ಕರ್ನಾಟಕ

karnataka

By

Published : Aug 5, 2021, 8:51 PM IST

ETV Bharat / state

'ಸ್ಥಾನಮಾನ ಸಿಗದಿರುವುದು ನಿಮ್ಮೆಲ್ಲರಂತೆ ನನಗೂ ಬೇಸರ ತಂದಿದೆ': ನೋವು ಹಂಚಿಕೊಂಡ ಬೆಲ್ಲದ್​..

ಭ್ರಷ್ಟಾಚಾರಿಗಳ ವಿರುದ್ಧ ಈ ಹಿಂದಿನಂತೆಯೇ ಧ್ವನಿ ಎತ್ತುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ನಂಬಿರುತ್ತೇನೆ. ಏನೇ ಬರಲಿ ಎಲ್ಲರೂ ಒಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.

Aravinda Bellada
ಶಾಸಕ ಅರವಿಂದ ಬೆಲ್ಲದ

ಧಾರವಾಡ: ಮುಖ್ಯಮಂತ್ರಿ ರೇಸ್​ನಲ್ಲಿದ್ದ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಮತದಾರರ ಪ್ರೀತಿ-ವಿಶ್ವಾಸ, ಬೆಂಬಲದಿಂದ ಇಂದು ನನ್ನ ಹೆಸರು ರಾಜ್ಯದ ಅತ್ಯುನ್ನತ ಹುದ್ದೆಯವರೆಗೆ ಪರಿಗಣಿಸಲ್ಪಟ್ಟು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ಬರುವಂತಾಗಿದೆ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಶಾಸಕ ಅರವಿಂದ ಬೆಲ್ಲದ ಬರೆದುಕೊಂಡಿದ್ದು, ರಾಜ್ಯದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನಗೆ ಸ್ಥಾನಮಾನ ಸಿಗದಿರುವುದು ನಿಮ್ಮೆಲ್ಲರಂತೆ ನನಗೂ ಬೇಸರ ತಂದಿದೆ. ಆದರೂ, ಪಕ್ಷದ ಚೌಕಟ್ಟಿನಲ್ಲಿ ನಾನು ಇದೆಲ್ಲವನ್ನೂ ಸಹಿಸಿಕೊಳ್ಳುತ್ತೇನೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ, ನನ್ನ ಕ್ಷೇತ್ರದ ಜನರ ಸೇವೆ ಮಾಡುವಲ್ಲಿ ನನಗೆ ಇವ್ಯಾವುದು ಅಡೆತಡೆಯಾಗುವುದಿಲ್ಲ. ಶಾಸಕನಾಗಿ ಈ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ನನ್ನ ಕ್ಷೇತ್ರದಲ್ಲಿ ಸುಮಾರು 6000 ಪಕ್ಕಾಮನೆ ನಿರ್ಮಾಣ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹಕಾರದಿಂದ ಧಾರವಾಡದಲ್ಲಿ ಐಐಟಿ, ಐಐಐಟಿ ಪ್ರಾರಂಭಿಸಲಾಗಿದೆ. ಉನ್ನತ ಶಿಕ್ಷಣ ಕೇಂದ್ರ, ಹಲವು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ಬ್ಯಾರೇಜ್ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ನಿಮ್ಮೆಲ್ಲರ ಸಹಕಾರ, ಬೆಂಬಲದಿಂದ ಕಾರ್ಯಗತಗೊಳಿಸಿದ್ದೇನೆ ಎಂದಿದ್ದಾರೆ.

ನನ್ನ ಅಥವಾ ನನ್ನ ಕುಟುಂಬದ ಮೇಲೆಯಾಗಲಿ ಇದುವರೆಗೆ ರಾಜಕೀಯ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕೆ ಬರದಂತೆ ನನ್ನನ್ನು ನೀವು ನಡೆಸಿಕೊಂಡಿದ್ದು ನನ್ನ ಸೌಭಾಗ್ಯವೇ ಸರಿ. ಶಾಸಕನಾಗಿ ಇನ್ನಷ್ಟು ನಿಮ್ಮ ಸೇವೆ ಮಾಡಲು ನಾನು ಸಿದ್ದನಿದ್ದೇನೆ. ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುವ ಕಾಯಕದ ಜತೆಗೆ ನಾನು ನಂಬಿಕೊಂಡು ಬಂದ ಸಿದ್ಧಾಂತ, ಸ್ವಚ್ಚ & ಭ್ರಷ್ಟಾಚಾರ ರಹಿತ ರಾಜಕೀಯ ಅನುಷ್ಠಾನಕ್ಕೆ ಬದ್ದವಿದ್ದೇನೆ.

ಅಲ್ಲದೇ, ಭ್ರಷ್ಟಾಚಾರಿಗಳ ವಿರುದ್ಧ ಈ ಹಿಂದಿನಂತೆಯೇ ಧ್ವನಿ ಎತ್ತುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ನಂಬಿರುತ್ತೇನೆ. ಏನೇ ಬರಲಿ ಎಲ್ಲರೂ ಒಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ. ಧಾರವಾಡ ಕ್ಷೇತ್ರ ಶಿಕ್ಷಣ ಕಾಶಿ, ಸುಸಂಸ್ಕೃತ ಕ್ಷೇತ್ರ. ಹೀಗಾಗಿ ನನಗೆ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಈ ಕೊರೊನಾ ಸಂದರ್ಭದಲ್ಲಿ ಯಾರೂ ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಬಾರದೆಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಹಾಗೂ ಸಂಪುಟದ ಎಲ್ಲಾ ಸ್ನೇಹಿತರಿಗೂ ಶುಭಾಶಯ ಕೋರಿದ್ದಾರೆ.

ಓದಿ:ಸಚಿವರಾಗಿ ಜಿಲ್ಲೆಗೆ ಆಗಮಿಸಿದ ಈಶ್ವರಪ್ಪಗೆ ಅದ್ಧೂರಿ ಸ್ವಾಗತ ಕೋರಿದ ಕಾರ್ಯಕರ್ತರು

ABOUT THE AUTHOR

...view details