ಕರ್ನಾಟಕ

karnataka

ETV Bharat / state

ಮಲಪ್ರಭೆ ಪ್ರವಾಹಕ್ಕೆ ಸಿಗದ ಶಾಶ್ವತ ಪರಿಹಾರ: ಕಣ್ಣೀರಿಡುತ್ತ ಗ್ರಾಮ ತೊರೆಯುತ್ತಿರುವ ಜನ

ಗದಗ ಜಿಲ್ಲೆಯಲ್ಲಿ ಕೆಲದಿನಗಿಳಿಂದ ಸುರಿದ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೆಲವು ಕಡೆ ನದಿಗಳೆಲ್ಲ ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ಲಖಮಾಪುರ ಗ್ರಾಮದ ಜನರು ಕಣ್ಣೀರು ಹಾಕುತ್ತ ಊರು ತೊರೆಯುತ್ತಿದ್ದಾರೆ.

By

Published : Jul 24, 2021, 9:52 PM IST

Gadag district Lakhmapur victims leaving their village due to flood
ಕಣ್ಣೀರು ಹಾಕುತ್ತಲೆ ಊರು ಬಿಡುತ್ತಿರುವ ಸಂತ್ರಸ್ತರು

ಗದಗ :ಕಳೆದ ಕೆಲ ದಿನಗಳಿಂದ ಮಳೆ ಆರ್ಭಟ ಜೋರಾಗಿದ್ದು, ಮಲಪ್ರಭಾ ನದಿ ಪ್ರವಾಹದಿಂದಾಗಿ ನರಗುಂದ ತಾಲೂಕಿನ ಲಖಮಾಪುರ ಗ್ರಾಮದ ಜನತೆ ಹೈರಾಣಾಗಿದ್ದಾರೆ. ಇಡೀ ಊರಿಗೆ ಊರೇ ಗಂಟುಮೂಟೆ ಕಟ್ಟಿಕೊಂಡು ಹೊರಡಬೇಕಾದ ಪರಿಸ್ಥಿತಿ ಬಂದೊದಗಿದ್ದು, ಸಂತ್ರಸ್ತರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

ಕಣ್ಣೀರು ಹಾಕುತ್ತ ಊರು ಬಿಡುತ್ತಿರುವ ಸಂತ್ರಸ್ತರು

ಗದಗ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ ಗ್ರಾಮದ ಜನರ ಗೋಳು ಇಂದು ನಿನ್ನೆದಲ್ಲ. ದಶಕಗಳಿಂದ ಇವರದು ಇದೇ ಸಮಸ್ಯೆಯಾಗಿದೆ. ಲಖಮಾಪುರ ಗ್ರಾಮ ಮಲಪ್ರಭಾ ನದಿಗೆ ಹೊಂದಿಕೊಂಡಿದ್ದು, ಇಲ್ಲಿರುವ ನದಿ ತುಂಬಿ ಹರಿದರೆ ಗ್ರಾಮದೊಳಗೆ ನುಗ್ಗಿ ನಡುಗಡ್ಡೆಯಾಗಿ ಬೇರೆ ಊರುಗಳ ಸಂಪರ್ಕ ಕಳೆದುಕೊಂಡುಬಿಡುತ್ತದೆ. ಈಗಲೂ ಸಹ ಇದೆ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಸ್ಥರನ್ನು ಸ್ಥಳಾಂತರಿಸಲು ಹರಸಾಹಸ:

ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಪ್ರವಾಹದ ಹಿನ್ನೆಲೆಯಲ್ಲಿ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲು ಹರಸಾಹಸ ಪಡುತ್ತಿದ್ದಾರೆ. ಇಂದು ನದಿಗೆ 20 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ನೀರು ಸಂಪೂರ್ಣ ಗ್ರಾಮದ ಸುತ್ತ ಆವರಿಸಿಕೊಂಡಿದೆ. ಇದರಿಂದ ಇಡೀ ಗ್ರಾಮವನ್ನು ಬೆಳ್ಳೇರಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು.

