ಧಾರವಾಡ: ಧಾರವಾಡದಲ್ಲಿ ನಡೆಯುತ್ತಿರುವ 26 ರಾಷ್ಟ್ರೀಯ ಯುವ ಜನೋತ್ಸವಕ್ಕೆ ಅವಳಿ ನಗರದ ಆಡಳಿತ ವ್ಯವಸ್ಥೆ, ಸಂಘ - ಸಂಸ್ಥೆಗಳು ಹೃದಯ ಶ್ರೀಮಂತಿಕೆ ಮೆರೆದಿವೆ. ಇದೇ ಮೊದಲ ಬಾರಿಗೆ ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಉತ್ಸವಕ್ಕೆ ಸ್ವಯಂ ಪ್ರೇರಿತವಾಗಿ ಸೇವೆ, ಪ್ರಾಯೋಜಕತ್ವ, ದೇಣಿಗೆ, ಪರಿಕರಗಳನ್ನು ನೀಡಿ ವೈಭವದ ಸಂಭ್ರಮೋಲ್ಲಾಸದಲ್ಲಿ ಭಾಗಿಯಾಗಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 12ರಂದು ರಾಷ್ಟ್ರೀಯ ಯುವ ಜನೋತ್ಸವವನ್ನು ಉದ್ಘಾಟಿಸಲಿದ್ದು, ಈ ವೈಭವದ ಸಮಾರಂಭದ ಯಶಸ್ಸಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಸಂಸ್ಥೆಗಳು ಒಂದೊಂದು ರೀತಿಯಲ್ಲಿ ನೆರವಾಗುತ್ತಿವೆ. ಜನರ ಸಹಭಾಗಿತ್ವ (ಜನ್ ಭಾಗೀದಾರ್) ಕುರಿತ ಗೌರವಾನ್ವಿತ ಪ್ರಧಾನಮಂತ್ರಿ ಅವರ ಆಶಯವನ್ನು ಇಲ್ಲಿ ಸಾಕಾರಗೊಳಿಸುತ್ತಿದ್ದಾರೆ. “ಜೀವ ನಮ್ಮ ಮಾತು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು.
ಜೀವನ ನಮ್ಮ ಮಾತು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು” ಎಂಬ ಭಾರತದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ವಾಣಿಯಂತೆ ಯುವ ಜನೋತ್ಸವವನ್ನು ಅವಳಿ ನಗರದ ಹೃದಯ ಶ್ರೀಮಂತಿಕೆಯಿಂದ ರೂಪಿಸಲಾಗಿದೆ. ಜನ ಪಾಲುದಾರರಾದರೆ ಯಾವುದೇ ಆಂದೋಲನ ಜನಾಂದೋಲನವಾಗುತ್ತದೆ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಿ ತಾರ್ಕಿಕ ಅಂತ್ಯ ಕಾಣುತ್ತದೆ ಎಂಬುದಕ್ಕೆ ಈ ಉತ್ಸವ ಒಂದು ನಿದರ್ಶನವಾಗಿದೆ.
ಭಾರತೀಯ ತೈಲ ನಿಗಮ ಉಚಿತ ಡಿಸೇಲ್: ಪ್ರತಿನಿಧಿಗಳು ಯುವ ಜನೋತ್ಸವ ಕಣ್ತುಂಬಿಕೊಳ್ಳಲು ಜಿಲ್ಲಾಡಳಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಈ ಸಾರಿಗೆ ಬಸ್ ಹಾಗೂ ಜಿಲ್ಲಾಡಳಿತದ ಆಯ್ದ ವಾಹನಗಳಿಗೆ ಭಾರತೀಯ ತೈಲ ನಿಗಮ ಉಚಿತವಾಗಿ ಡೀಸೆಲ್ ಪೂರೈಸುತ್ತಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಶೇಷತೆ, ರಾಷ್ಟ್ರದ ವೈವಿಧ್ಯತೆ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಮೂಲಕ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಮಹತ್ಕಾರ್ಯಕ್ಕೆ ಕೈ ಜೋಡಿಸಿದೆ.
7500 ಪ್ರತಿನಿಧಿಗಳಿಗೆ ಉಚಿತವಾಗಿ ಮಿಶ್ರ ಪೇಡಾ: ಧಾರವಾಡ ಎಂದಾಕ್ಷಣ ಪೇಡಾ ನೆನಪಿಗೆ ಬರುವುದು ಸಹಜ. ಬಾಯಲ್ಲಿ ನೀರೂರಿಸುವ, ಒಮ್ಮೆ ಸವಿದರೆ ಜೀವನಪರ್ಯಂತ ನೆನಪಿನಲ್ಲಿ ಉಳಿಯುವ ಪೇಡಾ ನೀಡುವ ಮೂಲಕ ರಾಷ್ಟ್ರೀಯ ಉತ್ಸವವನ್ನು ಸ್ಮರಣೀಯವಾಗಿಸಲು ಮುಂದಾಗಿದೆ, ಧಾರವಾಡ ಮಿಶ್ರಾ ಪೇಡಾ ಸಂಸ್ಥೆ. ದೇಶದ ಎಲ್ಲ ಭಾಗಗಳಿಂದ ಆಗಮಿಸುತ್ತಿರುವ ಎಲ್ಲ 7,500 ಪ್ರತಿನಿಧಿಗಳಿಗೆ ಉಚಿತವಾಗಿ ಮಿಶ್ರಾ ಪೇಡಾ ವಿತರಿಸಲು ಸಜ್ಜಾಗಿದೆ. ಈಗಾಗಲೇ ಬಹುತೇಕ ಪ್ಯಾಕಿಂಗ್ ಪೂರ್ಣಗೊಳಿಸಿದ್ದು, ಪೇಡಾದ ಸ್ವಾದ ಮತ್ತು ಘಮಲನ್ನು ದೇಶಾದ್ಯಂತ ಪಸರಿಸಲು ಮುಂದಾಗಿದೆ.