನಿ ವೀಕ್ಷಣೆ ಮಾಡಿದ ಸಚಿವ ಬಿ ಸಿ ಪಾಟೀಲ್
ಬೆಳೆಹಾನಿ ವೀಕ್ಷಣೆ ಮಾಡಿದ ಸಚಿವ ಬಿ ಸಿ ಪಾಟೀಲ್

ಗದಗ:ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಸಾಕಷ್ಟು ಬೆಳೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಇಂದು ತಾಲೂಕಿನ ಹೊಂಬಳ, ಹೆಚ್.ಎಸ್.ವೆಂಕಟಾಪೂರ ಹಾಗೂ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮಕ್ಕೆ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ ಬೆಳೆಹಾನಿ ವೀಕ್ಷಣೆ ಮಾಡಿದರು.

"ಇಡೀ ರಾಜ್ಯದಲ್ಲಿಯೇ ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆ ಹಾನಿಯಾಗಿದೆ. ಒಟ್ಟು 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗೆ ತೊಂದರೆಯಾಗಿದೆ. ಈ ಪೈಕಿ ಹೆಸರು ಬೆಳೆಯನ್ನು ರೈತರು ಹೆಚ್ಚಾಗಿ ಬೆಳೆದಿದ್ದರು. ಇನ್ನೇನು ಫಸಲು ಬರ್ತಿತ್ತು. ಅಷ್ಟರಲ್ಲೇ ಮಳೆಗೆ ಬೆಳೆ ನಾಶವಾಗಿದೆ. ಈ ಬಗ್ಗೆ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಂಡು ಬೆಳೆ ಪರಿಹಾರ ಕೊಡಲಾಗುವುದು. ಈಗಾಗಲೇ ಇನ್ಸೂರೆನ್ಸ್ ಕಂಪನಿಗಳಿಗೆ ಬೆಳೆಹಾನಿ ಸರ್ವೆ ಮಾಡಲು ಸೂಚಿಸಲಾಗಿದೆ" ಎಂದರು.

ಸಚಿವ ಬಿ ಸಿ ಪಾಟೀಲ್ ಅವರು ಮಾತನಾಡಿರುವುದು

ಹೆಚ್.ಎಸ್.ವೆಂಕಟಾಪೂರ ಗ್ರಾಮದಲ್ಲಿ ಬೆಳೆ ವೀಕ್ಷಣೆ ಮಾಡಿದ ಬಳಿಕ ಸಚಿವರು, ರೈತರ ಸಮಸ್ಯೆಗಳನ್ನು ಆಲಿಸಿದರು. ಮುಖ್ಯವಾಗಿ ಈ ಬಾರಿ ರಸಗೊಬ್ಬರದ ಕೊರತೆಯಾಗಿ ಬಹಳ ಸಮಸ್ಯೆ ಆಗಿದೆ. ಮುಂಬರುವ ಮೆಣಸಿನಕಾಯಿ, ಈರುಳ್ಳಿ ಬೆಳೆಗೆ ರಸಗೊಬ್ಬರ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಡಿಎಪಿ ಸಿಗ್ತಿಲ್ಲ. ಪೊಟ್ಯಾಸಿಯಂ ಗೊಬ್ಬರದ ಬೆಲೆ ದುಬಾರಿಯಾಗಿದೆ. ಕಳೆದ ವರ್ಷ 900 ರೂ. ಇದ್ದ ಪೊಟ್ಯಾಸಿಯಂ ಗೊಬ್ಬರದ ಬೆಲೆ ಈ ವರ್ಷ 1700 ರೂ. ಆಗಿದೆ ಅಂತ ಸಚಿವರ ಮುಂದೆ ಗೋಳು ತೋಡಿಕೊಂಡರು.

ಈ ಸಂದರ್ಭದಲ್ಲಿ ಗದಗ ಜಂಟಿ ಕೃಷಿ ನಿರ್ದೇಶಕ ಜಿಯಾ ಉಲ್ಲಾ ಖಾನ್ ಅವರನ್ನು ಕರೆದು ಗೊಬ್ಬರ ಕೊರತೆ ಯಾಕಾಗಿದೆ? ಅಂತ ಕಾರಣ ಕೇಳಿದರು. ಹಂತ ಹಂತವಾಗಿ ರಸಗೊಬ್ಬರ ತರಿಸಲಾಗ್ತಿದೆ. ಗೊಬ್ಬರ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸಾಲ ಮನ್ನಾ ಮಾಡುವಂತೆ ರೈತರ ಆಗ್ರಹ: ಒಂದು ಕಡೆ ಮಳೆಯಿಂದ ಎಲ್ಲಾ ಬೆಳೆಗಳು ಹಾಳಾಗಿವೆ. ಸಾಲ ಮಾಡಿ ಬೆಳೆ ಬೆಳೆದಿದ್ದೆವು. ಈಗ ಎಲ್ಲವೂ ಮೈಮೇಲೆ ಬಿದ್ದಿದೆ. ಬೆಳೆ ಹಾನಿಯಾಗಿ ಲಾಸ್ ಆಗಿದೆ. ರೈತರಿಗೆ ಬಹಳ ಸಂಕಷ್ಟ ಆಗಿದೆ. ಹೀಗಾಗಿ, ಸಾಲ ಮನ್ನಾ ಮಾಡಿಸಿ ಅಂತ ರೈತರು ಸಚಿವರಿಗೆ ಒತ್ತಾಯಿಸಿದರು.

ಇದನ್ನೂ ಓದಿ:ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಅಕ್ರಮ: ಕಡಿವಾಣಕ್ಕೆ ಸರ್ಕಾರದ ಹೊಸ ಅಸ್ತ್ರವೇನು?

ABOUT THE AUTHOR

...view details