ಹುಬ್ಬಳ್ಳಿ:ರಾಜ್ಯದಲ್ಲಿ ಮತ್ತೆ ಪರ್ಸಂಟೇಜ್ ಸದ್ದು ಕೇಳಿ ಬರಲಾರಂಭಿಸಿದೆ. ಪರ್ಸಂಟೇಜ್ ಕಾರಣಕ್ಕೆ ಈ ಹಿಂದೆ ಹೊರಗುತ್ತಿಗೆದಾರ ಸಂತೋಷ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಮತ್ತೋರ್ವ ಗುತ್ತಿಗೆದಾರ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರದ ಕಾರ್ಯವೈಖರಿ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.
ರಾಜ್ಯ ಸರ್ಕಾರಕ್ಕೆ ಒಂದು ಮುಗಿಯುತ್ತಿದ್ದಂತೆಯೇ ಮತ್ತೊಂದು ಕಂಟಕ ಎದುರಾಗಲಾರಂಭಿಸಿದೆ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಕೆ ಎಸ್ ಈಶ್ವರಪ್ಪ ಅವರು ಸಚಿವ ಸ್ಥಾನ ಬಲಿ ಪಡೆಯುವಂತೆ ಮಾಡಿತ್ತು. ಇದೀಗ ಮತ್ತೋರ್ವ ಗುತ್ತಿಗೆದಾರ ಅಧಿಕಾರಿಗಳ ಪರ್ಸಂಟೇಜ್ ಡಿಮ್ಯಾಂಡ್ನಿಂದ ಬೇಸತ್ತು ದಯಾ ಮರಣಕ್ಕಾಗಿ ಮನವಿ ಮಾಡಿದ್ದಾನೆ. ಹುಬ್ಬಳ್ಳಿ ಮೂಲದ ಬಸವರಾಜ್ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ ಗುತ್ತಿಗೆದಾರನಾಗಿದ್ದಾನೆ.
ಹಾಗೆ ನೋಡಿದರೆ ಈತ ಯಾವುದೇ ಗುತ್ತಿಗೆ ಕೆಲಸ ಮಾಡಿಲ್ಲ. ಬದಲಿಗೆ ಕೋವಿಡ್ನಂತಹ ತುರ್ತು ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್ ಪರಿಕರಗಳನ್ನು ಪೂರೈಸುವ ಕೆಲಸ ಮಾಡಿದ್ದ. ಕಾನೂನು ಪ್ರಕಾರವೇ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಆತ ಪರಿಕರಗಳನ್ನು ಸಪ್ಲೈ ಮಾಡಿದ್ದ. ಸಾಮಗ್ರಿಗಳನ್ನು ಪೂರೈಸಿ ಎರಡು ವರ್ಷ ಗತಿಸಿದರೂ ಇದುವರೆಗೂ ಬಿಲ್ ಮಾತ್ರ ಪಾವತಿಯಾಗಿಲ್ಲ.
ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ್, ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್ ಪರಿಕರ ಸರಬರಾಜು ಮಾಡಿದ್ದ ಎನ್ನಲಾಗಿದೆ. ಒಟ್ಟು 69 ಪಂಚಾಯಿತಿಗೆ ಪರಿಕರಗಳ ಸರಬರಾಜು ಮಾಡಿದ್ದರಂತೆ. 2020 - 21ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಪತ್ರದ ಅನುಸಾರ ಮೂಡಿಗೆರೆ ತಾಲೂಕಿಗೆ 27 ಲಕ್ಷ ಕಡೂರು ತಾಲೂಕಿಗೆ 85 ಲಕ್ಷ ರೂಪಾಯಿಯ ಪರಿಕರ ಪೂರೈಕೆ ಮಾಡಿದ್ದನು. ಸರಬರಾಜು ಮಾಡಿ 2 ವರ್ಷ ಗತಿಸಿದರೂ ಬಿಲ್ ಪಾವತಿಯಾಗಿಲ್ಲ.
ಇದನ್ನೂ ಓದಿ:ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ : ಹಾಲಿ ಹಾಗೂ ಮಾಜಿ ಪಿಡಿಒಗಳ ಸಹಿತ ಹಲವರ ವಿಚಾರಣೆ