ಕರ್ನಾಟಕ

karnataka

ETV Bharat / state

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಎಳ್ಳುನೀರು ಬಿಟ್ರಾ ಕಾಂಗ್ರೆಸ್​ ನಾಯಕರು...!! - etv bharat

ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದಾಗಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಸದ್ಯಕ್ಕೆ ನಿಂತಂತಾಗಿರೋದಂತೂ ಸತ್ಯ. ಕಾರಣ ಏನೇನಿರಬಹುದು? ಅನ್ನೋದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ರಂಭಾಪುರ ಶ್ರೀಗಳನ್ನು ಭೇಟಿಯಾದ ಧಾರವಾಡ ಲೋಕಸಭಾ ಚುನಾವಣಾ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ.

By

Published : Apr 10, 2019, 2:44 PM IST

ಧಾರವಾಡ:ಕಳೆದ ವರ್ಷ ನಡೆದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮುಗಿದು ಹೋದಂತಾಗಿದೆ. ಈ ಹೋರಾಟಕ್ಕೆ ಸಂಬಂಧಿಸಿದಂತೆ ಅನೇಕ ರಾಜಕೀಯ ಸ್ಥಿತ್ಯಂತರಗಳು ನಡೆದು, ಕೊನೆಗೆ ಇದಕ್ಕೆ ಸಹಕಾರ ನೀಡಿದ್ದ ರಾಜಕೀಯ ಮುಖಂಡರೇ ಸಾಕು ಸಾಕಪ್ಪಾ ಎಂದು ಈ ಹೋರಾಟದಿಂದ ಹಿಂದೆ ಸರಿದರು.ಅದರಲ್ಲಿ ಕೆಲವರು ಬಹಿರಂಗವಾಗಿ ನಾವು ಇದರಲ್ಲಿ ತಲೆ ಹಾಕಿದ್ದು ತಪ್ಪು ಅಂತಾನೂ ಹೇಳಿಕೊಂಡಿದ್ದರು. ಆದರೆ, ಅದರ ನಾಯಕತ್ವ ವಹಿಸಿಕೊಂಡಿದ್ದ ವಿನಯ ಕುಲಕರ್ಣಿ ಮಾತ್ರ ಆ ಬಗ್ಗೆ ಯಾವುದೇ ಮಾತೇ ಆಡಿರಲಿಲ್ಲ. ಇದೀಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಅವರ ಹೋರಾಟಕ್ಕೆ ತಿಲಾಂಜಲಿ ಇಟ್ಟಿದ್ದಾರೆ ಎಂಬ ವಾತಾವರಣಕ್ಕೆ ಸಾಕ್ಷಿಯಾಗಿದ್ದಾರೆ.

ಕಳೆದ ವರ್ಷ ಲಿಂಗಾಯತ ಪ್ರತ್ಯೇಕ ಹೋರಾಟದ ಮಾತು ಮುಗಿಲೆತ್ತರಕ್ಕೆ ಮುಟ್ಟಿತ್ತು. ರಾಜ್ಯದ ಅನೇಕ ಕಡೆಗಳಲ್ಲಿ ಲಕ್ಷಾಂತರ ಅನುಯಾಯಿಗಳೊಡನೆ ಲಿಂಗಾಯತ ಶ್ರೀಗಳು, ನಾಯಕರು ಹೋರಾಟ ಮಾಡಿ, ನಾನೂ ಲಿಂಗಾಯತ ಎಂದು ಅವರಿವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರ ಹಿಂದೆ ಸಿದ್ದರಾಮಯ್ಯ ಅವರ ರಾಜಕೀಯ ಲೆಕ್ಕಾಚಾರವೂ ಇತ್ತು. ಆದರೆ, ಈ ಹೋರಾಟ ಆಗ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತು ಅಂತಾ ಹೇಳಲಾಗಿತ್ತು. ಆದರೆ, ಅದ್ಯಾವುದೂ ನಡೆಯದೇ ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಅನೇಕ ಕೈ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಹೋಗಿದ್ದು ಇದೀಗ ಇತಿಹಾಸ.

ಅಲ್ಲದೇ ಕಾಂಗ್ರೆಸ್​ ಪಾಲಿಗೆ ಈ ಹೋರಾಟ ಭಾರೀ ಹಿನ್ನೆಡೆ ತಂದಿದ್ದಲ್ಲದೇ ಅದನ್ನು ಬಹಿರಂಗವಾಗಿ ಡಿಕೆಶಿ ಅಂಥವರೇ ಒಪ್ಪಿಕೊಂಡಿದ್ದರು. ಆದರೆ, ಈ ವೇಳೆ ರಾಷ್ಟ್ರೀಯ ಬಸವ ಸೇನೆ ಎಂಬ ಸಂಘಟನೆ ಹುಟ್ಟು ಹಾಕಿ, ಅದರ ಅಧ್ಯಕ್ಷರಾಗಿದ್ದ ವಿನಯ ಕುಲಕರ್ಣಿ ಮಾತ್ರ ಹೋರಾಟ ಮುಗಿದಿಲ್ಲ ಅಂತಾ ಹೇಳುತ್ತಲೇ ಬಂದಿದ್ದರು. ಆದರೆ, ಇದೀಗ ಅವರೂ ಸಹ ಈ ಹೋರಾಟವನ್ನು ಬಹುತೇಕ ಕೈಬಿಟ್ಟಿದ್ದಾರೆ ಅನ್ನಿಸುತ್ತೆ. ಧಾರವಾಡ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿಯಾಗಿರೋ ವಿನಯ ಕುಲಕರ್ಣಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು, ವೀರಸೋಮೇಶ್ವರ ಶಿವಾಚಾರ್ಯರನ್ನು ಭೇಟಿಯಾಗೋ ಮೂಲಕ ಈ ಹೋರಾಟಕ್ಕೆ ತಿಲಾಂಜಲಿ ಇಟ್ಟಿದ್ದಾರೆ.

ರಂಭಾಪುರ ಶ್ರೀಗಳನ್ನು ಭೇಟಿಯಾದ ಧಾರವಾಡ ಲೋಕಸಭಾ ಚುನಾವಣಾ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ.

ಅಷ್ಟೇ ಅಲ್ಲದೇ ಅವರು ತಮ್ಮ ಗುರುಗಳು, ಅವರ ಆಶೀರ್ವಾದವನ್ನು ಪಡೆದಿರೋದಾಗಿ ಬಹಿರಂಗವಾಗಿ ಹೇಳೋ ಮೂಲಕ ಹೋರಾಟಕ್ಕೆ ಕೊನೆ ಮೊಳೆ ಹೊಡೆದಿದ್ದಾರೆ. ಈ ಮುಂಚೆಯೂ ವಿನಯ ಕುಲಕರ್ಣಿ ಅವರ ಆತ್ಮೀಯರು ರಂಭಾಪುರ ಶ್ರೀಗಳನ್ನು ಭೇಟಿಯಾಗುವಂತೆ ಹೇಳುತ್ತಲೇ ಇದ್ದರು. ಅದಾಗಲೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ಹೋರಾಟದಿಂದ ತಮಗೆ ತೀವ್ರ ಹಿನ್ನೆಡೆಯಾಗಿರೋದಾಗಿ ಒಪ್ಪಿಕೊಂಡಿತ್ತು.

ಅದರೂ ವಿನಯ್​, ಮಾತ್ರ ತಮ್ಮ ಪಟ್ಟನ್ನು ಸಡಿಲಿಸಿರಲಿಲ್ಲ. ಆದರೆ, ಇದೀಗ ಲೋಕಸಭಾ ಚುನಾವಣೆಯಲ್ಲಿ ತಮ್ಮ ವರಸೆ ಬದಲಿಸಿದ್ದಾರೆ. ನೇರವಾಗಿ ಹೋಗಿ ಪಂಚ ಪೀಠದಲ್ಲೊಂದಾದ ರಂಭಾಪುರ ಮಠದ ಶ್ರೀಗಳನ್ನು ಭೇಟಿಯಾಗಿ, ಅವರ ಆಶೀರ್ವಾದ ಪಡೆದಿದ್ದಾರೆ. ಇದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಏಕೆಂದರೆ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಪಂಚ ಪೀಠಾಧ್ಯಕ್ಷರ ನಿರ್ಧಾರ ಸಾಕಷ್ಟು ಚರ್ಚೆಯಾಗಿತ್ತು. ಧರ್ಮವನ್ನು ಒಡೆಯಲು ಹೋಗಿ ಕೈ ಸುಟ್ಟುಕೊಂಡು, ಮತ್ತೆ ಇದೀಗ ಶ್ರೀಗಳ ಆಶೀರ್ವಾದಕ್ಕೆ ಬರುವ ಇವರದ್ದು ನಾಟಕ ಅನ್ನೋದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತುಗಳಾಗಿವೆ.

ಈ ಮಧ್ಯೆ ವಿನಯ್​, ಶ್ರೀಗಳನ್ನು ಭೇಟಿಯಾಗಿ ಬಂದ ಬಳಿಕ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್​ ಜೋಶಿ ಕೂಡ ಹೋಗಿ ರಂಭಾಪುರಿ ಶ್ರೀಗಳ ಭೇಟಿಯಾಗಿ ಬಂದಿದ್ದಾರೆ. ಮುಂಚೆಯಿಂದಲೂ ಬಿಜೆಪಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರೋ ಸ್ವಾಮಿಗಳು ಚುನಾವಣೆ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಆದರೆ ಜನರಿಗೆ ಯಾರಿಗೆ ಮತ ಹಾಕಬೇಕು, ಯಾರು ಏನೇನು ಮಾಡಿದ್ದಾರೆ ಅನ್ನೋದು ಗೊತ್ತಿದೆ ಅಂತಾ ತೀರಾ ಖಾಸಗಿಯಾಗಿ ಹೇಳಿದ್ದಾರೆ ಅನ್ನೋದು ಇದೀಗ ಗುಟ್ಟಾಗಿ ಉಳಿದಿಲ್ಲ.

ABOUT THE AUTHOR

...view details