ಧಾರವಾಡ:ಬಿಜೆಪಿ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದೆ. ಹ್ಯಾಟ್ರಿಕ್ ಸಾಧನೆ ಮಾಡಿ ನಾಲ್ಕನೇ ಬಾರಿಯೂ ಸಂಸತ್ ಪ್ರವೇಶ ಬಯಸಿದ್ದ ಪ್ರಹ್ಲಾದ್ ಜೋಶಿ ಆಸೆ ಈಡೇರಿದೆ.
ಧಾರವಾಡ ಲೋಕಸಭಾ ಕ್ಷೇತ್ರವನ್ನು ಹೇಗಾದ್ರೂ ಮಾಡಿ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಕೈ, ತೆನೆ ಪಕ್ಷಗಳ ನಾಯಕರು ಇನ್ನಿಲ್ಲದ ಹೋರಾಟ ನಡೆಸಿದ್ದರು. ಚುನಾವಣೆಗೆ ಇನ್ನೇನು ಕೆಲದಿನಗಳಿರುಷ್ಟರಲ್ಲಿ ದೋಸ್ತಿ ಪಕ್ಷಗಳು ವಿನಯ್ ಕುಲಕರ್ಣಿ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿದ್ವು. ಇದಾದ ಬಳಿಕ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಸಾಕಷ್ಟು ರಣತಂತ್ರಗಳನ್ನು ರೂಪಿಸಿದ್ದರು. ಆದ್ರೆ, ಇವರ ಎಲ್ಲಾ ಚಾಣಕ್ಯ ನಡೆಗಳು, ರಾಜಕೀಯ ಲೆಕ್ಕಾಚಾರಗಳನ್ನು ಧೂಳೀಪಟ ಮಾಡಿರೋ ಬಿಜೆಪಿಯ ಪ್ರಹ್ಲಾದ್ ಜೋಶಿ ಮತ್ತೊಮ್ಮೆ ಗೆದ್ದು ಬೀಗಿದ್ರು.
ಪ್ರಹ್ಲಾದ್ ಜೋಶಿ ಗೆಲುವಿನ ರಹಸ್ಯವೇನು?
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 5 ಲಕ್ಷ ಲಿಂಗಾಯತ ಮತದಾರರಿದ್ದಾರೆ. ಕಳೆದ ಮೂರು ಚುನಾವಣೆಗಳಿಂದ ಗೆಲುವಿನ ಮೇಲೆ ಗೆಲುವು ದಾಖಲಿಸುತ್ತಾ ಬರ್ತಿರುವ ಇವರಿಗೆ ಕ್ಷೇತ್ರದಲ್ಲಿ ಎರಡು ಪ್ರಬಲ ಸಮುದಾಯದ ಬೆಂಬಲವಿದೆ. ಬ್ರಾಹ್ಮಣ ಸಮುದಾಯ ಮತ್ತು ಲಿಂಗಾಯತ ಮತದಾರರು ಪ್ರತಿ ಚುನಾವಣೆಯಲ್ಲೂ ಇವರ ಕೈ ಹಿಡಿದು ಮುನ್ನಡೆಸುತ್ತಾ ಬರ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಜೊತೆಗೆ ವೀರಶೈವರು ಕೂಡ ಬಿಜೆಪಿ ಬೆಂಬಲಿಸುತ್ತಿದ್ದಾರೆ. ಈ ಸಂಪ್ರದಾಯ ಈ ಚುನಾವಣೆಯಲ್ಲೂ ಮುಂದುವರೆದ ಹಿನ್ನೆಲೆಯಲ್ಲಿ ಜೋಶಿ ಗೆಲುವಿನ ಹಾದಿ ಸುಗಮವಾಗಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅಲೆಯೂ ಇಲ್ಲಿ ವರ್ಕೌಟ್ ಆಗಿದೆ.
4ನೇ ಬಾರಿಗೆ ವಿಜಯಪತಾಕೆ ಹಾರಿಸಿದ ಜೋಶಿ! ಪ್ರಹ್ಲಾದ್ ಜೋಶಿಯವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ನಡೆಸಲು ಶ್ರಮ ಪಟ್ಟಿದ್ದಾರೆ ಅನ್ನೋದು ಕ್ಷೇತ್ರದಲ್ಲಿ ಕೇಳಿ ಬರ್ತಿರುವ ಮಾತು. ಸ್ಮಾರ್ಟ್ ಸಿಟಿ, ಐಐಟಿ ಮತ್ತು ಏಮ್ಸ್ ಹುಬ್ಬಳ್ಳಿ- ಧಾರವಾಡಕ್ಕೆ ತರುವಲ್ಲಿ ಅವರ ಪಾತ್ರವಿದೆ. ನೂತನವಾಗಿ ಆಯ್ಕೆಯಾಗಿರುವ ಸಂಸದರಿಗೆ ಸಾಕಷ್ಟು ಸವಾಲುಗಳಿದ್ದು, ಮುಖ್ಯವಾಗಿ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹುಡುಕಬೇಕಿದೆ.