ಹುಬ್ಬಳ್ಳಿ:ಬ್ರಾಹ್ಮಣರು, ಪರಿಶಿಷ್ಟ ಜಾತಿ, ಪಂಗಡದವರು ಸೇರಿದಂತೆ ಎಲ್ಲರೂ ಸಿಎಂ ಆಗಬಹುದು ಎಂದು ಬಿಜೆಪಿ ಮುಂದಿನ ಸಿಎಂ ವಿಚಾರವಾಗಿ ಹೆಚ್ಡಿಕೆ ಹೇಳಿಕೆಗೆ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಂದ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಸಿಎಂ ಹುದ್ದೆಯನ್ನು ಕುಮಾರಸ್ವಾಮಿ ಕುಟುಂಬದವರು ಗುತ್ತಿಗೆ ತಗೆದುಕೊಂಡಿದ್ದಾರಾ? ಪ್ರಜಾಪ್ರಭುತ್ವದಲ್ಲಿ ಇವರೇ ಮುಖ್ಯಮಂತ್ರಿ ಆಗಬೇಕು ಅನ್ನೋದಿಲ್ಲ ಎಂದರು.
ಪ್ರಹ್ಲಾದ್ ಜೋಶಿ ಅವರು ಪೇಶ್ವೆ ಸಂಸ್ಕೃತಿಯಿಂದ ಬಂದವರು ಎಂದು ಹೆಚ್ಡಿಕೆ ಹೇಳುತ್ತಾರೆ. ಕೇವಲ ರಾಜಕಾರಣಕ್ಕೆ ಮತ್ತು ಚುನಾವಣೆ ಹತ್ತಿರ ಬರುತ್ತಿದೆ ಎಂದು ವೈಯಕ್ತಿಕ ಟೀಕೆ ಸರಿಯಲ್ಲ. ಮುಂದಿನ ಸಿಎಂ ವಿಚಾರವಾಗಿ ಬಿಜೆಪಿಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ಪ್ರಹ್ಲಾದ್ ಜೋಶಿ ಕೂಡ ಇಂದು ಬಹಳ ಶಕ್ತಿವಂತ ನಾಯಕ. ಅವರ ಬಗ್ಗೆ ಏಕವಚನದಲ್ಲಿ ಮಾತಾಡೋದು ಸರಿ ಅಲ್ಲ. ಜೋಶಿ ಅವರನ್ನು ಕೇವಲ ಬ್ರಾಹ್ಮಣರೆಂದು ನಾವು ನೋಡ್ತಿಲ್ಲ. ಮೀಸಲಾತಿ ವಿಚಾರದಲ್ಲಿ ಜೋಶಿ ನಮ್ಮ ಜೊತೆ ನಿಂತಿದ್ದಾರೆ ಎಂದು ಹೇಳಿದರು.