ಧಾರವಾಡ :ಬಡತನ ರೇಖೆಗಿಂತ ಕೆಳಗಿರುವ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳು ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸರಳ ಸಾಮೂಹಿಕ ವಿವಾಹಕ್ಕೆ ಕರೆ.. ಡಾ.ಮಲ್ಲಿಕಾರ್ಜುನ ಮನಸೂರ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ "ಸಪ್ತಪದಿ" ಸರಳ ಸಾಮೂಹಿಕ ವಿವಾಹದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಮುಜರಾಯಿ ಇಲಾಖೆಯ ಧಾರ್ಮಿಕ ದತ್ತಿ ಇಲಾಖೆಯಿಂದ ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಸಾಮೂಹಿಕ ವಿವಾಹದಲ್ಲಿ ಆಸಕ್ತಿಯಿರುವ ಕುಟುಂಬಗಳ ಸಹಾಯಕ್ಕಾಗಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಡತನದಲ್ಲಿರುವ ಕುಟುಂಬವು ಒಂದು ವಿವಾಹವನ್ನು ಮಾಡುವಾಗ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ತೊಂದರೆಗೆ ಒಳಗಾಗುತ್ತದೆ. ಹೀಗಾಗಿ ಸರ್ಕಾರದ ಯೋಜನೆಯಾದ ಸಪ್ತಪದಿ ಸರಳ ಸಾಮೂಹಿಕ ವಿವಾಹದ ಮೂಲಕ ಬಡಜನರಿಗೆ ಅನುಕೂಲವಾಗಲಿದೆ. ಸರಳ ಸಾಮೂಹಿಕ ವಿವಾಹವಾಗುವ ವಧುವಿಗೆ ಧಾರೆ ಸೀರೆಗೆಂದು 10 ಸಾವಿರ ರೂ. ಹಾಗೂ 8 ಗ್ರಾಂ. ಚಿನ್ನದ ಮಾಂಗಲ್ಯವನ್ನು ಮತ್ತು ವರನಿಗೆ 5 ಸಾವಿರ ರೂ. ಸೇರಿದಂತೆ ಒಂದು ಜೋಡಿ ವಧು-ವರನಿಗೆ ಒಟ್ಟು 55 ಸಾವಿರ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ವಿವಾಹಕ್ಕೆ ಬರುವಂತಹ ವಧು-ವರರ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಸಂಬಂಧಿಸಿದ ದೇವಾಲಯದ ನಿಧಿಯಿಂದ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಧಾರವಾಡದ ಸೋಮೇಶ್ವರ ದೇವಾಲಯ, ಹುಬ್ಬಳ್ಳಿಯ ಸಿದ್ಧಾರೂಢ ಮಠ, ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಮಾರುತಿ ದೇವಸ್ಥಾನ, ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ ಹಾಗೂ ಕಲಘಟಗಿಯ ಗ್ರಾಮದೇವತೆ ದೇವಸ್ಥಾನದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹಗಳು ನಡೆಯಲಿವೆ. ಸಪ್ತಪದಿ ಸರಳ ಸಾಮೂಹಿಕ ವಿವಾಹಗಳು ಏಪ್ರೀಲ್ 26 ರ ಅಕ್ಷಯ ತೃತೀಯ ಮುಹೂರ್ತದಲ್ಲಿ ಮತ್ತು ಮೇ 24 ರಂದು ಎರಡು ಹಂತದಲ್ಲಿ ನಡೆಯಲಿವೆ. ಮೊದಲ ಹಂತದ ಏಪ್ರೀಲ್ 26 ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹವಾಗ ಬಯಸುವವರು ಸಂಬಂಧಿಸಿದ ತಾಲೂಕಿನ ತಹಶೀಲ್ದಾರ ಕಚೇರಿಗಳಲ್ಲಿ ಮಾರ್ಚ್ 27 ರೊಳಗಾಗಿ ಅರ್ಜಿ ಸಲ್ಲಿಸಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯದ ವಿಧಾನಸಭೆಯ ಹಾಗೂ ವಿಧಾನ ಪರಿಷತ್ ಶಾಸಕರು, ಲೋಕಸಭಾ ಸದಸ್ಯರು ಭಾಗವಹಿಸಲು ಇಲಾಖೆಯಿಂದ ಕೋರಲಾಗಿದೆ. ಅನೇಕ ಧರ್ಮಗುರುಗಳು, ಮಠಾಧೀಶರು ಸಪ್ತಪದಿ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದಾರೆ ಹಾಗೂ ಏಪ್ರಿಲ್ 26 ರಂದು ನಡೆಯುವ ಸರಳ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಈ ಯೋಜನೆಯನ್ನು ಯಶಸ್ವಿಗೊಳಿಸುವ ಮೂಲಕ ಸಮಾಜದಲ್ಲಿ ಹೊಸದೊದು ಬದುಕಿಗೆ ಅಡಿಯಾಗಬೇಕು ಎಂದು ತಿಳಿಸಿದರು.