ಹುಬ್ಬಳ್ಳಿ: ಮಳೆಗಾಲದ ವೇಳೆ, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಪ್ರತಿ ವಾರ್ಡ್ ಅಧಿಕಾರಿಗಳು ಎಚ್ಚರ ವಹಿಸಬೇಕು. ಅಲ್ಲದೇ ಡೆಂಘಿ, ಕಾಲರಾಗಳಂತ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹು-ಧಾ ಪೂರ್ವ ಮತಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿಂದು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಮಳೆಗಾಲ ಪ್ರಾರಂಭಗೊಂಡಿದ್ದು, ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತತಕ್ಷಣ ಪರಿಣಾಮ ಬೀರುವಂತೆ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರ ಸಹಾಯಕ್ಕೆ ಕೈ ಜೋಡಿಸಬೇಕು ಎಂದು ಅವರು ಆಗ್ರಹಿಸಿದರು.
ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಹೂಳು ತುಂಬಿರುವ ಚರಂಡಿಗಳನ್ನು ಶೀಘ್ರವಾಗಿ ಸ್ವಚ್ಛಗೊಳಿಸಬೇಕು. ಅಲ್ಲದೇ ಸೊಳ್ಳೆಗಳಿಂದ ಹಾಗೂ ಮಳೆ ನೀರು ಒಂದೆಡೆ ನಿಂತು ರೋಗಗಳು ಬರುವ ಸಾಧ್ಯತೆಗಳಿರುವುದರಿಂದ ಕೀಟ ನಾಶಕ ಸ್ಪ್ರೇ ಮಾಡಬೇಕು ಎಂದು ಸಲಹೆ ನೀಡಿದರು. ಪ್ರತಿ ವಾರ್ಡ್ನಲ್ಲಿ ಕೂಡ ಮಳೆಗಾಲದ ಹಾಗೂ ಮಳೆಯ ಪ್ರಮಾಣದ ಕುರಿತು ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಮಳೆಯ ಮುಂಚಿತವಾಗಿ ಸಿದ್ದತಾ ಕ್ರಮ ಕೈಗೊಳ್ಳಬೇಕು ಅಲ್ಲದೇ ಕಾರ್ಮಿಕರಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸುವ ಮೂಲಕ ಕೆಲಸ ಒದಗಿಸಬೇಕು ಎಂದರು.