ಧಾರವಾಡ: ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ನಿವಾಸಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು. ಒಂದು ರಾಷ್ಟ್ರ, ಒಂದು ಸಂವಿಧಾನ ಅಭಿಯಾನ ಹಿನ್ನೆಲೆ ಸಚಿವರು ಸಾಹಿತಿ ಕಣವಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 370 ವಿಧಿ ರದ್ದು ಮತ್ತು ಒಂದು ರಾಷ್ಟ್ರ, ಒಂದು ಧ್ವಜದಿಂದ ಜನರಿಗಾಗುವ ಅಗತ್ಯ ಮತ್ತು ಪ್ರಯೋಜನದ ಕುರಿತು ಅರಿವು ಮೂಡಿಸಲು ರಾಜ್ಯ ಪ್ರವಾಸ ಕೈಗೊಂಡಿದ್ದೇವೆ. ಪ್ರಧಾನಮಂತ್ರಿಯವರ ಈ ನಿಲುವಿಗೆ ಚನ್ನವೀರ ಕಣವಿಯವರು ಬೆಂಬಲ ನೀಡಿದ್ದು ನಮಗೆ ಸ್ಫೂರ್ತಿ ತಂದಿದೆ ಎಂದರು.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಿಂದಿ ಭಾಷೆ ವಿಚಾರವಾಗಿ ಅಮಿತ್ ಶಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಮಾತೃ ಭಾಷೆಯ ಜೊತೆಗೆ ಒಂದು ಭಾಷೆಯಾಗಿ ಹಿಂದಿ ಕಲಿಯಬೇಕು ಎಂದಿದ್ದಾರೆ. ಹೀಗಾಗಿ ಆ ಬಗ್ಗೆ ಗೊಂದಲ ಬೇಡ. ನಮ್ಮ ನಿಲುವು ಕನ್ನಡಕ್ಕೆ ಪ್ರಥಮ ಆದ್ಯತೆ ಇರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉಡುಪಿ ಉಸ್ತುವಾರಿ ಕೈ ತಪ್ಪಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಶಾಸಕರೆಲ್ಲ ಹೋಗಿ ಸಿಎಂ ಭೇಟಿ ಮಾಡಿದ್ದಾರೆ. ಆದರೆ ಏನು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಇವತ್ತು ಹೋದ ನಂತರ ಎಲ್ಲವನ್ನು ನೋಡಿ ಸರಿ ಮಾಡುತ್ತೇವೆ. ದೊಡ್ಡ ಜಿಲ್ಲೆಯಾಗಿರುವ ಹಿನ್ನೆಲೆ ನನಗೆ ಒಂದೇ ಜಿಲ್ಲೆ ಕೊಟ್ಟಿರಬಹುದು. ಆ ಜಿಲ್ಲೆಯ ಶಾಸಕನಾದ ಕಾರಣ ದಕ್ಷಿಣ ಕನ್ನಡ ಕೊಟ್ಟಿದ್ದಾರೆ. ಕಾರ್ಯಕರ್ತನಾಗಿ ನನ್ನ ಕೆಲಸ ನಾನು ಮಾಡುವೆ ಎಂದರು.
ಮುಂದೆ ಸಂಪುಟ ವಿಸ್ತರಣೆಯಾದಾಗ ಮತ್ತೆ ಕೆಲವರಿಗೆ ಆದ್ಯತೆ ಕೊಡ್ತಾರೆ. ಸಿದ್ದರಾಮಯ್ಯ ಆಡಳಿತ ಪಕ್ಷದ ಲೋಪದೋಷ ನೋಡಿ ಟೀಕೆ ಮಾಡುವುದು ಸಹಜ. ಅವರೇನು ಹೊಗಳ್ತಾರೆ ಅಂತಾ ನಾವು ಭಾವಿಸಿಲ್ಲ. ಅವರ ಟೀಕೆಗಳಿಗೆ ತಕ್ಕ ಉತ್ತರ ಕೊಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿ ತೋರಿಸುತ್ತೇವೆ. ಡಿಕೆಶಿ-ಇಡಿ ವಿಚಾರ ಸಂಬಂಧ ಬಿಜೆಪಿಗೆ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಟಾಂಗ್ ನೀಡಿದರು.