ಕರ್ನಾಟಕ

karnataka

ETV Bharat / state

ನಾವು ಜಾತಿಗಣತಿ ವಿರೋಧಿಗಳಲ್ಲ, ವರದಿಯು ವಾಸ್ತವ, ಸತ್ಯದಿಂದ ಕೂಡಿರಬೇಕು: ಸಚಿವ ಈಶ್ವರ್ ಖಂಡ್ರೆ - ಸಂಸದ ಸಿದ್ದೇಶ್ವರ್

ದಾವಣಗೆರೆ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಸಚಿವ ಈಶ್ವರ್ ಖಂಡ್ರೆ ಜನಗಣತಿ, ಜಾತಿಗಣತಿ ಮೀಸಲಾತಿ ಕುರಿತು ಮಾತನಾಡಿದ್ದಾರೆ.

minister-eshwar-khandre
ಸಚಿವ ಈಶ್ವರ್ ಖಂಡ್ರೆ

By ETV Bharat Karnataka Team

Published : Dec 24, 2023, 10:50 AM IST

Updated : Dec 24, 2023, 11:41 AM IST

ಸಚಿವ ಈಶ್ವರ್ ಖಂಡ್ರೆ ಭಾಷಣ

ದಾವಣಗೆರೆ:ನಾವು ಜಾತಿಗಣತಿ ವಿರೋಧಿಗಳಲ್ಲ, ಜಾತಿ ಗಣತಿ ವಾಸ್ತವತೆ, ಸತ್ಯದಿಂದ ಕೂಡಿರಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು. ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ವಾಸ್ತವಾಂಶದಿಂದ ಕೂಡಿಲ್ಲ. ಈಗ ಮಾಡಿರುವ ಜಾತಿ ಜನಗಣತಿ ವೈಜ್ಞಾನಿಕವಾಗಿಲ್ಲ. ಹೀಗಾಗಿ ಲಿಂಗಾಯತ 93 ಒಳಪಂಗಡ ಸೇರಿಕೊಂಡು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ. ಸತ್ಯಾಸತ್ಯತೆ ಅರಿತು ಸರ್ಕಾರದಿಂದ ಮತ್ತೊಮ್ಮೆ ಜಾತಿ ಜನಗಣತಿ ಮಾಡಿಸಬೇಕು ಎಂದು ಸಿಎಂಗೆ ಹೇಳಿದ್ದೇನೆ ಎಂದರು.

ಮುಂದುವರೆದು, ನಾವು ಜಾತಿ ಜನಗಣತಿ ವಿರೋಧಿಗಳಲ್ಲ, ನಾವೆಲ್ಲ ಬಸವತತ್ವಕ್ಕೆ ಬೆಲೆ ಕೊಡುವವರು, ಆದರೆ ಜಾತಿ ಜನಗಣತಿ ವೈಜ್ಞಾನಿಕವಾಗಿ ಮಾಡಬೇಕು ಅನ್ನುವುದು ನಮ್ಮ ಒತ್ತಾಯ ಆಗಿದೆ. ಲಿಂಗಾಯುತರಲ್ಲಿ ಒಗ್ಗಟ್ಟಿನ ಕೊರತೆಯಿದೆ. ನಾವೆಲ್ಲ ಒಂದಾಗಿ ನಡೆದರೆ ರಾಜ್ಯ ಕೂಡ ಸರಿ ದಾರಿಯಲ್ಲಿ ಹೋಗುತ್ತದೆ. ವೀರಶೈವ ಲಿಂಗಾಯತರಿಗೆ ರಾಜ್ಯದಲ್ಲಿ ಒಬಿಸಿ ಪಟ್ಟಿಯಲ್ಲಿ 3ಬಿ, ಹಾಗೂ ಈಗಾಗಲೇ 5%ರಷ್ಟು ಮೀಸಲಾತಿ ಇದೆ. ಆದರೆ ದುದೃಷ್ಟವಶಾತ್​ ರಾಜ್ಯದಲ್ಲಿ ಇರುವ ಮೀಸಲಾತಿ ಕೇಂದ್ರದಲ್ಲಿ ಇಲ್ಲ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ 27% ಮೀಸಲಾತಿ ಇದೆ. ಆದರೆ 27 ಶೇಕಡದಲ್ಲಿ ಲಿಂಗಾಯುತ ಸಮುದಾಯ 1990ರಲ್ಲಿ ಬಿದ್ದು ಹೋಗಿದೆ.

ಹೀಗಾಗಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸುಮಾರು ವರ್ಷಗಳಿಂದ ಸತತವಾಗಿ ಅಧಿಕಾರಕ್ಕೆ ಬರುತ್ತಿರುವ ಸರ್ಕಾರ ಮೇಲೆ ಮೀಸಲಾತಿಗಾಗಿ ಒತ್ತಡ ಹಾಕಿದ್ದೇವೆ. ಮನವಿ ಕೂಡ ಮಾಡಿದ್ದೇವೆ. ನಮ್ಮ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಚಿನ್ನಪ್ಪರೆಡ್ಡಿ ಆಯೋಗ ಇದೆ. ಈ ಆಯೋಗದಲ್ಲಿ ನಮಗಿಂತ ಅಭಿವೃದ್ಧಿ ಹೊಂದಿರುವ ಸಮುದಾಯಗಳು ಈ ಒಬಿಸಿ ಪಟ್ಟಿಯಲ್ಲಿವೆ. ಅದೇ ಮಾನದಂಡದ ಮೇಲೆ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಸೇರಿಸಿ ಕೇಂದ್ರದ 27% ಒಬಿಸಿ ಪಟ್ಟಿಯಲ್ಲಿ ಸೇರಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಲು ಕೇಂದ್ರ ಒಪ್ಪಿಗೆ ನೀಡಬೇಕಾಗಿದೆ ಎಂಬುದು ನಮ್ಮ ಸಮುದಾಯದ ಹಕ್ಕೊತ್ತಾಯವಾಗಿದೆ ಎಂದರು.

ಎಲ್ಲರೂ ಒಗ್ಗೂಡಿ‌ ಹೋರಾಟ ನಡೆಸಬೇಕಿದೆ-ಸಂಸದ ಸಿದ್ದೇಶ್ವರ್:ಎಲ್ಲಾ ಗುರುಗಳು, ಸಮುದಾಯ ಒಗ್ಗಟ್ಟಾದರೆ‌ ಸವಲತ್ತು ಪಡೆಯಬಹುದು. ಎಲ್ಲರೂ ಒಗ್ಗೂಡಿ‌ ಹೋರಾಟ ನಡೆಸಬೇಕಿದೆ‌ ಎಂದು ಸಂಸದ ಜಿ.ಎಂ‌. ಸಿದ್ದೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮಹಾ ಅಧಿವೇಶನದಿಂದ ಮಹಾಸಭಾಕ್ಕೆ ಹೊಸ ಚೈತನ್ಯ ಬಂದಿದೆ. ಈ ಅಧಿವೇಶನದ ಆಯೋಜನೆಗಾಗಿ ಶಿವಶಂಕರಪ್ಪ ಅವರಿಗೆ ಅಭಿನಂದನೆಗಳು. ವೀರಶೈವ ಸಮಾಜವು ಎಲ್ಲ ಸಮಾಜಗಳನ್ನು ಅಪ್ಪಿಗೊಂಡಿದೆ. 83 ಜಾತಿಗೂ ಓರ್ವ ಗುರುಗಳಿದ್ದಾರೆ. ಜಾತಿಗಣತಿಯನ್ನು ನಾವು ಒಪ್ಪಲ್ಲ, ಜನಗಣತಿ ವಿಚಾರದಲ್ಲಿ ನಮ್ಮ ಅಧ್ಯಕ್ಷರಾದ ಶಿವಶಂಕರಪ್ಪನವರ ನಡೆ ಸರಿ ಇದೆ ಎಂದು ಜನಗಣತಿಗೆ ದನಿಗೂಡಿಸಿದರು.

ಶಾಮನೂರು ಶಿವಶಂಕರಪ್ಪ ಹೇಳಿಕೆ:ಶಿವಶಂಕರಪ್ಪನವರು ಮಾತನಾಡಿ, 24ನೇ ಮಹಾ ಅಧಿವೇಶನದ ಆತಿಥ್ಯ ವಹಿಸಿಕೊಂಡಿರುವುದು ನನ್ನ ಪುಣ್ಯ. ವಿವಿಧ ಗೋಷ್ಠಿಗಳು ನಮ್ಮ ಸಮಾಜದ ಜನರಿಗೆ ಅನುಕೂಲವಾಗಲಿವೆ. ಸಮಾವೇಶದಲ್ಲಿ ಭಾಗಿಯಾದ ಮಠಾಧೀಶರು, ರಾಜಕೀಯ ನಾಯಕರಿಗೆ ಧನ್ಯವಾದಗಳು. ಈ ಐತಿಹಾಸಿಕ ಅಧಿವೇಶನ ಸಮಾಜದ ಮುಂದಿನ ಅಭಿವೃದ್ಧಿ ಹಾಗೂ ಉನ್ನತಿಗೆ ಪೂರಕ ಎಂದರು.

ಇದನ್ನೂ ಓದಿ:ಮಹಾ ಅಧಿವೇಶನದಲ್ಲಿ ಬೆಣ್ಣೆದೋಸೆ ಘಮಲು: ದೋಸೆ ಸವಿದ ಸಾವಿರಾರು ಮಂದಿ, ಸಾಂಪ್ರದಾಯಿಕತೆ ಉಳಿಸಲು ದೋಸೋತ್ಸವ

Last Updated : Dec 24, 2023, 11:41 AM IST

ABOUT THE AUTHOR

...view details