ಧಾರವಾಡ: ಜಿಲ್ಲೆಯು ಹಳದಿ ವಲಯವಾದ್ದರಿಂದ ಅವಶ್ಯಕ ವಸ್ತು, ಗೂಡ್ಸ್, ಉತ್ಪಾದನೆಗೆ ಈಗಾಗಲೇ ಅವಕಾಶ ಕೊಟ್ಟಿದ್ದೇವೆ. ಈಗ ಗ್ರಾಮೀಣ ಭಾಗದಲ್ಲಿ ಕೈಗಾರಿಕಾ ಆರಂಭಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಕಂಟೈನ್ಮೆಂಟ್ ಏರಿಯಾ ಹೊರಗಿರುವ ಕೈಗಾರಿಕೆ ಆರಂಭ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ನೋಂದಾಯಿತ ಅಂಗಡಿಗಳ ಆರಂಭಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.
ಅಂಗಡಿ ಮತ್ತು ಮುಂಗಟ್ಟು ಕಾಯಿದೆಯಡಿ ನೋಂದಾಯಿತ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ನವಲಗುಂದ, ಅಣ್ಣಿಗೇರಿ, ಕಲಘಟಗಿ, ಅಳ್ನಾವರ, ಧಾರವಾಡ ಗ್ರಾಮೀಣ ಭಾಗದಲ್ಲಿ ಅಂಗಡಿಗಳನ್ನ ತೆರೆಯಲಾಗಿದೆ. ಹುಬ್ಬಳ್ಳಿಯಲ್ಲಿ ಕಂಟೈನ್ಮೆಂಟ್ ವಲಯ ಇನ್ನೂ ಇದೆ. ಹುಬ್ಬಳ್ಳಿ ನಗರದಲ್ಲಿ ಯಾವುದಕ್ಕೂ ವಿನಾಯಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಸೋಮವಾರ, ಮಂಗಳವಾರ, ಬುಧವಾರ ಗುರುವಾರ ಮಾತ್ರ ಧಾರವಾಡದಲ್ಲಿ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ ಅದು ಕೂಡ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಮಾತ್ರ ಎಂದರು.
ಗ್ರಾಮೀಣ ಭಾಗದಲ್ಲಿ ನರೇಗಾ, ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭ ಸಂಬಂಧ ಮಾತನಾಡಿ, ಕಾಮಗಾರಿಯ ಸ್ಥಳದಲ್ಲೇ ಕ್ಯಾಂಪ್ ಮಾಡಿ, ಕಾರ್ಮಿಕರನ್ನು ಇಟ್ಟುಕೊಳ್ಳಬೇಕು. ಕೈಗಾರಿಕೆಗಳಲ್ಲಿ 50 ಶೇಕಡಾ ಕಾರ್ಮಿಕರ ನಿರ್ವಹಣೆಯಾಗಬೇಕು. ಕಾರ್ಮಿಕರನ್ನು ಕರೆದುಕೊಂಡು ಹೋಗುವುದು, ಬಿಡುವುದು ಮಾಲೀಕರ ಹೊಣೆಯಾಗಿದೆ. ಲಾಕ್ಡೌನ್ ಸಡಿಲಿಕೆ ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು. ವಿನಾಕಾರಣ ಓಡಾಡಬಾರದು ಎಂದು ಎಚ್ಚರಿಕೆ ಕೊಟ್ಟರು.