ಕರ್ನಾಟಕ

karnataka

ETV Bharat / state

ಕಾನೂನು ವಿ.ವಿ.ಗೆ ಅಗತ್ಯ ಸೌಕರ್ಯ ಒದಗಿಸಲು ಬದ್ಧ: ಸಿಎಂ ಬೊಮ್ಮಾಯಿ

ಕರ್ನಾಟಕ ರಾಜ್ಯ ಕಾನೂನು ವಿವಿಯ ವಿಜ್ಞಾನೇಶ್ವರ ಅಧ್ಯಯನ ಪೀಠವು ಏರ್ಪಡಿಸಿರುವ "ಕರ್ನಾಟಕದಲ್ಲಿ ಮಿತಾಕ್ಷರ, ವಚನ, ದಾಸ ಮತ್ತು ಜಾನಪದ ಸಾಹಿತ್ಯದಲ್ಲಿ ಕಾನೂನಿನ ಸಮಾಜಮುಖಿ ಮೌಲ್ಯಗಳು : ಒಂದು ಪರಿಶೋಧನ" ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮಕ್ಕೆ ವರ್ಚುವಲ್ ವೇದಿಕೆಯ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

By

Published : Aug 6, 2021, 2:24 PM IST

ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮ
ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮ

ಹುಬ್ಬಳ್ಳಿ: ಸುಶಿಕ್ಷಿತ ಸಮಾಜದಲ್ಲಿ ತಾರತಮ್ಯ, ಅಸಹಿಷ್ಣುತೆ ಭಾವನೆಗಳಿಲ್ಲದ ಕೃತಜ್ಞತೆ ಮನೋಭಾವಗಳನ್ನು ಬೆಳೆಸಲು ವಿದ್ಯೆ-ಜ್ಞಾನ-ಧ್ಯಾನ ಈ ಮೂರನ್ನೂ ಬೆಸೆದ ಕೆಲಸ ಕಾರ್ಯಗಳನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಜ್ಞಾನೇಶ್ವರ ಅಧ್ಯಯನ ಪೀಠ ಕೈಗೊಳ್ಳಲಿ, ಸರ್ಕಾರ ಅಗತ್ಯ ಸಹಕಾರ ಸೌಕರ್ಯಗಳನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಕಾನೂನು ವಿವಿಯಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠ ಸ್ಥಾಪಿಸಿ ಬಜೆಟ್‌ನಲ್ಲಿ 2 ಕೋಟಿ ರೂಪಾಯಿ ಮೀಸಲಿರಿಸಿ, ಈಗಾಗಲೇ ಒಂದು ಕೋಟಿ ರೂ.ಬಿಡುಗಡೆ ಮಾಡಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಕರ್ನಾಟಕದಲ್ಲಿ ಸಾಮಾಜಿಕ ಸುಧಾರಣೆ ಚಳವಳಿಗೆ ದೊಡ್ಡ ಇತಿಹಾಸವಿದೆ. ಹಳೆಯ ಸಾಮಾಜಿಕ ಹಾಗೂ ಈಗಿನ ಸಾಂವಿಧಾನಿಕ ಸುಧಾರಣೆಗಳನ್ನು ಆಧರಿಸಿ ಕಾನೂನು ಮತ್ತು ಮಾನವೀಯತೆಗಳ ಹದವಾದ ಮಿಶ್ರಣ ಹೊಂದಿದ ಪರಿಹಾರ ಕಂಡುಕೊಳ್ಳಬೇಕು. ನ್ಯಾಯಾಂಗದಲ್ಲಿ ಸುಧಾರಣೆಗಳನ್ನು ತರುವ ಕಾರ್ಯಗಳು ಈ ಅಧ್ಯಯನ ಪೀಠದ ಮೂಲಕ ಆಗಲಿ, ವಿಜ್ಞಾನೇಶ್ವರರ ಮಿತಾಕ್ಷರ ಸಂಹಿತೆ ಈ ಎಲ್ಲಾ ವಿಚಾರಗಳನ್ನು ಒಳಗೊಂಡಿದೆ ಎಂದರು.

