ಹುಬ್ಬಳ್ಳಿ :ಜನವರಿಯಲ್ಲಿ ರಾಜ್ಯದಲ್ಲಿ ಬದಲಾವಣೆಯಾಗಲಿದೆ. ರಾಜ್ಯ ಸರ್ಕಾರ ಪತನವಾಗುತ್ತದೆ. ಅವರ ಪಕ್ಷದವರೇ ಅವರ ಸರ್ಕಾರವನ್ನು ಬೀಳಿಸಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ನಾವೇ ನೇರವಾಗಿ ಸಿಎಂ ಆಗಬಹುದು ಅಂತಾ ವಿರೋಧ ಪಕ್ಷದ ನಾಯಕನನ್ನ ಇದುವರೆಗೂ ಆಯ್ಕೆ ಮಾಡಿಲ್ಲ. ವಿರೋಧ ಪಕ್ಷದ ಬದಲು ಸಿಎಂ ಆಗಬಹುದು ಅಂತಾ ವಿಪಕ್ಷ ನಾಯಕರ ಆಯ್ಕೆ ಮಾಡಿಲ್ಲ. ನೇರವಾಗಿ ನಮ್ಮ ಪಕ್ಷದವರೇ ಸಿಎಂ ಯಾಕಾಗಬಾರದು ಎಂದು ಯತ್ನಾಳ್ ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ ಕೆ ಹರಿಪ್ರಸಾದ್ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಪಕ್ಷದ ಹಿರಿಯರು. ಅವರಿಗೆ ನೋವಿದೆ. ಹೀಗಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಬಿ ಕೆ ಹರಿಪ್ರಸಾದ್ ಯಾರ ಕುಮ್ಮಕ್ಕಿನಿಂದ ಮಾತನಾಡುತ್ತಿದ್ದಾರೆ?. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಈ ತಂತ್ರ ನಡೆಸಿದ್ದಾರೆ. ವೇಟಿಂಗ್ ಸಿಎಂ ಕುಮ್ಮಕ್ಕಿನಿಂದ ಹರಿಪ್ರಸಾದ್ ಅಸಮಾಧಾನ ಹೊರಹಾಕ್ತಿದಾರೆ. ಹರಿಪ್ರಸಾದ್ ಅವರನ್ನು ಕೇವಲ ಅಸ್ತ್ರವಾಗಿ ಬಳಸಿಕೊಳ್ಳಲಾಗ್ತಿದೆ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್ಗೆ ಕುಟುಕಿದರು.
ಇದೆಲ್ಲವನ್ನು ಗಮನಿಸಿದ್ರೆ ಜನವರಿ ನಂತರ ಕಾಂಗ್ರೆಸ್ ಸರ್ಕಾರ ಪತನವಾಗೋದು ಖಚಿತ. ಅವರು ಆಪರೇಷನ್ ಹಸ್ತ ಮಾಡುತ್ತಿದ್ದಾರೆ. ನಮ್ಮ ಸಂಪರ್ಕದಲ್ಲಿಯೂ 45 ಜನ ಶಾಸಕರಿದ್ದಾರೆ ಎಂದರು. ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾವು ರಾಜ್ಯ ರಾಜಕಾರಣದ ಬಗ್ಗೆ ಅಷ್ಟೇ ತಲೆಕೆಡಿಸಿಕೊಳ್ಳುತ್ತೇವೆ. ಮೈತ್ರಿ ಬಗ್ಗೆ ಯಡಿಯೂರಪ್ಪ ಅವರಿಗೆ ಮಾಹಿತಿ ಇರಬಹುದು. ಆದಷ್ಟು ಶೀಘ್ರ ಮೈತ್ರಿ ಕುರಿತು ಅಂತಿಮ ತೀರ್ಮಾನವಾಗುತ್ತೆ. ಪ್ರತಿಯೊಂದು ಲೋಕಸಭಾ ಸ್ಥಾನವೂ ಅತ್ಯಂತ ಮಹತ್ವದ್ದು. ಒಂದೇ ಮತದಿಂದ ವಾಜಪೇಯಿ ಸರ್ಕಾರ ಪತನವಾಗಿತ್ತು. ಹೀಗಾಗಿ ಯಾವುದನ್ನೂ ನಾವು ಸುಲಭವಾಗಿ ತೆಗೆದುಕೊಳ್ಳಲು ಸಿದ್ಧವಿಲ್ಲ. ಕಳೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನದಲ್ಲಿ ಗೆದ್ದಿದ್ದೇವೆ. ಈ ಬಾರಿ 28 ಸ್ಥಾನಗಳಲ್ಲಿ ಗೆಲ್ಲುವ ಗುರಿ ಇದೆ. ನಾವೇನೂ ಸರ್ಕಾರ ಬೀಳಿಸುವ ಪ್ರಯತ್ನ ನಡೆಸಿಲ್ಲ. ತಾನಾಗಿಯೇ ಸರ್ಕಾರ ಪತನವಾಗಲಿದೆ ಕಾದು ನೋಡಿ ಎಂದರು.
ಶಾಸಕ ರಾಯರೆಡ್ಡಿಯಂತಹ ಹಿರಿಯರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ನೀವು ಕೂಡಿ ಎಂಪಿ ಆಗೋಣ ಎಂಬ ಮಾತನ್ನೂ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿನ ಅಸಮಾಧಾನ ಹೆಚ್ಚಿದೆ. ಅದು ಯಾವಾಗ ಸ್ಫೋಟವಾಗುತ್ತೋ ಗೊತ್ತಿಲ್ಲ. ಹೀಗಿರುವಾಗ ನಮ್ಮವರನ್ನು ಸೆಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿಯವರನ್ನು ತೆಗೆದುಕೊಂಡು ಇವರು ಏನ್ ಮಾಡ್ತಾರೆ. ಯಾರಾದ್ರೂ ಬಿಜೆಪಿ ಬಿಟ್ಟು ಹೋದ್ರೆ ತಾವಾಗೇ ಮರಣ ಶಾಸನ ಬರೆದುಕೊಂಡಂತೆ. ನಾನು ಕೇಂದ್ರ ಸಚಿವನಿದ್ದಾಗ ಹಾಗೂ ಈಗಿನ ರಾಜಕೀಯ ಸ್ಥಿತಿಗೂ ವ್ಯತ್ಯಾಸವಿದೆ. ಈಗ ನಮ್ಮನ್ನು ದೆಹಲಿಯಲ್ಲಿ ಯಾರೂ ಗುರುತು ಹಿಡಿಯಲಾರದ ಸ್ಥಿತಿ ಇದೆ. ನಾನು ಕೇಂದ್ರ ಮಂತ್ರಿ ಇದ್ದಾಗ ಮೋದಿ ಗುಜರಾತ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ರು. ಅಮಿತ್ ಶಾ ರಾಜ್ಯ ಮಂತ್ರಿಯಾಗಿದ್ರು. ಈಗ ನಾವು ಕೆಳಗೆ ಬಂದಿದ್ದೇವೆ. ಅವರು ಮೇಲೆ ಹೋಗಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.