ಧಾರವಾಡ: ಕುಮಾರಸ್ವಾಮಿ ಟ್ವೀಟ್ನಲ್ಲಿ ಸಿದ್ದರಾಮಯ್ಯನವರು ಸಂವಿಧಾನ ಪಂಡಿತರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಸಂವಿಧಾನ ಓದಿದ್ದೇನೆ. ಕುಮಾರಸ್ವಾಮಿ ಓದಿದ್ದಾರಾ, ನಾನು ಸಂವಿಧಾನದ ವಿದ್ಯಾರ್ಥಿ, ಕುಮಾರಸ್ವಾಮಿ ಏನು ಓದಿದ್ದಾನೆ ಎಂದು ಏಕವಚನದಲ್ಲೇ ಪ್ರಶ್ನಿಸಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮಾಜಿ ಪ್ರಧಾನಿ ದೇವೇಗೌಡ ಸೇರಿ ಜೆಡಿಎಸ್ ಪಕ್ಷ ಕಟ್ಟಿದವರು. 1999ರಲ್ಲಿ ಜೆಡಿಯು ಜೆಡಿಎಸ್ ಆದಾಗ ರಾಜ್ಯಾಧ್ಯಕ್ಷ ಆದೆ. 6 ವರ್ಷಗಳ ಕಾಲ ನಾನು ಅಧ್ಯಕ್ಷನಾಗಿದ್ದೆ. ನನ್ನನ್ನ ಪಕ್ಷದಿಂದ ತೆಗೆದು ಹಾಕಿದರು, ನಾನು ಪಕ್ಷ ಬಿಡಲಿಲ್ಲ. ನನ್ನನ್ನ ದೇವೇಗೌಡರೇ ತೆಗೆದು ಹಾಕಿದರು ಎಂದು ಹೇಳಿದರು.
ಆಗ ಕಾಂಗ್ರೆಸ್ನವರು ಕರೆದರು ಅಲ್ಲಿಗೆ ಹೋದೆ. 2008ರಲ್ಲಿ ಚುನಾವಣೆ ನಡೆದಾಗ ಜೆಡಿಎಸ್ನವರು ಎಷ್ಟು ಗೆದ್ದರು. 59 ಇದ್ದವರು ನಾವು ಬಿಟ್ಟ ಮೇಲೆ 28 ಸ್ಥಾನ ಗೆದ್ದರು. ನಾವು ಬಿಟ್ಟ ಮೇಲೆ ಜೆಡಿಎಸ್ ಜಾತ್ಯಾತಿತ ಪಕ್ಷವಾಗಿ ಉಳಿದಿಲ್ಲ. ನನ್ನ ಜೊತೆ ಆಗ ಸಿ ಎಂ ಇಬ್ರಾಹಿಂ, ಸತೀಶ್ ಜಾರಕಿಹೊಳಿ ಸೇರಿ ಬಹಳ ಜನ ಬಂದರು. ಈಗ ಅದು ಕುಟುಂಬದ ಪಾರ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಹಾದಾಯಿ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಮೇಕೆದಾಟು ಪಾದಯಾತ್ರೆ ಅರ್ಧ ಆಗಿದೆ. ಕೊರೊನಾ ಹೆಚ್ಚಳ ಹಿನ್ನೆಲೆ ಪಾದಯಾತ್ರೆ ನಿಲ್ಲಿಸಿದ್ದೇವೆ. ಕಾನೂನಿಗೆ ಗೌರವ ಕೊಟ್ಟು ಜನರ ಹಿತದೃಷ್ಟಿಯಿಂದ ನಿಲ್ಲಿಸಿದ್ದೇವೆ. ಕೊರೊನಾ ಕಡಿಮೆಯಾದ ಮೇಲೆ ಪಾದಯಾತ್ರೆ ಮುಂದುವರೆಯುತ್ತೆ ಎಂದರು.
ಅವರು ಕರ್ಫ್ಯೂ ಹಾಕಿದ್ದೇ ನಮ್ಮ ಪಾದಯಾತ್ರೆ ನಿಲ್ಲಿಸಲು, ಪಾದಯಾತ್ರೆ ಮಾಡಬಾರದು ಎನ್ನುವುದೇ ಅವರ ಉದ್ದೇಶ. ಸರ್ಕಾರದಲ್ಲಿ ಕಾಲಕಾಲಕ್ಕೆ ದುಡ್ಡು ಬಿಡುಗಡೆ ಆಗಲ್ಲ. ಈ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಇವರ ಹತ್ತಿರ ದುಡ್ಡಿಲ್ಲ ಹಾಗಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೇಲಸಗಳು ನಡೆಯುತ್ತಿಲ್ಲ. ಸಾಲದ ಮೇಲೆ ಎಷ್ಟು ದಿನ ಸರ್ಕಾರ ನಡೆಸಬಹುದು, ಎದ್ವಾ ತದ್ವಾ ಸಾಲಾ ಮಾಡೊಕೆ ಆಗುತ್ತಾ. ಸಾಲಾ ಮಾಡಿ ಹೋಳಿಗೆ ತಿನ್ನೊಕೆ ಆಗುತ್ತಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.