ಇಂದಿನ ಕಾಲ, ಸಂದರ್ಭಕ್ಕೆ ಅನುಗುಣವಾಗಿ ಈ ನಿಟ್ಟಿನಲ್ಲಿ ಸುಧಾರಣೆಗಳಾಗಬೇಕು. ವಿದ್ಯೆ ,ಜ್ಞಾನ,ಧ್ಯಾನಗಳನ್ನು ಬೆಸೆದ ಸುಧಾರಾಣಾತ್ಮಕ ಕಾರ್ಯಗಳಾಗಬೇಕು. ಸುಧಾರಣೆ ಸಾಮಾಜಿಕ ಮಾತ್ರವಲ್ಲ ವೈಯಕ್ತಿಕ ಸುಧಾರಣೆಗಳೂ ಕೂಡ ಮುಖ್ಯ. ಫ್ರೆಂಚ್, ರಷ್ಯಾ ಸೇರಿದಂತೆ ಅನೇಕ ಕ್ರಾಂತಿಗಳು ಪ್ರಪಂಚದ ಇತಿಹಾಸದಲ್ಲಿ ದಾಖಲಾಗಿವೆ. ಆದರೆ ಕ್ರಾಂತಿಯ ಉದ್ದೇಶಗಳ ಸಾಧನೆಯ ನಂತರ ಅವುಗಳ ಶಕ್ತಿ ವಿಭಜನೆ ಆಗಿದ್ದನ್ನು ಕಂಡಿದ್ದೇವೆ. ಆದರೆ, ಬುದ್ಧ, ಬಸವ, ಏಸು ಕ್ರಿಸ್ತ, ಪ್ರವಾದಿ ಮಹ್ಮದ್ ಪೈಗಂಬರರು ತಂದ ಸಾಮಾಜಿಕ ಕ್ರಾಂತಿಗಳು ಶಾಶ್ವತವಾಗಿ ಮನುಕುಲಕ್ಕೆ ಬೆಳಕಾಗಿವೆ ಎಂದರು.

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಭೇಟಿಯಾದ ಮಾಜಿ ಕೇಂದ್ರ ಸಚಿವ ಶರದ್ ಪವಾರ್

ನ್ಯಾಯಾಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಮೇರು ಮಟ್ಟದ ಮೌಲ್ಯಗಳನ್ನು ನಿರ್ಮಿಸಿರುವ ಹಿರಿಯರು ಈ ರಾಷ್ಟ್ರೀಯ ವೆಬಿನಾರಿನಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಆಡಳಿತದಲ್ಲಿ ಮೌಲ್ಯಗಳ ಪುನರ್ ಸ್ಥಾಪನೆಗೆ ಇದು ದಾರಿ ತೋರಲಿ, ಸಮಾಜ ಮತ್ತು ಕಾನೂನು ಅವಿನಾಭಾವ ಸಂಬಂಧ ಹೊಂದಿವೆ. ಕಾನೂನು ಇಲ್ಲದೇ ಮುನ್ನಡೆ ಸಾಧ್ಯವಿಲ್ಲ. ಅದರ ಮೌಲ್ಯಗಳ ಚರ್ಚೆ ಅಗತ್ಯ. ಆಧುನಿಕ ಕಾಲದಲ್ಲಿ ಸಂವಿಧಾನ ಎಲ್ಲ ಕಾನೂನುಗಳಿಗೆ ತಾಯಿಯಾಗಿದೆ. ಅದು ಸಾಮಾಜಿಕ ಸಮಾನತೆ ಮತ್ತು ಸಮಾನ ಅವಕಾಶಗಳಿಗೆ ಒತ್ತು ನೀಡಿದೆ ಎಂದ ಮುಖ್ಯಮಂತ್ರಿಗಳು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಹುಬ್ಬಳ್ಳಿಯ ಸರ್ ಸಿದ್ದಪ್ಪ ಕಂಬಳಿ ಅವರ ಒಡನಾಟ ಮೆಲುಕು ಹಾಕಿದರು.

ABOUT THE AUTHOR

...view details