ಹುಬ್ಬಳ್ಳಿ: ಇಂದು ಎಲ್ಲಾ ಹುತಾತ್ಮ ಪೊಲೀಸರನ್ನು ಸ್ಮರಿಸುವ ದಿನ. ಶಾಂತಿ ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕ ಆಸ್ತಿಪಾಸ್ತಿ ಸೇರಿದಂತೆ ಜನರ ಜೀವ ರಕ್ಷಣೆ, ಟ್ರಾಫಿಕ್ ಸಮಸ್ಯೆ ನಿವಾರಣೆ, ಸೈಬರ್ ಕ್ರೈಂ, ಮಕ್ಕಳ ಮೇಲೆ ಹಲ್ಲೆ ಮುಂತಾದ ಹೊಸ ಸವಾಲುಗಳು ಪೊಲೀಸ್ ಇಲಾಖೆಗೆ ಎದುರಾಗುತ್ತಿವೆ. ಅಪರಾಧಗಳನ್ನು ತಡೆಗಟ್ಟಲು ಹೊಸ ಹೆಜ್ಜೆ ಇಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಆಯೋಜಿಸಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಎಫ್ಎಸ್ಎಲ್ ಕೆಂದ್ರವನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಅಭಿವೃದ್ಧಿ ಹೊಂದಬೇಕಾಗಿರುವುದು ಅವಶ್ಯವಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಪೊಲೀಸ್ ಸಂಸ್ಮರಣಾ ದಿನಾಚರಣೆ ಪೊಲೀಸ್ ಇಲಾಖೆಗೆ ಜಿಲ್ಲಾಡಳಿತದ ಸಹಕಾರ ಯಾವಾಗಲೂ ಇರುತ್ತದೆ. ಅಲ್ಲದೇ, ಪೊಲೀಸ್ ಇಲಾಖೆಯ ಫೈರಿಂಗ್ ರೇಂಜ್ ಅವಶ್ಯಕತೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ವರ್ಷದ ಒಳಗಾಗಿ ಫೈರಿಂಗ್ ರೇಂಜ್ಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಪೊಲೀಸ್ ಹುತಾತ್ಮರ ದಿನಾಚರಣೆ: ಗೌರವ ನಮನ ಸಲ್ಲಿಸಿದ ಸಿಎಂ, ಗೃಹ ಸಚಿವ
ಹುತಾತ್ಮ ಪೊಲೀಸರ ಸೇವೆ ಸ್ಮರಿಸಿದ ಲಾಬೂರಾಮ್: ತಮ್ಮ ಅಮೂಲ್ಯವಾದ ಜೀವವನ್ನು ಲೆಕ್ಕಿಸದೇ ಖಾಕಿ ಧರಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಕರ್ತವ್ಯಕ್ಕಾಗಿ ತಮ್ಮ ಜೀವವನ್ನೇ ಸಮರ್ಪಣೆ ಮಾಡಿದ್ದಾರೆ. ಈ ಒಂದು ವರ್ಷದ ಕಾಲಘಟ್ಟದಲ್ಲಿ ಸುಮಾರು 264 ಪೊಲೀಸರು ಹುತಾತ್ಮರಾಗಿದ್ದಾರೆ. 264ರಲ್ಲಿ ಕರ್ನಾಟಕ ರಾಜ್ಯದ 11 ಜನ ಪೊಲೀಸರು ಹುತಾತ್ಮರಾಗಿದ್ದಾರೆ. ಅದರಲ್ಲಿ ಎರಡು ಜನ ಧಾರವಾಡ ಜಿಲ್ಲೆಯವರಾಗಿದ್ದಾರೆ ಎಂದು ಹು-ಧಾ ನಗರ ಪೊಲೀಸ್ ಕಮಿಷನರ್ ಲಾಬೂರಾಮ್ ಹೇಳಿದರು.