ಕರ್ನಾಟಕ

karnataka

ವೈರಸ್​ ನಿರ್ನಾಮವಾಗಿದೆ ಎಂದುಕೊಂಡು 2ನೇ ಡೋಸ್ ಪಡೆಯಲು ಜನ ಹಿಂದೇಟು: ಸಚಿವ ಸುಧಾಕರ್

By

Published : Oct 22, 2021, 2:10 PM IST

Updated : Oct 22, 2021, 2:24 PM IST

ರಾಜ್ಯದಲ್ಲಿ ಇನ್ನೂ ಶೇ.17ರಷ್ಟು ಜನರು ಎರಡೂ ಡೋಸ್​ ಲಸಿಕೆ ಪಡೆಯಬೇಕಾಗಿದೆ. ಶೇ.62ರಷ್ಟು ಜನರು ಎರಡನೇ ಡೋಸ್ ಪಡೆಯಬೇಕಿದೆ. ಲಸಿಕೆಯಿಂದ ದೂರ ಉಳಿದವರನ್ನು ಕರೆತರುವ ಕೆಲಸ ಮಾಡುತ್ತಿದ್ದು, ಡಿಸೆಂಬರ್ 31ರ ಹೊತ್ತಿಗೆ ಶೇ.90ರಷ್ಟು ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್​ ಹೇಳಿದ್ದಾರೆ.

people-not-getting-second-dose-vaccine-minister-sudhakar
ವೈರಸ್​ ನಿರ್ನಾಮವಾಗಿದೆ ಎಂದುಕೊಂಡು 2ನೇ ಡೋಸ್ ಪಡೆಯಲು ಜನ ಹಿಂದೇಟು : ಸಚಿವ ಸುಧಾಕರ್

ಹುಬ್ಬಳ್ಳಿ:ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಕೋವಿಡ್​​ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಆದರೆ ವೈರಸ್​ ನಿರ್ನಾಮವಾಗಿದೆ ಎಂಬ ಉದಾಸೀನ ಭಾವನೆಯಿಂದ ಜನರು ಲಸಿಕೆ ಪಡೆಯಲು ಮುಂದಾಗುತ್ತಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ ಶೇ.17ರಷ್ಟು ಜನರು ಎರಡೂ ಡೋಸ್​ ಲಸಿಕೆ ಪಡೆಯಬೇಕಾಗಿದೆ. ಶೇ.62ರಷ್ಟು ಜನರು ಎರಡನೇ ಡೋಸ್ ಪಡೆಯಬೇಕಿದೆ. ಲಸಿಕೆಯಿಂದ ದೂರ ಉಳಿದವರನ್ನು ಕರೆತರುವ ಕೆಲಸ ಮಾಡುತ್ತಿದ್ದು, ಡಿಸೆಂಬರ್ 31ರ ಹೊತ್ತಿಗೆ ಶೇ.90ರಷ್ಟು ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಮೊದಲ ಡೋಸ್ ಪಡೆದು ಅವಧಿ ಮುಗಿದವರ ಸಂಖ್ಯೆ 53 ಲಕ್ಷ ಇದ್ದು, ಇವರನ್ನು ಫೋನ್ ಮೂಲಕ ಕರೆಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಆದರೂ ಜನರು ಮುಂದೆ ಬರುತ್ತಿಲ್ಲ ಎಂದು ಹೇಳಿದರು.

ಸಚಿವ ಡಾ.ಕೆ.ಸುಧಾಕರ್ ಮಾಧ್ಯಮಗೋಷ್ಠಿ

ರಾಜ್ಯದಲ್ಲಿ ಸದ್ಯ 60 ಲಕ್ಷ ಲಸಿಕೆ ದಾಸ್ತಾನು ಇದೆ. ರಾಜ್ಯದ ಬೇಡಿಕೆಗೆ ತಕ್ಕಂತೆ ಕೇಂದ್ರ ಸರ್ಕಾರ ಪೂರೈಕೆ ಮಾಡುತ್ತಿದೆ. ಕೋವಿಡ್​​ನಿಂದ ಸರ್ಕಾರ ಸವಾಲುಗಳನ್ನು ಎದುರಿಸಿದ್ದು, ಪಾಠ ಕಲಿತಿದೆ. ಇದರ ಪರಿಣಾಮವಾಗಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲು ಸಾಧ್ಯವಾಯಿತು ಎಂದರು.

ಲಸಿಕೆ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕಾರಣ ಮಾಡಿದವು. ಇದು ಮೋದಿ ಲಸಿಕೆ ಎಂದು ಕೂಡ ವ್ಯಂಗ್ಯವಾಡಿದರು. ಆದರೆ ಕೋವಿಡ್​​ ನಿಯಂತ್ರಣಕ್ಕೆ ಲಸಿಕೆಯೊಂದೇ ಮದ್ದು ಎಂದು ಅರಿತ ಪ್ರತಿಪಕ್ಷದವರು ಮಾರ್ಚ್​ನಲ್ಲಿ ಕ್ಯೂ ನಿಂತರು ಎಂದು ಡಾ.ಸುಧಾಕರ್​ ಛೇಡಿಸಿದರು.

ಸಿದ್ದರಾಮಯ್ಯ ತನಿಖೆ ಏಕೆ ಮಾಡಲಿಲ್ಲ?

ಕೋಲಾರ ಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್​, ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅವರು ತನಿಖೆ ನಡೆಸುವಂತೆ ಈ ಹಿಂದೆಯೇ ದೂರು ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯನವರು ಇದನ್ನು ಯಾಕೆ ತನಿಖೆ ಮಾಡಲಿಲ್ಲ. ಈ ಮೂಲಕ ಹಗರಣ ಮಾಡಿದವರಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಡಿಸಿಸಿ ಬ್ಯಾಂಕ್ ಹಗರಣ ವಿಚಾರದಲ್ಲಿ ಪ್ರತಿಪಕ್ಷ ಮಾಡುವ ಕೆಲಸವನ್ನು ನಾನೊಬ್ಬ ಸಚಿವನಾಗಿ ಮಾಡುತ್ತಿದ್ದೇನೆ. ಅದನ್ನು ಅಧಿಕಾರದ ಮದದಿಂದ ಮಾತನಾಡಿದ್ದೇನೆ ಎಂದರೆ ಏನೂ ಹೇಳುವುದು. ಇದನ್ನು ಜನರ ತೀರ್ಮಾನಕ್ಕೆ ಬಿಡುತ್ತೇನೆ ಎಂದರು.

ಇದನ್ನೂ ಓದಿ:ಕೇವಲ 29 ಕೋಟಿ ಜನರಿಗೆ ಮಾತ್ರ 2 ಡೋಸ್ ಲಸಿಕೆ ನೀಡಲಾಗಿದೆ: ಸಿದ್ದರಾಮಯ್ಯ

Last Updated : Oct 22, 2021, 2:24 PM IST

ABOUT THE AUTHOR

...view details