ಹುಬ್ಬಳ್ಳಿ: ಗುರುವಾರ ಮಿನಿ ವಿಧಾನಸೌಧದ ಆವರಣದಲ್ಲಿ ನವಿಲು ಸಾವನ್ನಪ್ಪಿದ ಬೆನ್ನಲ್ಲೇ ನಿನ್ನೆ ಹಳೇ ಹುಬ್ಬಳ್ಳಿ ಆನಂದ ನಗರದ ಸ್ಮಶಾನದ ಬಳಿ ಮತ್ತೊಂದು ನವಿಲು ಸಾವನ್ನಪ್ಪಿದೆ.
ಮಿನಿ ವಿಧಾನಸೌಧದ ಬಳಿ ನಿತ್ರಾಣಗೊಂಡು ಹೆಣ್ಣು ನವಿಲೊಂದು ಗುರುವಾರ ಸಾವನ್ನಪ್ಪಿತ್ತು. ಇದೀಗ ಆನಂದ ನಗರದ ಸ್ಮಶಾನದಲ್ಲಿ ಗಂಡು ನವಿಲು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದೆ. ಹೀಗೆ ಸತತ 2 ದಿನ 2 ನವಿಲು ಸಾವನ್ನಪ್ಪಿರುವುದು ಪಕ್ಷಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ನವಿಲುಗಳ ಸಾವಿನ ಕುರಿತು ತನಿಖೆ ನಡೆಸಿ, ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಆಹಾರ ಹುಡುಕುತ್ತಾ ಆನಂದ ನಗರದ ಸ್ಮಶಾನಕ್ಕೆ ಬಂದಿದ್ದ ಗಂಡು ನವಿಲಿಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದು, ಅರಣ್ಯ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ತಿಳಿಸಿದ್ದಾರೆ.