ಹುಬ್ಬಳ್ಳಿ:ವಿಚಾರಣಾಧೀನ ಕೈದಿವೋರ್ವ ನ್ಯಾಯಾಲಯಕ್ಕೆ ಖಾರದಪುಡಿ ಹಾಗೂ ಬೆಂಕಿ ಪೊಟ್ಟಣ ತೆಗೆದುಕೊಂಡು ಬಂದು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಹಾನಗಲ್ ಮೂಲದ ನಾಗರಾಜ್, ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣವನ್ನು ಜೇಬಲ್ಲಿಟ್ಟುಕೊಂಡು ನ್ಯಾಯಾಲಯಕ್ಕೆ ಆಗಮಿಸಿದ ಆರೋಪಿ.
ಹಾವೇರಿ ಟೌನ್ ಠಾಣೆ ಪೊಲೀಸರು ಮನೆಗಳ್ಳತನ ಪ್ರಕರಣದಲ್ಲಿ ಈತನನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳಿಸಿದ್ದರು. ಇಂದು ಬಳ್ಳಾರಿ ಜೈಲಿನಿಂದ ಹುಬ್ಬಳ್ಳಿ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆ ತರಲಾಗಿತ್ತು. ನ್ಯಾಯಾಲಯದ ಆವರಣ ಪ್ರವೇಶಕ್ಕೂ ಮುನ್ನ ಭದ್ರತಾ ಸಿಬ್ಬಂದಿ ಈತನನ್ನು ತಪಾಸಣೆ ಮಾಡಿದಾಗ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣ ಪತ್ತೆಯಾಗಿವೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಜೈಲಿನಲ್ಲಿ ಈತನಿಗೆ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣ ಕೊಟ್ಟವರು ಯಾರು ಎಂಬ ಅನುಮಾನ ಕಾಡುತ್ತಿದೆ. ಜೊತೆಗೆ ಈ ವಸ್ತುಗಳನ್ನು ನ್ಯಾಯಾಲಯಕ್ಕೆ ಏಕೆ ತಂದ, ಈತನ ಉದ್ದೇಶ ಏನಾಗಿತ್ತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಪೊಲೀಸರು ಕೈದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣಾಧೀನ ಕೈದಿ ಬಳಿ ಇಂತಹ ವಸ್ತುಗಳು ಪತ್ತೆಯಾಗಲು ಬಳ್ಳಾರಿ ಜೈಲಿನ ಭದ್ರತಾ ವೈಫಲ್ಯ ಕಾರಣ ಎನ್ನಲಾಗುತ್ತಿದೆ. ನ್ಯಾಯಾಲಯದ ಭದ್ರತಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಆಗಬಹುದಾದ ಅನಾಹುತ ತಪ್ಪಿದಂತಾಗಿದೆ.