ಹುಬ್ಬಳ್ಳಿ: ಬಿಎಸ್ವೈ ಪರ ಸಹಿ ಸಂಗ್ರಹಿಸುತ್ತಿರುವ ಯಾವುದೇ ಪ್ರಸಂಗಗಳು ಬಿಜೆಪಿಯಲ್ಲಿ ನಡೆದಿಲ್ಲ. ನಮ್ಮ ಪಾರ್ಟಿಯಲ್ಲಿ ಸಹಿ ಸಂಗ್ರಹ, ಒತ್ತಡ, ಒತ್ತಾಯದಂತಹ ವಿಷಯಗಳಿಗೆ ಆಸ್ಪದವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಹಿ ಸಂಗ್ರಹಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪ ಪರ ಸಹಿ ಬಗ್ಗೆ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮದು ಶಾಸನಬದ್ಧ ಪಾರ್ಟಿಯಾಗಿದೆ. ನಮ್ಮ ಪಕ್ಷದಲ್ಲಿ ಯಾವುದೇ ಸಹಿ ಸಂಗ್ರಹ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ನಾಯಕರು, ಹೈಕಮಾಂಡ್ ಏನು ಸೂಚಿಸುತ್ತದೆಯೋ ಅದನ್ನು ಪಾಲನೆ ಮಾಡುವ ಪಕ್ಷ ನಮ್ಮದು. ಅದನ್ನೇ ನಿನ್ನೆ ಸಿಎಂ ಚೆನ್ನಾಗಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕರು ಏನು ಹೇಳ್ತಾರೆ ಅದರ ಮೇಲೆ ನನ್ನ ಕೆಲಸ ಅಂದಿದ್ದಾರೆ. ಅದನ್ನು ಪಕ್ಷದ ಕಾರ್ಯಕರ್ತರು, ನಾಯಕರು, ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಿಎಂ ಹುದ್ದೆ ಖಾಲಿ ಇಲ್ಲ : ಇಲ್ಲಿ ಸಹಿ ಸಂಗ್ರಹ ಅವಶ್ಯಕತೆ ಇಲ್ಲ. ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಯಾರಾದರು ಇಂತಹ ಕೆಲಸಕ್ಕೆ ಮುಂದಾದರೆ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ ಅವರು, ಶಾಸಕರು ಯಾರೊಬ್ಬರು ಅವರವರ ಕ್ಷೇತ್ರ ಬಿಟ್ಟು ತೆರಳಬಾರದು. ಕೊರೊನಾ ನಿಯಂತ್ರಣ ಕೆಲಸ ಮಾಡಬೇಕು. ಎಲ್ಲವನ್ನೂ ಪಾರ್ಟಿ ಗಮನಿಸುತ್ತಿದೆ. ಮುಂದೆ ಅನಿವಾರ್ಯ ಇದ್ದರೆ ಬೆಂಗಳೂರಿಗೆ ಹೋಗಲಿ. ಜನ ನಮಗೆ ಆಶೀರ್ವಾದ ಮಾಡಿದ್ದು, ಜನಸೇವೆ ಮಾಡುವುದಕ್ಕೆ. ನಮ್ಮ ಪಕ್ಷದಲ್ಲಿ ಸರ್ವ ಸಮ್ಮತಿಯ ನಾಯಕ ಬಿ.ಎಸ್. ಯಡಿಯೂರಪ್ಪ. ಹೀಗಾಗೇ ಯಾವುದೇ ಚರ್ಚೆಗಳಿಲ್ಲ, ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.