ಕಣ್ಣಿರಿಟ್ಟ ತಾಯಿ:

ಇನ್ನು ಗ್ರಾಮಸ್ಥರು ಗಂಟುಮೂಟೆ ಕಟ್ಟಿಕೊಂಡು ಜನ ಜಾನುವಾರಗಳ ಜೊತೆಗೆ ಊರು ಬಿಡುತ್ತಿದ್ದಾರೆ. ಈ ವೇಳೆ ಓರ್ವ ಮಹಿಳೆ ನನ್ನ ಮಗಳಿಗೆ ಕಣ್ಣಿಲ್ಲ, ಹುಟ್ಟು ಕುರುಡು‌. ಈಗ ಊರು ಬಿಡಿ ಅಂತಿದ್ದಾರೆ. ಆದರೆ ಕಣ್ಣಿಲ್ಲದ ಮಗಳನ್ನು ಹೇಗೆ ಕರೆದುಕೊಂಡು ಹೋಗಬೇಕು ಎಂದು ಕಣ್ಣೀರು ಹಾಕಿದರು.

ಲಖಮಾಪುರ ಗ್ರಾಮ ಗದಗ ಜಿಲ್ಲೆಯ ಗಡಿಯಲ್ಲಿದ್ದು, ಬಹುತೇಕ ಬೆಳಗಾವಿ ಜಿಲ್ಲೆಯ ಸರಹದ್ದಿನಲ್ಲಿದೆ. ಆದರೆ ಜಿಲ್ಲಾಡಳಿತ ಈಗಾಗಲೆ ಇವರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಬೆಳ್ಳೇರಿ ಗ್ರಾಮದ ಬಳಿ ಜಾಗ ಗುರುತಿಸಿ ಮನೆ ಕಟ್ಟಿಸಲು ಮುಂದಾಗಿತ್ತು. ಆದರೆ ಸರ್ಕಾರ ಗುರುತಿಸಿರುವ ಜಾಗ ಬಹಳ ದೂರ ಇರುವುದರಿಂದ ತಮ್ಮ ಜಮೀನು ದೂರ ಆಗ್ತಿದೆ. ಹಾಗಾಗಿ ನಾವು ಅಲ್ಲಿಗೆ ಹೋಗೋದಿಲ್ಲ. ಬದಲಾಗಿ ನಮ್ಮ ಗ್ರಾಮಕ್ಕೆ ಹತ್ತಿರವಾಗುವಂತೆ ಬೆಳಗಾವಿ ಜಿಲ್ಲೆಗೆ ಸೇರಿದ ಎತ್ತರ ಪ್ರದೇಶದ ಜಾಗದಲ್ಲಿಯೇ ಮನೆ ನಿರ್ಮಿಸಿಕೊಡಿ ಅಂತಿದ್ದಾರೆ. ಆದರೆ ಇವೆಲ್ಲ ಎರಡು ಜಿಲ್ಲೆಯ ಜಿಲ್ಲಾಡಳಿತ ಮತ್ತು ರಾಜಕಾರಣಿಗಳ ಮುತುವರ್ಜಿಯಿಂದ ಈ ಕೆಲಸ ಆಗಬೇಕಿದೆ. ಆದರೆ ಈ ಗ್ರಾಮಸ್ಥರು ಕೇಳುವ ಬೇಡಿಕೆಯನ್ನು ಈಡೇರಿಸಲು ಗದಗ ಜಿಲ್ಲಾಡಳಿತ ಮುಂದಾಗುತ್ತಿಲ್ಲ. ಇದರಿಂದ ಹಾವು ಸಾಯ್ತಿಲ್ಲ, ಕೋಲು ಮುರಿತಿಲ್ಲ ಅನ್ನೋ ಹಾಗೆ ಆಗಿದೆ ಇಲ್ಲಿನ ಪರಿಸ್ಥಿತಿ.

ಓದಿ: ಪ್ರವಾಹದಿಂದ ಕೊಚ್ಚಿ ಹೋದ 20ಕ್ಕೂ ಅಧಿಕ ಮನೆಗಳು: ತುತ್ತು ಅನ್ನಕ್ಕಾಗಿ ಪರದಾಟ

ABOUT THE AUTHOR

...view details